*ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ವಿಸ್ಮಯ: ಕೌತುಕದ ಬಗ್ಗೆ ಪ್ರಧಾನ ಅರ್ಚಕರು ನೀಡಿದ ವಿಶ್ಲೇಷಣೆಯೇನು?*

ಪ್ರಗತಿವಾಹಿನಿ ಸುದ್ದಿ: ಮಕರ ಸಂಕ್ರಮಣದ ಸಂದರ್ಭದಲ್ಲಿ ಬೆಂಗಳೂರಿನ ಗವಿಪುರಂನಲ್ಲಿರುವ ಗವಿಗಂಗಾಧರೇಶ್ವರ ದೇವಾಲಯದಲ್ಲಿ ಚಮತ್ಕಾರವೊಂದು ನಡೆದಿದ್ದು, ಸೂರ್ಯ ದೇವನು ಶಿವಲಿಂಗಕ್ಕೆ ನಮಸ್ಕರಿಸುವ ಮೂಲಕ ತನ್ನ ಪಥವನ್ನು ಬದಲಿಸಿದ್ದಾನೆ.
ಪ್ರತಿ ವರ್ಷದಂತೆ ಈವರ್ಷವೂ ಬೆಂಗಳೂರಿನ ಗವಿಗಂಗಾಧರೇಶ್ವರ ದೇವಾಲಯದಲ್ಲಿ ಮಕರ ಸಂಕ್ರಾಂತಿಯಂದು ಜರುಗುವ ಈ ವಿಸ್ಮಯವನ್ನು ಸಾವಿರಾರು ಜನರು ಭಕ್ತಿಭಾವದಿಂದ ಕಣ್ತುಂಬಿಕೊಂಡು ಪುನೀತರಾದರು.
ಸೂರ್ಯ ದೇವರು ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ತನ್ನ ಪಥ ಬದಲಿಸುವ ವೇಳೆ ಸಂಜೆ 5:16ರಿಂದ 5:30ರ ಸಂದರ್ಭದಲ್ಲಿ ಸೂರ್ಯ ಕಿರಣಗಳು ದೇವಾಲಯದ ನಂದಿ ವಿಗ್ರಹದ ಮೂಲಕ ಹಾದು ಶಿವಲಿಂಗದ ಪಾದಸ್ಪರ್ಶ ಮಾಡಿತು. ಈ ವೇಳೆ ದೇವಾಲಯದ ಗರ್ಭಗುಡಿಯಲ್ಲಿನ ಕಗ್ಗತ್ತಲು ಮಾಯವಾಗಿ ಪ್ರಕಾಶಮಾನವಾಗಿ ಬೆಳಕು ಆವರಿದ್ದು ಸಾವಿರಾರು ಜನರು ಈ ಕೌತಕಕ್ಕೆ ಸಾಕ್ಷಿಯಾದರು. ಕೆಲಹೊತ್ತು ಶಿವಲಿಂಗದ ಮೇಲೆ ಪ್ರಖರವಾಗಿ ಸೂರ್ಯನ ಕಿರ್ಣಗಳು ಇದ್ದವು. ಈಮೂಲಕ ಸೂರ್ಯ ದೇವರು ಶಿವನಿಗೆ ಅಭಿಷೇಕ ಮಾಡಿದಂತಹ ಆಧ್ಯಾತ್ಮಿಕ ಭಾವ ಕಂಡು ಬಂತು. ಬಳಿಕ ಶಿವಲಿಂಗದ ಶಿಖರವನ್ನು ಸ್ಪರ್ಶಿಸಿದ ಕಿರಣಗಳು ಹಾಗೆಯೇ ಮರೆಯಾದವು.
ಈ ಐತಿಹಾಸಿಕ ಕ್ಷಣವನ್ನು ಕಂಡ ಭಕ್ತರು ಪುನೀತರಾದರು. ಈ ವೇಳೆ ದೇವಸ್ಥನದ ಪ್ರಧಾನ ಅರ್ಚಕ ಸೋಮಸುಂದರ ದೀಕ್ಷಿತ್ ಅವರ ನೇತೃತ್ವದಲ್ಲಿ ಪೂರ್ಣಕುಂಭ ಅಭಿಷೇಕ ನೆರವೇರಿತು.
ಇನ್ನು ಈ ಐತಿಹಾಸಿಕ ಕ್ಷಣವನ್ನು ವಿಶ್ಲೇಷಿಸಿದ ಸೀಮದುಂದರ ದೀಕ್ಷಿತ್ ಅವರು, ಸೂರ್ಯನ ಕಿರಣಗಳು ಶಿವಲಿಂಗದ ಮೇಲೆ 46 ಸೆಕೆಂಡುಗಳು ಇದ್ದವು. ಆದರೆ ಗಂಗೆಯ ದರ್ಶನ ಮಾಡಿಲ್ಲ. ಗಂಗೆ ಕುಪಿತಗೊಂಡಿದ್ದಾಳೆ. ಹೀಗಾಗಿ ಜಲಕಂಟಕವಾಗಬಹುದು. ರುದ್ರಾಭಿಷೇಕ ಮಂತ್ರದ ಮೂಲಕ ಗಂಗೆಯನ್ನು ಸಮಾಧಾನಪಡಿಸಲಾಗುವುದು ಎಂದು ತಿಳಿಸಿದ್ದಾರೆ.