
ಪ್ರಗತಿ ವಾಹಿನಿ ಸುದ್ದಿ ಕಾರವಾರ –
ಕಾರವಾರ ನಗರಸಭೆಯ ಮಾಜಿ ಸದಸ್ಯ ರಮೇಶ ಗೌಡ (64 )ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗುರುವಾರ ರಾತ್ರಿ ವಿಷ ಸೇವನೆ ಮಾಡಿದ್ದ ಅವರನ್ನು ಚಿಕಿತ್ಸೆಗಾಗಿ ಕಾರವಾರದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಶುಕ್ರವಾರ ನಿಧನರಾಗಿದ್ದಾರೆ. ಅವರಿಗೆ ಪತ್ನಿ, ಇಬ್ಬರು ಪುತ್ರರು, ಅಪಾರ ಬಂಧು ಬಳಗ ಇದ್ದಾರೆ.
ರಮೇಶ ಗೌಡ ಅವರು ನಗರಸಭೆಯ ಸದಸ್ಯರಾಗಿ ತಮ್ಮ ಜನಸೇವೆಯನ್ನು ವಾರ್ಡ್ ಜನತೆಗೆ ಮಾಡಿದ್ದರು. ನಗರಸಭೆಯಲ್ಲಿ ತನ್ನ ವಾರ್ಡ್ ಜನರ ಧ್ವನಿಯಾಗಿದ್ದರು. ಯಾವುದೇ ಪಕ್ಷ- ಭೇದವಿಲ್ಲದೆ ವಾರ್ಡ್ ಅಭಿವೃದ್ಧಿಗಾಗಿ ಅದೆಷ್ಟೋ ಬಾರಿ ಅವರು ನಗರಸಭೆಯಲ್ಲಿ ಪ್ರತಿಭಟನೆ ನಡೆಸಿರುವುದೂ ಇದೆ. ತಮ್ಮ ವಾರ್ಡ್ ವ್ಯಾಪ್ತಿಯ ಕುಗ್ರಾಮ ಗುಡ್ಡೆಹಳ್ಳಿಗೆ ವಿದ್ಯುತ್ ಒದಗಿಸಿಕೊಡಲು ಕಂಬಗಳನ್ನು ಹೊತ್ತು ಸಾಗಿ, ಅಲ್ಲಿಯ ಜನತೆಗೆ ಬೆಳಕು ನೀಡಲು ಶ್ರಮಿಸಿದ್ದರು.
ಅಧಿಕಾರದ ಹೊರತಾಗಿಯೂ ಸಾಮಾಜಿಕ ಸಂಘಟನೆಗಳಲ್ಲೂ ಸಕ್ರಿಯರಾಗಿ ಅವರು ಕಾರ್ಯನಿರ್ವಹಿಸಿದ್ದರು. ಪಹರೆ ವೇದಿಕೆಯ ಸ್ವಚ್ಛತೆಯಲ್ಲಿ ಅವರು ಭಾಗವಹಿಸುತ್ತಿದ್ದರು. ಜನಶಕ್ತಿ ವೇದಿಕೆಯ ಜೊತೆಗೂಡಿ ಅನೇಕ ಹೋರಾಟಗಳಲ್ಲಿ ಅವರು ಭಾಗವಹಿಸಿದ್ದರು. ಯಾವುದೇ ಹೋರಾಟವಿದ್ದರೂ ಕೈಜೋಡಿಸುತ್ತಿದ್ದರು. ಹಾಲಕ್ಕಿ ಸಮುದಾಯದ ಅಭಿವೃದ್ಧಿಗಾಗಿ ಅವರು ನಡೆಸಿದ ಹೋರಾಟಗಳನ್ನು ಆ ಸಮುದಾಯದ ಜನ ಎಂದಿಗೂ ಮರೆಯುವುದಿಲ್ಲ. ಕೇವಲ ಆ ಸಮುದಾಯಕ್ಕೆ ಮಾತ್ರವಲ್ಲದೆ, ಜನಪರ ಅನೇಕ ಹೋರಾಟಗಳಲ್ಲಿ ಅವರು ಭಾಗವಹಿಸುತ್ತಿದ್ದರು.
ಅವರ ಆತ್ಮಹತ್ಯೆ ಎಲ್ಲರಿಗೂ ದಿಗ್ಭ್ರಮೆ ಮೂಡಿಸಿದೆ.