*ನಾವು ಮನುಕುಲಕ್ಕೆ ಲೇಸನ್ನು ಬಯಸ್ತೀವಿ: ಪಾಕ್ ವಿರುದ್ಧ ಯುದ್ದದ ಬಗ್ಗೆ ಕೋಡಿಶ್ರೀ ಹೇಳಿಕೆ*

ಪ್ರಗತಿವಾಹಿನಿ ಸುದ್ದಿ: ನಾವು ಮನುಕುಲಕ್ಕೆ ಲೇಸನ್ನು ಬಯಸ್ತೀವಿ. ನಾವೆಲ್ಲರೂ ಭಾರತದಲ್ಲಿ ವಾಸಿಸುತ್ತಿರುವುದರಿಂದ ಈ ನೆಲದ ಮೌಲ್ಯಗಳನ್ನು ಗೌರವಿಸಬೇಕು. ಭಾರತಕ್ಕೆ ಒಳ್ಳೆಯದಾಗಲೆಂದು ಬಯಸುತ್ತೇವೆ ಎಂದು ಕೋಡಿ ಮಠದ ಶ್ರೀಗಳು ಪಾಕಿಸ್ತಾನದ ವಿರುದ್ಧ ಉಂಟಾಗಿರುವ ಯುದ್ಧ ಕುರಿತು ಪ್ರತಿಕ್ರಿಯೆ ನೀಡಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೋಡಿಮಠದ ಶ್ರೀಗಳು, ಸಮಾಜದಲ್ಲಿ ಹೆಚ್ಚುತ್ತಿರುವ ಮತಾಂಧತೆಯನ್ನು ದುರಂತವಾಗಿ ನೋಡುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ಜಗತ್ತಿನ ಹಿತಕ್ಕಾಗಿ ಧ್ಯಾನ, ಪೂಜೆ, ಪುನಸ್ಕಾರಗಳನ್ನು ಮಾಡುವುದಾಗಿ ಹೇಳಿದ್ದಾರೆ.
ಮಾನವ ಸಮಾಜದಲ್ಲಿ ಶಾಂತಿ ಇಲ್ಲದಿದ್ದರೆ, ಸುನಾಮಿ, ಮಳೆ, ಗಾಳಿ ಇತ್ಯಾದಿ ಪ್ರಕೃತಿಕೋಪಗಳು ಹೆಚ್ಚಾಗುತ್ತವೆ. ಇದರಿಂದ ಜನರಿಗೆ ತೊಂದರೆ ಆಗುವುದು ಖಚಿತ. ಪ್ರಧಾನಿ ಅಥವಾ ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ಅವರು ನೇರವಾಗಿ ಪ್ರತಿಕ್ರಿಯೆ ನೀಡದೆ, ‘ಮೋದಿ ಬದಲಾವಣೆಯ ಬಗ್ಗೆ ನನ್ನತ್ರ ಉತ್ತರ ಇಲ್ಲ’ ಎಂದು ಹೇಳಿದರು.
‘ನಮ್ಮ ದೇಶದಲ್ಲಿ ಎಂದಿಗೂ, ಯಾವುದೇ ಕಾರಣಕ್ಕೂ ಮಾನವೀಯ ಮೌಲ್ಯಗಳನ್ನು ಬಲಿ ಕೊಡಬಾರದು. ರಾಷ್ಟ್ರಪ್ರೇಮ, ದೇಶಪ್ರೇಮ, ಧನಪ್ರೇಮ ಇವು ಮಾನವೀಯ ಮೌಲ್ಯಗಳ ಪೈಕಿ ಅತೀ ಮುಖ್ಯವಾದವು. ಇಂತಹ ಮೌಲ್ಯಗಳಿಗೆ ಮತಕೊಟ್ಟಿದ್ದರಿಂದ ಸರ್ಕಾರಗಳು ಅಧಿಕಾರಕ್ಕೆ ಬಂದಿವೆ. ಆದರೆ, ಸರ್ಕಾರಗಳು ಮಾನವೀಯತೆಗೆ ವಿರುದ್ಧವಾಗಬಾರದು. ಸರ್ಕಾರದ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ಸಮಸ್ತ ಭಾರತೀಯರು ಒಪ್ಪಿಗೆಯನ್ನೇ ಕೊಡಬೇಕು’ ಎಂದು ತಿಳಿಸಿದ್ದಾರೆ.
ರಾಜರು ಮಹಾರಾಜರ ಕಾಲದಿಂದಲೂ ಅವರ ಪಕ್ಕದಲ್ಲಿ ಗುರುಗಳು ಇದ್ದರು. ಆ ಗುರುಗಳು ದೇಶದ ಒಳ್ಳೆಯದಕ್ಕಾಗಿ ಸಲಹೆ ನೀಡುತ್ತಿದ್ದರು. ರಾಜರು ತಮ್ಮ ನಡವಳಿಕೆಯಲ್ಲಿ ಗುರುಗಳ ಸಲಹೆಗಳನ್ನು ಪಾಲಿಸುತ್ತಿದ್ದರು. ಈ ಮೂಲಕ ದೇಶದಲ್ಲಿ ಶಿಸ್ತಿನ ಆಡಳಿತ, ಶಾಂತಿ ಮತ್ತು ಸಮೃದ್ಧಿ ಇತ್ತು. ಈ ಆಚರಣೆ ಇಲ್ಲದಿರುವುದೇ ಇಂದಿನ ರಾಜಕೀಯದ ಅಸ್ತವ್ಯಸ್ತತೆಗೆ ಕಾರಣವಾಗಿದೆ. ಯಾವುದೇ ನಿರ್ಧಾರವನ್ನು ಕೈಗೊಳ್ಳುವಾಗ ಗುರುಗಳ ಅಭಿಪ್ರಾಯಗಳನ್ನು ಕೇಳುವುದು ಉತ್ತಮವಾಗಿದೆ ಎಂದರು.