ಸಂಸದೆ ಸುಮಲತಾ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಎಂದ ಶ್ರೀಕಂಠಯ್ಯ, ಅವರಿಗೆ ಅದೊಂದೇ ಸಮಸ್ಯೆ ಎಂದ ಸುಮಲತಾ

ಪ್ರಗತಿವಾಹಿನಿ ಸುದ್ದಿ, ಮಂಡ್ಯ – ಸಂಸದೆ ಸುಮಲತಾ ಮತ್ತು ಶಾಸಕ ಶ್ರೀಕಂಠಯ್ಯ ಮಧ್ಯೆ ತೀವ್ರ ಆರೋಪ -ಪ್ರತ್ಯಾರೋಪ ನಡೆದಿದೆ.
ಸಂಸದೆ ಸುಮಲತಾ ಸುತ್ತಮುತ್ತ ಗೂಂಡಾಗಳಿದ್ದಾರೆ. ಅಧಿಕಾರಿಗಳಿಗೆ ಕಿರುಕುಳ ಕೊಡುತ್ತಿದ್ದಾರೆ. ಅವರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಆರೋಪಿಸಿದ್ದಾರೆ.
ಸುಮಲತಾ ಅವರ ಲೆಟರ್ ಹೆಡ್ ಗಳು ದುರುಪಯೋಗವಾಗುತ್ತಿದೆ. ಅವರ ಆಪ್ತ ಕಾರ್ಯದರ್ಶಿಯೊಬ್ಬರು ವಂಚಕರು. ಅಧಿಕಾರಿಗಳಿಗೆ ಹಣಕ್ಕಾಗಿ ಪೀಡಿಸಲಾಗುತ್ತಿದೆ. ದೊಡ್ಡ ದೊಡ್ಡ ಅಧಿಕಾರಿಗಳಿಗೆ ದಬಾಯಿಸಿ ಮಾತನಾಡುತ್ತಾರೆ. ಮಾನಸಿಕ ಒತ್ತಡ ತರುತ್ತಿದ್ದಾರೆ. ಅಧಿಕಾರಿಗಳು ಅವರ ಕಷ್ಟಗಳನ್ನು ನನ್ನ ಬಳಿ ತೋಡಿಕೊಂಡಿದ್ದಾರೆ. ಆಪ್ತಕಾರ್ಯದರ್ಶಿಯನ್ನು ಬಂಧಿಸಿ, ವಿಚಾರಣೆಗೊಳಪಡಿಸಬೇಕು ಎಂದು ಶ್ರೀಕಂಠಯ್ಯ ಆಗ್ರಹಿಸಿದರು.
ಜಿಲ್ಲಾಡಳಿತ ಸಂಪೂರ್ಣ ಕುಸಿದಿದೆ. ಜಿಲ್ಲಾ ಉಸ್ತುವಾರಿ ಮಂತ್ರಿಗಳೂ ಈ ಬಗ್ಗೆ ಗಮನ ಹರಿಸುತ್ತಿಲ್ಲ. ದೌರ್ಜನ್ಯಗಳನ್ನು ನೋಡಿ ಸುಮ್ಮನಿರಲು ಸಾಧ್ಯವಿಲ್ಲ. ಲೋಕಸಭಾ ಸದಸ್ಯರು ಇದನ್ನೆಲ್ಲ ನೋಡಿಯೂ ಸುಮ್ಮನಿದ್ದಾರೆ. ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಈ ಆರೋಪಗಳಿಗೆ ಪ್ರತ್ಯುತ್ತರ ನೀಡಿರುವ ಸುಮಲತಾ, ಅಕ್ರಮ ಗಣಿಗಾರಿಕೆ ನಿಲ್ಲಿಸುತ್ತಿದ್ದಂತೆ ಶ್ರೀಕಂಠಯ್ಯ ಅವರಿಗೆ ತೊಂದರೆಯಾಗುತ್ತಿದೆ. ಅವರು ಮೆಂಟಲ್ ಆಗಿದ್ದಾರೆ. ಇದಕ್ಕೆ ಅವರು ಚಿಕಿತ್ಸೆ ಪಡೆಯಲಿ ಎಂದಿದ್ದಾರೆ.
ಅವರು ಏನು ಹೇಳುತ್ತಿದ್ದಾರೋ ಅಂತಹ ಸಂಸ್ಕೃತಿ ಅವರದ್ದು. ತಾವು ಯಾವ ರೀತಿ ಬೆಳೆದುಕೊಂಡು ಬಂದಿದ್ದಾರೋ ಅದನ್ನು ಹೇಳುತ್ತಿದ್ದಾರೆ. ಸಮಸ್ಯೆ ಇದ್ದರೆ ದೂರು ಕೊಡಲಿ, ಅವರ ಸಮಸ್ಯೆ ಅದೊಂದೇ, ಅಕ್ರಮ ಗಣಿಗಾರಿಕೆ ನಿಲ್ಲಿಸುತ್ತಿರುವುದನ್ನು ಸಹಿಸಲು ಆಗುತ್ತಿಲ್ಲ. ಕ್ಷೇತ್ರದ ಪ್ರತಿ ಮನೆಯಲ್ಲಿ ಇವರ ಅನ್ಯಾಯ ಹೇಳುತ್ತಾರೆ. ಇಂತವರ ಆರೋಪಗಳಿಗೆಲ್ಲ ಹೆದರುವವಳು ನಾನಲ್ಲ ಎಂದಿದ್ದಾರೆ ಸುಮಲತಾ.
ಇದು ಅಚಾತುರ್ಯದಿಂದ ಆದ ಪ್ರಮಾದ – ಮುರುಗೇಶ ನಿರಾಣಿ ಕ್ಷಮೆ ಯಾಚನೆ