Latest

ಹಿಂದೂ ಸಂಘಟನೆಗಳ ವಿರೋಧ; ಸಂಸದ ಪ್ರತಾಪ್ ಸಿಂಹ ಆಕ್ರೋಶ -101 ಗಣಪತಿ ದೇವಾಲಯಗಳ ತೆರವು?-

ಪ್ರಗತಿವಾಹಿನಿ ಸುದ್ದಿ; ಮೈಸೂರು: ಪುರಾತನ ಹಿಂದೂ ದೇವಾಲಯಗಳ ತೆರವಿಗೆ ಮುಂದಾಗಿರುವ ಜಿಲ್ಲಾಡಳಿತದ ಕ್ರಮಕ್ಕೆ ಮೈಸೂರಿನಲ್ಲಿ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು, ಜಿಲ್ಲಾಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ನಂಜನಗೂಡಿನಲ್ಲಿ ಪುರಾತನ ದೇವಾಲಯವನ್ನು ತೆರವುಗೊಳಿಸಲಾಯಿತು. ಈಗ ಮೈಸೂರಿನಲ್ಲಿ 101 ಗಣಪತಿ ದೇವಾಲಯಗಳ ತೆರವಿಗೆ ಜಿಲ್ಲಾಡಳಿತ ಮುಂದಾಗಿದೆ. ಈ ದೇವಾಲಯಗಳು ನಮ್ಮ ಧಾರ್ಮಿಕ ಭಾವನೆಗಳ ಪ್ರತೀಕ. ಜನರ ಭಾವನೆಗಳನ್ನು ಘಾಸಿಗೊಳಿಸುವುದು ಸರಿಯಲ್ಲ ಎಂದು ಕಿಡಿಕಾರಿದರು.

ಸುಪ್ರೀಂ ಕೋರ್ಟ್ ಆದೇಶದಂತೆ ದೇವಾಲಯಗಳನ್ನು ತೆರವು ಮಾಡಲಾಗುತ್ತಿದೆ ಎಂದು ಹೆಳಿ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ದೇವಾಯಗಳನ್ನು ಮಾತ್ರ ಯಾಕೆ ಟಾರ್ಗೆಟ್ ಮಾಡುತ್ತಿದ್ದೀರಿ? ಚರ್ಚ್, ಮಸೀದಿಗಳಿಲ್ಲವೇ? ಸುