Latest

ದಲಿತ ಮಹಿಳೆ ನೀರು ಕುಡಿದಿದ್ದಕ್ಕೆ ಗೋಮೂತ್ರದಿಂದ ಟ್ಯಾಂಕ್ ಸ್ವಚ್ಛತೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಬೇರೊಂದು ಪ್ರದೇಶದ ದಲಿತ ಮಹಿಳೆ ಬಂದು ಮೇಲ್ಜಾತಿ ಪ್ರದೇಶದಲ್ಲಿ ಸ್ಥಾಪಿಸಲಾಗಿದ್ದ ಶೇಖರಣಾ ತೊಟ್ಟಿಯಿಂದ ನೀರು ಕುಡಿದ ಹಿನ್ನೆಲೆಯಲ್ಲಿ ಮೇಲ್ಜಾತಿಯ ಕೆಲವರು ನೀರನ್ನು ಹೊರಹಾಕಿ ಗೋಮೂತ್ರದಿಂದ ತೊಟ್ಟಿಗಳನ್ನು ಶುದ್ಧೀಕರಿಸಿದ ಘಟನೆ ನಡೆದಿದೆ.

ಚಾಮರಾಜನಗರದ ಹೆಗ್ಗಟೋರಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಹಾದೇವಪ್ಪ ಎಂಬ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಘಟನೆ ಕುರಿತ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ತಹಸೀಲ್ದಾರ್ ಬಸವರಾಜು ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

ಗ್ರಾಮದಲ್ಲಿ ಶುಕ್ರವಾರ ದಲಿತ ಸಮುದಾಯದವರ ವಿವಾಹವಿತ್ತು. ಹೆಚ್.ಡಿ.ಕೋಟೆಯಿಂದ ಮದುವೆಯಲ್ಲಿ ಪಾಲ್ಗೊಳ್ಳಲು ಮಹಿಳೆ ಬಂದಿದ್ದರು. ಬಾಯಾರಿದ್ದ ಮಹಿಳೆ ಸಾರ್ವಜನಿಕ ತೊಟ್ಟಿಯಲ್ಲಿದ್ದ ನೀರು ಕುಡಿದು ಅವಸರವಸರವಾಗಿ ಬಸ್ ಹತ್ತಿದ್ದರೆನ್ನಲಾಗಿದೆ. ಈ ವೇಳೆ ಗ್ರಾಮದ ಕೆಲವರು ಮಹಿಳೆಯನ್ನು ನಿಂದಿಸಿದ್ದು, ಟ್ಯಾಂಕ್ ಶುದ್ಧೀಕರಿಸಲು ನಿರ್ಧರಿಸಿದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

Home add -Advt

ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಿಗರು ಸ್ಥಳ ಪರಿಶೀಲನೆ ನಡೆಸಿ ಘಟನೆಯನ್ನು ಖಚಿತಪಡಿಸಿದರು. ನಂತರ ಅಧಿಕಾರಿಗಳು ತಹಸೀಲ್ದಾರ್‌ಗೆ ವರದಿ ಸಲ್ಲಿಸಿದರು.

ಪ್ರಕರಣವೀಗ ವಿವಾದದ ಸ್ವರೂಪ ತಳೆದಿದ್ದು ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ಕಾಮಿಡಿ ಕಿಲಾಡಿಗಳು ನಯನಾ ವಿರುದ್ಧ ದೂರು ದಾಖಲು

Related Articles

Back to top button