Kannada NewsLatestNational

*ಆನ್ ಲೈನ್ ವಂಚನೆ ಪ್ರಕರಣ: ಕಳೆದುಕೊಂಡ ಹಣ ಹಾಗೂ ಪರಿಹಾರ ಮೊತ್ತವನ್ನು ಬ್ಯಾಂಕ್ ನಿಂದಲೇ ಪಾವತಿಸುವಂತೆ ಆದೇಶ*

ಪ್ರಗತಿವಾಹಿನಿ ಸುದ್ದಿ: ಆನ್ ಲೈನ್ ವಂಚನೆಗೊಳಗಾಗಿ ಹಣ ಕಳೆದುಕೊಂಡಿದ್ದ ಮಹಿಳೆಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್ 3,82,230 ರೂ ಹಾಗೂ ಪರಿಹಾರ ಹಣವನ್ನು ನೀಡುವಂತೆ ಬೆಳಗಾವಿ ಗ್ರಾಹಕರ ಪರಿಹಾರ ವೇದಿಕೆ ಆದೇಶ ಹೊರಡಿಸಿದೆ.

Home add -Advt

ಬೆಳಗಾವಿಯ ಎರಡನೇಯ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯು ಸುಕೃತಾ ರಾಜೇಂದ್ರ ಕುಲಕರ್ಣಿ ಎಂಬುವರು ಆನ್ ಲಾಯಿನ್ ವಂಚನೆ ಪ್ರಕರ್ಣದಲ್ಲಿ ಕಳೆದುಕೊಂಡಿದ್ದ ರೂ.3,82,230/-ಹಣ ವನ್ನು 6% ಬಡ್ಡಿ ಸಹಿತ ಹಾಗು ರೂ. 10,000/- ಗಳನ್ನು ಮಾನಸಿಕ ವ್ಯಥೆಗಾಗಿ ಮತ್ತು ರೂ. 5,000/- ಗಳನ್ನು ಕೋರ್ಟ್ ಕಲಾಪಗಳಿಗಾಗಿ ವ್ಯಯಿಸಿದ ಹಣವೆಂದು ಅರ್ಜಿದಾರಳಿಗೆ ಪಾವತಿಸಬೆಕೆಂದು ಪಂಜಾಬ ನ್ಯಾಷನಲ್ ಬ್ಯಾಂಕ್ ಗೆ ಬೆಳಗವಿ ಗ್ರಾಹಕರ ಪರಿಹಾರ ವೇದಿಕೆ ಆದೇಶ ನೀಡಿದೆ.

ವಝಿರ ಎಕ್ಸ್ ಎಂಬ ಕಂಪನಿಯ ಪ್ರತಿನಿಧಿ ಎಂದು ಪರಿಚಯಿಸಿಕೊಂಡ ವ್ಯಕ್ತಿಯೋರ್ವ ಕಂಪನಿ ನಡೆಸುವ ಬಿಟ್ ಕ್ವಾಯಿನ್ ವ್ಯವಹಾರದಲ್ಲಿ ಹೂಡಿಕೆ ಮಾಡಿದರೆ ಶೀಘ್ರದಲ್ಲಿ ಅಧಿಕ ಹಣಗಳಿಸಬಹುದು ಎಂದು ಮೊಬೈಲ್ ನಲ್ಲಿ ಸಂದೇಶ ಕಳಿಸಿ ಲಕ್ಷ ಲಕ್ಷ ಹಣ ವಂಚಿಸಿದ್ದ. ಕಳೆದ ವರ್ಷದ ಮೇ ತಿಂಗಳಿನಲ್ಲಿ ಹಂತ ಹಂತವಾಗಿ ಅರ್ಜಿದಾರಳಿಂದ ರೂ.3,82,230/-ಗಳನ್ನು ಆನ್ ಲೈನ್ ಮೂಲಕ ವಂಚನೆದಾರರು ತಮ್ಮ ಪಂಜಾಬ ನ್ಯಾಷನಲ್ ಬ್ಯಾಂಕಿನ ಖಾತೆಗೆ ಜಮಾ ಮಾಡಿಸಿಕೊಂಡಿದ್ದರು.

