*ರಾಜ್ಯಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮ: ವೈಯಕ್ತಿಕ ಸ್ವಾರ್ಥಬದಿಗೊತ್ತಿ ಸಹಕಾರ ಕ್ಷೇತ್ರದ ಬಲವರ್ಧನೆ ಅಗತ್ಯ: ಜಗದೀಶ ಕವಟಗಿಮಠ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸಹಕಾರ ಕ್ಷೇತ್ರವು ವೈಯಕ್ತಿಕ ಸ್ವಾರ್ಥಗಳಿಂದ ಕ್ಷೀಣಿಸುತ್ತಾ ಹೊರಟಿದೆ. ಆದ್ದರಿಂದ ವೈಯಕ್ತಿಕ ಸ್ವಾರ್ಥಗಳನ್ನು ಬದಿಗೊತ್ತಿ ಜನಸಾಮಾನ್ಯರಿಗೆ ಸಹಕಾರಿ ಸೇವೆಗಳನ್ನು ತಲುಪಿಸಬೇಕು ಎಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ, ಉಪಾಧ್ಯಕ್ಷರಾದ ಜಗದೀಶ್ ಕವಟಗಿಮಠ ಕರೆ ನೀಡಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ. ಬೆಂಗಳೂರು, ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಸಹಕಾರ ಇಲಾಖೆ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಸಂಕಮ್ ಹೋಟೆಲ್ ನಲ್ಲಿ ಮಂಗಳವಾರ(ಮಾ.18) ಏರ್ಪಡಿಸಲಾಗಿದ್ದ ಬೆಳಗಾವಿ ವಿಭಾಗದ ಪಟ್ಟಣ ಸಹಕಾರ ಬ್ಯಾಂಕುಗಳ ಪದಾಧಿಕಾರಿಗಳ ಮತ್ತು ಹಿರಿಯ ಅಧಿಕಾರಿಗಳಿಗೆ ರಾಜ್ಯ ಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜನಸಾಮಾನ್ಯರ ಸಮಸ್ಯೆಗಳಿಗೆ ಬೇಗನೆ ಸ್ಪಂದಿಸುವುದೇ ನಮ್ಮ ಬ್ಯಾಂಕುಗಳು ಎಂದು ತಿಳಿಸಿದ ಅವರು, ಪ್ರಸ್ತುತ ಸನ್ನಿವೇಶದಲ್ಲಿ ಸೈಬರ್ ಅಪರಾಧಗಳ ಬಗ್ಗೆಯೂ ತಿಳಿದುಕೊಂಡು ಈ ಬಗ್ಗೆ ಜನರಿಗೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ರಾಜ್ಯ ಸಹಕಾರ ಮಹಾಮಂಡಳ ಸದಾ ನಿಮ್ಮ ಸೇವೆಗೆ ಸಿದ್ದವಿರುತ್ತದೆ. ಮಹಾಮಂಡಳವು ಸಹಕಾರ ತತ್ವದಡಿ ಇರುವಂತ ಕ್ರೆಡಿಟ್, ಅರ್ಬನ್ ಬ್ಯಾಂಕ್ ಮತ್ತಿತರ ಸಂಸ್ಥೆಗಳಿಗೆ ಸರಕಾರ ಮತ್ತು ಮಾರುಕಟ್ಟೆಯಲ್ಲಿ ನಡೆಯುವಂತಹ ಯಾವುದೇ ಬದಲಾವಣೆಗಳ ಪರಿಸ್ಥಿಗಳ ಅನುಗುಣವಾಗಿ ಬ್ಯಾಂಕುಗಳಿಗೆ ಅಥವಾ ಸಂಸ್ಥೆಗಳಿಗೆ ತರಬೇತಿ ಕೊಡುವ ಕಾರ್ಯಗಳನ್ನು ನಿರಂತರವಾಗಿ ಮಾಡುತ್ತಾ ಬಂದಿದೆ ಎಂದು ಜಗದೀಶ್ ಕವಟಗಿಮಠ ಅವರು ತಿಳಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ರಾಜ್ಯ ಸಹಕಾರ ಮಹಾಮಂಡಳದ ವೃತ್ತಿಪರ ನಿರ್ದೇಶಕರಾದ ಬಾಪೂಗೌಡ ಪಾಟೀಲ ಅವರು, “ಸಹಕಾರ ಸಂಘ ಮತ್ತು ಸಹಕಾರಿ ಬ್ಯಾಂಕುಗಳ ನೌಕರಸ್ತರ ಮೇಲೆ ಬಹಳಷ್ಟು ಜವಾಬ್ದಾರಿಗಳಿವೆ. ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಕ್ಕೆ ಒಳಗಾಗಿ ಜನರು ತಮ್ಮ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಅಧಿಕಾರಿಗಳು ಸೈಬರ್ ಅಪರಾಧದ ಬಗ್ಗೆ ತಿಳಿದುಕೊಂಡು ಜನರಿಗೆ ಜಾಗೃತಿ ಮೂಡಿಸಬೇಕು. ಜಿ.ಎಸ್.ಟಿ ಮತ್ತು ಐ.ಟಿ ಗಳ ಎಲ್ಲ ವಿಷಯಗಳ ಬಗ್ಗೆ ತಿಳಿದುಕೊಂಡು ತಮ್ಮ ಕಾರ್ಯಗಳನ್ನು ಸಮರ್ಥವಾಗಿ ನಿಭಾಯಿಸಬೇಕು” ಎಂದು ಹೇಳಿದರು
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ, ಉಪಾಧ್ಯಕ್ಷರಾದ ಜಗದೀಶ್ ಕವಟಗಿಮಠ, ನಿರ್ದೇಶಕ ಬಾಪೂಗೌಡ ಪಾಟೀಲ, ಬೆಳಗಾವಿ ಜಿಲ್ಲಾ ಸಹಕಾರ ಯೂನಿಯನ್ ನಿ, ಅಧ್ಯಕ್ಷರಾದ ಬಸಗೌಡ ಪಾಟೀಲ, ಕರ್ನಾಟಕ ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಳ ನಿರ್ದೇಶಕ ಬಸವರಾಜ ಕಲ್ಯಾಣಶೆಟ್ಟಿ, ಕೆ.ಐ.ಸಿ.ಎಂ ಪ್ರಾಂಶುಪಾಲರು ಹಾಗೂ ಕಾರ್ಯಕ್ರಮ ಸಂಚಾಲಕ ಚಂದ್ರಶೇಖರ್, ಜಿ.ಸ.ಯೂ.ನಿ. ಬೆಳಗಾವಿ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಹಾಲಪ್ಪ ಜಗ್ಗಿನವರ, ಜಿಲ್ಲಾ ಸಹಕಾರ ಯೂನಿಯನ್ ನಿ. ನಿರ್ದೇಶಕ ಬಸವರಾಜ ಸುಲ್ತಾನಪುರಿ ಹಾಗೂ ಇನ್ನಿತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.