Kannada NewsKarnataka NewsNationalPolitics

*ಸಿದ್ದರಾಮಯ್ಯ ಅವರದು ಹೆದರುವ ರಕ್ತವಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: ಮುಡಾ ಹಗರಣದ ತನಿಖೆಗೆ ಮುಖ್ಯಮಂತ್ರಿಗಳೇ ನ್ಯಾಯಾಂಗ ಸಮಿತಿ ರಚಿಸಿ ತನಿಖೆಗೆ ಆದೇಶ ನೀಡಿದ್ದಾರೆ. ನಲವತ್ತು ವರ್ಷ ರಾಜಕಾರಣ ಮಾಡಿಕೊಂಡು ಬಂದಿರುವ ಅವರು ಹೆದರುವವರಲ್ಲ, ಅದು ಅವರ ರಕ್ತದಲ್ಲಿಯೇ ಇಲ್ಲ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ಕಲಬುರ್ಗಿಯಲ್ಲಿ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು ತಪ್ಪು ಮಾಡದಿದ್ದರೇ ಸಿಎಂ ಏಕೆ ಹೆದರಬೇಕು ಎನ್ನುವ ಜಗದೀಶ್ ಶೆಟ್ಟರ್ ಅವರ ಹೇಳಿಕೆ ಬಗ್ಗೆ ಕೇಳಿದಾಗ “ಯಾರು ಹೆದರಿದ್ದಾರೆ. ಶೆಟ್ಟರ್ ಅವರಿಗೆ ಹೆದರಿಕೆ ಇರಬೇಕು. ನಾವು ಈ ನೆಲದ ಕಾನೂನಿಗೆ ಗೌರವ ನೀಡುತ್ತೇವೆ. ಸಿಎಂ ಅವರ ತಪ್ಪು ಇಲ್ಲದಿರುವ ಕಾರಣಕ್ಕೆ  ಹೈಕೋರ್ಟ್ ಪ್ರಾಸಿಕ್ಯೂಷನ್ ಗೆ ತಡೆ ನೀಡಿದೆ. ಈ ಹಿಂದೆ ರಚನೆ ಮಾಡಿರುವ ಆಯೋಗದಂತೆ ನ್ಯಾಯಾಂಗ ತನಿಖೆ ನಡೆಯಲಿದೆ” ಎಂದು ತಿಳಿಸಿದರು.

ಐದು ವರ್ಷವೂ ಸಿದ್ದರಾಮಯ್ಯ ಐದು ವರ್ಷದ ಅವಧಿ ಪೂರ್ಣಗೊಳಿಸುತ್ತಾರೆಯೇ ಎಂದು ಪ್ರಶ್ನಿಸಿದಾಗ “ನಮ್ಮ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ 10 ವರ್ಷಗಳ ಕಾಲ ಅಧಿಕಾರದಲ್ಲಿ ಇರುತ್ತದೆ” ಎಂದರು.

ರಾಜ್ಯಪಾಲರು ದಲಿತ ಎನ್ನುವ ಕಾರಣಕ್ಕೆ ಕಾಂಗ್ರೆಸ್ ಅವಮಾನ ಮಾಡುತ್ತಿದೆ ಎಂದು ಕೇಳಿದಾಗ “ಅವರನ್ನು ರಾಜ್ಯಪಾಲರ ಹುದ್ದೆಗೆ ಕೂರಿಸಿರುವುದು ಸಂವಿಧಾನವೇ ಹೊರತು ಜಾತಿಯಲ್ಲ” ಎಂದರು.

ರಾಜ್ಯಪಾಲರನ್ನು ನಿಂದಿಸಿದವರ ಮೇಲೆ ಪೊಲೀಸರು ಸ್ವಯಂಪ್ರೇರಿತರಾಗಿ ಎಸ್ ಇ, ಎಸ್ ಟಿ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎನ್ನುವ ವಿರೋಧ ಪಕ್ಷಗಳ ನಾಯಕರ ಹೇಳಿಕೆ ಬಗ್ಗೆ ಕೇಳಿದಾಗ “ಕಲಬುರ್ಗಿಯಲ್ಲಿ ನಿರ್ಮಾಣವಾಗಿರುವ ಹೊಸ ಆಸ್ಪತ್ರೆಗೆ ಅವರನ್ನು ಕರೆದುಕೊಂಡು ಬಂದು ಸೇರಿಸಲು ಹೇಳಿ” ಎಂದು ಹೇಳಿದರು.

2011 ರಲ್ಲಿ ಯಡಿಯೂರಪ್ಪ ಅವರನ್ನು ಜೈಲಿಗೆ ಹಾಕಿಸಲಾಯಿತು ಈಗ ಅದೇ ಸನ್ನಿವೇಶ ಸೃಷ್ಟಿಯಾಗಿದೆ ಎನ್ನುವ ಬಿಜೆಪಿ ಸಾಮಾಜಿಕ ಜಾಲತಾಣದ ಪೋಸ್ಟಿನ ಬಗ್ಗೆ ಕೇಳಿದಾಗ “ಅವರನ್ನು ಜೈಲಿಗೆ ಹಾಕಿಸಿದ್ದು ಕಾಂಗ್ರೆಸ್ ಅಲ್ಲ. ಇದೇ ದೇವೇಗೌಡರು, ಕುಮಾರಸ್ವಾಮಿ ನಾವಲ್ಲ” ಎಂದು ಹೇಳಿದರು.