ಹೂಡಿಕೆ ಮಾಡಿದ ಹಣ ವಾಪಸ್ ಬಾರದಿದ್ದಾಗ ತಾನು ವಂಚನೆಗೆ ಬಲಿಯಾಗಿರುವೆ ಎಂದು ತಿಳಿದು ತಕ್ಷಣ ನಗರದ ಸೈಬರ್ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು. ವಂಚನೆದಾರರ ಪಂಜಾಬ್ ನ್ಯಾಷನಲ್ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗಿದ್ದ ರೂ.2,32,327/- ಹಣವನ್ನು ಸ್ಥಗಿತಗೊಳಿಸಿ ಹಣವನ್ನು ವಾಪಸ್ ಪಡೆಯುವ ಆದೇಶಕ್ಕಾಗಿ ಜುಡಿಸಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಿಂದ ಹಣ ಬಿಡುಗಡೆ ಆದೇಶವನ್ನು ಬ್ಯಾಂಕಿಗೆ ನೀಡಿದ್ದರು. ಹಲವು ತಿಂಗಳು ಕಳೆದರೂ ಬ್ಯಾಂಕನಿಂದ ಹಣ ವಾಪಸ್ ಬಾರದಿದ್ದಾಗ ಅರ್ಜಿದಾರರು ವಕೀಲರ ಮೂಲಕ ಬ್ಯಾಂಕಿಗೆ ಲಿಗಲ್ ನೋಟಿಸ್‌ ಹಾಗೂ ಆರ್ ಟಿ ಐ ಅರ್ಜಿ ರವಾನಿಸಿದ್ದರೂ ಯಾವುದೆ ಪ್ರತಿಕ್ರಿಯೆ ದೊರೆಯದಿದ್ದಾಗ ವಕೀಲರ ಮುಖಾಂತರ ಗ್ರಾಹಕ ವೇದಿಕೆಗೆ ಮೊರೆ ಹೋಗಿದ್ದರು.

ಆನ್ ಲೈನ್ ವಂಚನೆ ಪ್ರಕರ್ಣಗಳಲ್ಲಿ ಬ್ಯಾಂಕ್ ಗಳ ಹೊಣೆಗಾರಿಕೆ ನಿರ್ಧರಿಸುವ ಅರ್ ಬಿ ಐ ಸುತ್ತೋಲೆಯ ಅನ್ವಯ ವಂಚಕರ ಖಾತೆಗಳಿಗೆ ಹಣ ಸಂದಾಯವಾಗುವುದನ್ನು ತಡೆ ಗಟ್ಟುವಲ್ಲಿ ಪಂಜಾಬ ನ್ಯಾಷನಲ್ ಬ್ಯಾಂಕ್ ವಿಫಲವಾಗಿದ್ದರಿಂದ ಮತ್ತು ಗ್ರಾಹಕ ಶಬ್ದದ ವ್ಯಾಪ್ತಿ ಕುರಿತು ಸರ್ವೋಚ್ಚ ನ್ಯಾಯಾಲಯದ ತೀರ್ಪು ಅನ್ವಯ ಅರ್ಜಿದಾರರ ಅರ್ಜಿಯು ವಿಚಾರಣೆಗೆ ಸ್ವೀಕೃತವಾಗಿತ್ತು. ಅರ್ಜಿದಾರರು ಬ್ಯಾಂಕ್ ಗ್ರಾಹಕರಲ್ಲ, ಬ್ಯಾಂಕ್ ಸೂಕ್ತ ಪ್ರತಿವಾದಿಯಲ್ಲ, ಸೂಕ್ತ ಪ್ರತಿವಾದಿಗಳನ್ನು ನಮೂದಿಸಿಲ್ಲ, ವಂಚನೆಗೆ ಬ್ಯಾಂಕ್ ಹೊಣೆಯಲ್ಲ ಎಂಬ ಪ್ರತಿವಾದಿಗಳ ವಾದವನ್ನು ತಿರಸ್ಕಾರ ಮಾಡಿ ಗ್ರಾಹಕರ ವೇದಿಕೆಯ ಅಧ್ಯಕ್ಷ ಸಂಜೀವ ಕುಲಕರ್ಣಿ ಹಾಗೂ ಸದಸ್ಯ ಗಿರೀಶ ಪಾಟೀಲರು ಅರ್ಜಿದಾರರ ಅರ್ಜಿಯನ್ನು ಪುರಸ್ಕರಿಸಿ ಬ್ಯಾಂಕ್ ವಿರುದ್ಧ ಆದೇಶ ಜಾರಿ ಮಾಡಿದ್ದಾರೆ. ಅರ್ಜಿದಾರರ ಪರವಾಗಿ ಅರ್. ವಿ. ಕುಲಕರ್ಣಿ ವಕೀಲರು ಸೂಕ್ತ ದಾಖಲೆಗಳನ್ನು ಹಾಜರು ಪಡಿಸಿ ವಾದ ಮಂಡಿಸಿದ್ದರು.

Related Articles

Back to top button