*ಶ್ರೀಕೃಷ್ಣ ಜಗತ್ತಿಗೆ ಪ್ರೀತಿಯನ್ನು ಹಂಚಿದ, ಜ್ಞಾನವನ್ನು ಕೊಟ್ಟ: ಗೋವಿಂದ ದೇವ ಗಿರಿಜೀ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಶ್ರೀಕೃಷ್ಣ ಪರಿಪೂರ್ಣ ವ್ಯಕ್ತಿ. ತನ್ನ ವ್ಯಕ್ತಿತ್ವದ ಎಲ್ಲಾ ಆಯಾಮದಲ್ಲಿ ಪರಿಪೂರ್ಣ. ಅವನು ಪೂರ್ಣ ಅವತಾರ. ಅವನ ಗೀತೆಯನ್ನು ಓದುವುದಲ್ಲ ಅನುಭವಿಸಬೇಕು. ಭಗವದ್ಗೀತೆ ಆತ್ಮಾನುಭವದ ಶಾಸ್ತ್ರ. ಅವನು ಜಗತ್ತಿಗೆ ಪ್ರೀತಿಯನ್ನು ಹಂಚಿದ. ಜ್ಞಾನವನ್ನು ಕೊಟ್ಟ ಎಂದು ಶ್ರೀರಾಮಾಜನ್ಮಭೂಮಿ ನ್ಯಾಸ ಅಯೋಧ್ಯೆ ಯ ಖಜಾಂಚಿ, ಮಥುರಾ ಕೃಷ್ಣ ಜನ್ಮಭೂಮಿ ಉಪಾಧ್ಯಕ್ಷ ಹಾಗೂ ಗೀತಾಪರಿವಾರದ ಸಂಸ್ಥಾಪಕರಾದ ಶ್ರೀ ಗೋವಿಂದ ದೇವ ಗಿರಿಜೀ ಮಹಾರಾಜ್ ಹೇಳಿದರು.
ಎಸಿಪಿಆರ್ ಶ್ರೀ ಗುರುದೇವ ರಾನಡೆ ಮಂದಿರ ಆಯೋಜಿಸಿದ್ದ ಮೂರು ದಿನಗಳ ಉಪನ್ಯಾಸ ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣ ನೀತಿ ಕುರಿತು ಅವರು ಉಪನ್ಯಾಸ ನೀಡುತ್ತಿದ್ದರು.
ಅವರವರ ಭಾವಕ್ಕೆ, ಭಕ್ತಿಗೆ, ಇನ್ನೂ ಹೆಚ್ಚಾಗಿ ದ್ವೇಷಕ್ಕೂ ಸಹ ಶ್ರೀಕೃಷ್ಣ ಸಮಭಾವ ತೋರಿದ್ದ. ಎಲ್ಲರನ್ನೂ ಉದ್ಧರಿಸುವ ಅವತಾರದ ಉದ್ದೇಶವನ್ನು ಬಹಳ ಜಾಣ್ಮೆಯಿಂದ ನಿಭಾಯಿಸಿದ. ಶರಣು ಬಂದವರನ್ನು ಎಂದೂ ರಕ್ಷಿಸದೆ ಬಿಡಲಿಲ್ಲ. ರಾಕ್ಷಸರನ್ನು ಕೊಂದಿದ್ದು ಲೋಕವನ್ನು ರಕ್ಷಿಸಿ ಅವರನ್ನೂ ಉದ್ಧರಿಸಲು. ಕೃಷ್ಣನನ್ನು ಟೀಕಿಸಿದವರು ಅವನ ವಿಭೂತಿಯನ್ನು ಅರಿಯಲಿಲ್ಲ. ಯೋಗೀಜನರು ಅವನ ಅವತಾರವನ್ನು ಅರಿತರು. ನಾವು ಅವನ ಜೀವನ ಪ್ರೀತಿ, ಸರ್ವಸಮಭಾವ ನಂಬಿದವರಿಗೆ ಮುಕ್ತಿ ಕೊಡುವ ಅವತಾರವನ್ನು ಅರಿಯಬೇಕು. ಅದು ನಮಗೆ ದಾರಿದೀಪ.” ಎಂದು ನುಡಿದರು.
ಸಂಸ್ಥೆಯ ಟ್ರಸ್ಟೀ ಡಾ. ಅಶ್ವಿನೀ ಜೋಗ್, ಸೊಲ್ಲಾಪುರ ಸ್ವಾಗತಿಸಿದರು. ಶ್ರೀ ಗುರುದೇವರ ಅನುಯಾಯಿಗಳಾದ ಸುಹಾಸ್ ಮತ್ತು ವಂದನಾ ಜೋಶಿ ದಂಪತಿಗಳು ಗುರುವಂದನೆಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಸ್ವಾಮೀಜಿಗಳನ್ನು ಬೆಳಗಾವಿಗೆ ಕರೆತರಲು ಸಹಕರಿಸಿದ ಪುಣೆಯ ಚಾರ್ಟರ್ಡ್ ಅಕೌಂಟೆಂಟ್ .ರಾಜಗೋಪಾಲ್ ಮಣಿಯಾರ್ ಹಾಗೂ ಮಹಾಂತೇಶ್ ಕವಟಗಿಮಠ ಅವರನ್ನು ಸನ್ಮಾನಿಸಲಾಯಿತು. ಸ್ವಾಮೀಜಿಗಳು ಮಾರುತಿ ಝಿರಲಿ ಅವರನ್ನು ಸನ್ಮಾನಿಸಿದರು.
ಕೊನೆಯಲ್ಲಿ, ಸಂಸ್ಥೆಯ ಕಾರ್ಯದರ್ಶಿ ಮಾರುತಿ ಬಿ. ಝಿರಲಿ ಮಾತನಾಡಿ, ಸ್ವಾಮೀಜಿಗಳು ನಮಗೆ ಶ್ರೀ ಕೃಷ್ಣನನ್ನು ಮನಸ್ಸಿಗೆ ತಿಳಿಯುವಂತೆ ವಿವರಿಸಿದರು. ಶ್ರೀ ಗುರುದೇವರು ಕೃಷ್ಣನ ಭಗವದ್ಗೀತೆ ಅನುಭಾವ ಸಾಹಿತ್ಯದಲ್ಲಿ ಅತೀ ಉನ್ನತ ಮಟ್ಟದ್ದು ಎಂದು ಹೇಳಿದ್ದಾರೆ. ಗುರುದೇವರು ಸ್ಥಾಪಿಸಿದ ಎಸಿಪಿಆರ್ ಸಂಸ್ಥೆ ದೇವನೊಬ್ಬ ಜಗ ಒಂದೇ ಮಾನವೀಯತೆ ಒಂದೇ ಎಂಬ ಸಿದ್ಧಾಂತದ ಮೇಲೆ ಕಾರ್ಯ ನಿರ್ವಹಿಸುತ್ತಿದೆ ಎಂದು ನುಡಿದರು.