Kannada NewsKarnataka NewsUncategorized

ಬುಧವಾರ ರಾಜ್ಯಾದ್ಯಂತ ಕಾಂಗ್ರೆಸ್ ಮೌನ ಪ್ರತಿಭಟನೆ – ಡಿ.ಕೆ.ಶಿವಕುಮಾರ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ರಾಹುಲ್ ಗಾಂಧಿ ಅವರ ರಾಜಕೀಯ ಜೀವನ ಮುಗಿಸಲು ಬಿಜೆಪಿ ನಡೆಸುತ್ತಿರುವ ಷಡ್ಯಂತ್ರವನ್ನು ಖಂಡಿಸಿ ಜುಲೈ 12ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೂ ಸ್ವಾತಂತ್ರ್ಯ ಉದ್ಯಾನವನದಲ್ಲಿ ಮೌನ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಜೊತೆಗೆ ರಾಜ್ಯಾದ್ಯಂತ ಇದೇ ಮಾದರಿಯ ಪ್ರತಿಭಟನೆ ನಡೆಯಲಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.

ಈ ಪ್ರತಿಭಟನೆಯಲ್ಲಿ ನಾನು, ಮುಖ್ಯಮಂತ್ರಿಗಳು ಹಾಗೂ ಎಐಸಿಸಿ ಪ್ರಧಾನಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಸೇರಿದಂತೆ ಎಲ್ಲಾ ಮಂತ್ರಿಗಳು, ಸಂಸದರು, ಶಾಸಕರು, ಕಾರ್ಯಕರ್ತರು, ಬ್ಲಾಕ್ ಕಾಂಗ್ರೆಸ್, ಮುಂಚೂಣಿ ಘಟಕದ ಅಧ್ಯಕ್ಷರು, ಕೌನ್ಸಿಲರ್ ಗಳು ಭಾಗವಹಿಸುತ್ತೇವೆ.

ರಾಹುಲ್ ಗಾಂಧಿ ಅವರು ಎಂದಿಗೂ ದೇಶದ ಸ್ವಾಭಿಮಾನಕ್ಕೆ ಧಕ್ಕೆ ತಂದಿಲ್ಲ. ರಾಜ್ಯದಲ್ಲಿ ಅವರು ಮಾಡಿದ ಭಾಷಣ ಮುಂದಿಟ್ಟುಕೊಂಡು ರಾಜಕೀಯವಾಗಿ ಅವರನ್ನು ಮುಗಿಸುವ ಷಡ್ಯಂತ್ರ ನಡೆಯುತ್ತಿದ್ದು, ನಾವು ಅದನ್ನು ಖಂಡಿಸುತ್ತೇವೆ. ದೇಶದ ಪರವಾಗಿ, ಸತ್ಯದ ಪರವಾಗಿ ಧ್ವನಿ ಎತ್ತುತ್ತಿರುವ ರಾಹುಲ್ ಗಾಂಧಿ ಅವರ ಪರವಾಗಿ ಇಡೀ ದೇಶ ಹಾಗೂ ವಿರೋಧ ಪಕ್ಷಗಳು ನಿಲ್ಲುವ ಸಂದೇಶ ರವಾನಿಸಬೇಕಾಗಿದೆ ಎಂದರು.

ಭಾರತ ಜೋಡೋ ಯಾತ್ರೆಯಲ್ಲಿ ಅವರಿಗೆ ಜನರಿಂದ ಸಿಕ್ಕ ಪ್ರೀತಿ ವಿಶ್ವಾಸ, ಕರ್ನಾಟಕ ರಾಜ್ಯದಲ್ಲಿ ಅವರಿಗೆ ಸಿಕ್ಕ ಭವ್ಯ ಯಶಸ್ಸು ಸಹಿಸಲಾಗದೇ ರಾತ್ರೋರಾತ್ರಿ ಅವರ ಸಂಸತ್ ಸದಸ್ಯತ್ವವನ್ನು ಅನರ್ಹಗೊಳಿಸಲಾಗಿದೆ. ರಾಜ್ಯದಲ್ಲಿ ಅವರು ಯಾತ್ರೆ ಮಾಡಿದ ಮಾರ್ಗದ ಎಲ್ಲಾ ಕ್ಷೇತ್ರಗಳಲ್ಲಿ ಪಕ್ಷ ಗೆಲುವು ಸಾಧಿಸಿದೆ. 

ಮುಂದೆ ಅವರಿಗೆ ದೇಶದ ಪೂರ್ವದಿಂದ ಪಶ್ಚಿಮದವರೆಗೆ ಯಾತ್ರೆ ಮಾಡುವ ಸಲಹೆ ಬಂದಿದ್ದು, ಅವರ ಈ ಯಶಸ್ಸು, ಜನಪ್ರಿಯತೆ ಸಹಿಸಲಾಗದೇ ಬಿಜೆಪಿಯವರು ಈ ಷಡ್ಯಂತ್ರ ರೂಪಿಸಿದ್ದಾರೆ. ಹೀಗಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ದೇಶದ ಎಲ್ಲಾ ಪ್ರಮುಖ ಕೇಂದ್ರಗಳಲ್ಲಿ ಮೌನ ಪ್ರತಿಭಟನೆ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ರಾಜ್ಯದಲ್ಲಿ ಪಕ್ಷದ ಎಲ್ಲ ಕಾರ್ಯಕರ್ತರು ಈ ಪ್ರತಿಭಟನೆಯಲ್ಲಿ ಭಾಗವಹಿಸಬೇಕು ಎಂದು ಈ ಮೂಲಕ ಮನವಿ ಮಾಡುತ್ತೇನೆ ಎಂದು ಅವರು ಹೇಳಿದರು.