ಕುಮಾರಸ್ವಾಮಿ ಅವರ ವಿರುದ್ದ ಲೋಕಾಯುಕ್ತ ದೋಷಾರೋಪ ಪಟ್ಟಿ ಸಲ್ಲಿಕೆಗೆ ರಾಜ್ಯಪಾಲರ ಅನುಮತಿ ಕೇಳಿರುವ ವಿಚಾರದ ಬಗ್ಗೆ ಪ್ರಶ್ನಿಸಿದಾಗ “ಇದರ ಬಗ್ಗೆ ನನಗೆ ಮಾಹಿತಿಯಿಲ್ಲ. ಸ್ವತಃ ನನ್ನ ಕಣ್ಣಿನಿಂದ ನೋಡಬೇಕು. ಯಾವುದಾದರೂ ದಾಖಲೆ ಇದ್ದರೆ ನೀಡಿ. ನಾನು (ಮಾಧ್ಯಮದವರನ್ನು) ನಿಮ್ಮನ್ನು ಆಶ್ರಯಿಸಲು ಆಗುವುದಿಲ್ಲ” ಎಂದರು.

ಸಿಎಂ ದೆಹಲಿ ಭೇಟಿಯ ಬಗ್ಗೆ ಕೇಳಿದಾಗ “ಹೈಕಮಾಂಡಿಗೆ ವಾಸ್ತವಾಂಶ ತಿಳಿಸಬೇಕು ಎಂದು ಇಬ್ಬರೂ ಮಾತನಾಡಿಕೊಂಡಿದ್ದೆವು. ಅದಕ್ಕೆ ದೆಹಲಿಗೆ ಇಬ್ಬರೂ ತೆರಳೋಣ ಎಂದು ಮಾತುಕತೆ ನಡೆಸಿದ್ದೇವೆ” ಎಂದರು.

ಬಿಜೆಪಿ ಹೊರತಾದ ಪಕ್ಷಗಳು ಆಡಳಿತವಿರುವ ರಾಜ್ಯಗಳಲ್ಲಿ ರಾಜ್ಯಪಾಲರ ಹಸ್ತಕ್ಷೇಪದ ವಿರುದ್ದ ಹೋರಾಟ ರೂಪಿಸಲು ಎಲ್ಲರನ್ನು ಒಗ್ಗೂಡಿಸಲು ದೆಹಲಿಗೆ ಸಿದ್ದರಾಮಯ್ಯ ಬೇಟಿ ನೀಡುತ್ತಿದ್ದಾರೆ ಎಂದಾಗ “ಮಾಧ್ಯಮಗಳಲ್ಲಿಯೇ ಎಲ್ಲವೂ ಬರುತ್ತಿದೆ. ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು ಎಲ್ಲೆಲ್ಲಿ ಏನಾಗುತ್ತಿದೆ ಎಂಬುದು ನೀವು (ಮಾಧ್ಯಮಗಳು) ನೋಡಿದಲ್ಲವೇ?” ಎಂದು ಮರು ಪ್ರಶ್ನಿಸಿದರು.

ಹೈಕಮಾಂಡ್ ಸಿದ್ದರಾಮಯ್ಯ ಅವರನ್ನು ಬೆಂಬಲಿಸಬೇಕು ಎನ್ನುವ ಸತೀಶ್ ಜಾರಕಿಹೊಳಿ ಅವರ ಹೇಳಿಕೆ ಬಗ್ಗೆ ಕೇಳಿದಾಗ “ಇಡೀ ಪಕ್ಷ, ಮಲ್ಲಿಕಾರ್ಜುನ ಖರ್ಗೆ ಅವರು, ರಾಹುಲ್ ಗಾಂಧಿ ಅವರು ಎಲ್ಲಾ ನಾಯಕರು ಅವರ ಪರವಾಗಿ ನಿಂತಿದ್ದೇವೆ” ಎಂದರು.

ಪರಮೇಶ್ವರ್ ಅವರು ವಿದೇಶಿ ಪ್ರವಾಸದ ಬಗ್ಗೆ ಕೇಳಿದಾಗ “ನಾನು ಹೋಗುತ್ತಿದ್ದೇನೆ” ಎಂದಾಗ ಯಾವಾಗ ಹೋಗುತ್ತಿದ್ದೀರಿ ಎಂದು ಮರುಪ್ರಶ್ನಿಸಿದಾಗ “ಕೋರ್ಟಿಗೆ ಅರ್ಜಿ ಹಾಕಿದ್ದೇನೆ, ತಿಳಿಸುತ್ತೇನೆ” ಎಂದರು.

ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಸಂಘರ್ಷ ಎಲ್ಲಿಗೆ ತಲುಪಲಿದೆ ಎಂದು ಪ್ರಶ್ನಿಸಿದಾಗ “ನಮ್ಮ ಮುಖ್ಯಮಂತ್ರಿಗಳು ತಪ್ಪು ಮಾಡಿಲ್ಲ. ಎಲ್ಲಿ ನ್ಯಾಯ ಇದೆಯೋ ಅದಕ್ಕೆ ಜಯ ದೊರಕಲಿದೆ. ಮುಡಾದವರು ಸಿಎಂ ಪತ್ನಿ ಅವರ ಜಮೀನು ಆಕ್ರಮಿಸಿಕೊಂಡರು, ಅದಕ್ಕೆ ಅವರು ಪರಿಹಾರ ಪಡೆದರು. ಪರಿಹಾರ ನೀಡಿ ಎಂದು ಸಿದ್ದರಾಮಯ್ಯ ಅವರು ಪತ್ರ ಬರೆದಿಲ್ಲ ಹಾಗೂ ಇವರ ಕಾಲದಲ್ಲಿ ಇದು ನಡೆದಿಲ್ಲ. ಬಿಜೆಪಿಯವರ ಕಾಲದಲ್ಲಿಯೇ ಸೈಟುಗಳ ಹಂಚಿಕೆಯಾಗಿದೆ” ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button