ಇನ್ನು ಜುಲೈ 17- 18ರಂದು ದೇಶದ ವಿರೋಧ ಪಕ್ಷಗಳ ನಾಯಕರ ಸಭೆ ಬೆಂಗಳೂರಿನಲ್ಲಿ ನಡೆಯಲಿದ್ದು, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಈ ಸಭೆಯಲ್ಲಿ ಭಾಗವಹಿಸಬೇಕು ಎಂದು ಆಹ್ವಾನ ನೀಡಿದ್ದು, ಅವರು ಕೂಡ ಭಾಗವಹಿಸುವ ಸಂದೇಶ ಬಂದಿದೆ. ಈ ಸಭೆಯಲ್ಲಿ ಭಾಗವಹಿಸುತ್ತಿರುವ ದೇಶದ ಎಲ್ಲಾ ವಿರೋಧ ಪಕ್ಷಗಳ ನಾಯಕರನ್ನು ನಾವು ಸ್ವಾಗತಿಸುತ್ತೇವೆ.

ಮುಸ್ಲಿಂ ಮೀಸಲಾತಿ ರದ್ದು ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಈ ವಿಚಾರವಾಗಿ ಇಂದು ಪ್ರಮುಖ ದಿನಪತ್ರಿಕೆಗಳು ಕೂಲಂಕುಶವಾಗಿ ಅಧ್ಯಯನ ಮಾಡಿ ವರದಿ ಮಾಡಿದ್ದು, ನಾವು ಈ ವಿಚಾರದಲ್ಲಿ ಸುದೀರ್ಘವಾಗಿ ಚರ್ಚೆ ಮಾಡುತ್ತೇವೆ. ಸೂಕ್ತ ಮಾಹಿತಿ ಪಡೆದ ನಂತರ ಸರ್ಕಾರದ ಅಭಿಪ್ರಾಯ ತಿಳಿಸುತ್ತೇನೆ’ ಎಂದು ತಿಳಿಸಿದರು.

ಭಾರತೀಯ ಆಹಾರ ನಿಗಮದ ಹರಾಜಿನಲ್ಲಿ ಹೆಚ್ಚಿನ ರಾಜ್ಯಗಳು ಅಕ್ಕಿ ಖರೀದಿಗೆ ಆಸಕ್ತಿ ವಹಿಸದ ವಿಚಾರವಾಗಿ ಕೇಳಿದ ಪ್ರಶ್ನೆಗೆ, “ನಾವು ಪುಕ್ಸಟ್ಟೆಯಾಗಿ ಅಕ್ಕಿ ಕೇಳುತ್ತಿಲ್ಲ. ನಮ್ಮ ಅಕ್ಕಿ ಎಲ್ಲೂ ಹೋಗುವುದಿಲ್ಲ. ವಿರೋಧ ಪಕ್ಷದವರ ಮಾರ್ಗದರ್ಶನದಂತೆ ಹಣ ಹಾಕುತ್ತಿದ್ದೇವೆ. ಅವರು ನಮಗೆ ಮಾರ್ಗದರ್ಶನ ಎಚ್ಚರಿಕೆ ನೀಡುತ್ತಿದ್ದು, ನಾವು ಅವರ ಸಲಹೆ ಅಭಿಪ್ರಾಯಕ್ಕೆ ಗೌರವ ನೀಡಬೇಕು” ಎಂದು ತಿಳಿಸಿದರು. 

ಇಂದಿರಾ ಕ್ಯಾಂಟೀನ್ ಭೇಟಿ ವಿಚಾರವಾಗಿ ಕೇಳಿದಾಗ, “ನಾನು ಎಲ್ಲಾ ಶಾಸಕರಿಗೆ ಪತ್ರ ಬರೆದು, ವಾರಕ್ಕೊಮ್ಮೆ ಇಂದಿರಾ ಕ್ಯಾಟೀನ್ ಗೆ ಭೇಟಿ ನೀಡಿ ಪರಿಶೀಲನೆ ಮಾಡಬೇಕು ಎಂದು ಸೂಚಿಸುತ್ತೇನೆ. ನಾನು ದಾಸರಹಳ್ಳಿಯಲ್ಲಿರುವ ತಂಗುದಾಣಕ್ಕೂ ಭೇಟಿ ನೀಡಬೇಕು ಎಂದು ಆಲೋಚಿಸಿದ್ದೆ. ಅದನ್ನು ಬಂದ್ ಮಾಡಿದ್ದಾರೆ ಎಂಬ ಮಾಹಿತಿ ಬಂದಿದೆ. ಮುಂದಿನ ದಿನಗಳಲ್ಲಿ ಬೇರೆ ಬೇರೆ ಪ್ರದೇಶಗಳಿಗೆ ಭೇಟಿ ನೀಡುತ್ತೇನೆ” ಎಂದು ತಿಳಿಸಿದರು. 

ಜೈನಮುನಿ ಹತ್ಯೆ ಪ್ರಕರಣ ಸಿಬಿಐಗೆ ನೀಡಬೇಕು ಎಂಬ ಮಾಜಿ ಗೃಹಮಂತ್ರಿಗಳ ಹೇಳಿಕೆ ಬಗ್ಗೆ ಕೇಳಿದಾಗ, ‘ಈ ವಿಚಾರವಾಗಿ ಗೃಹಸಚಿವರು ಉತ್ತರ ನೀಡಲಿದ್ದಾರೆ’ ಎಂದು ತಿಳಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button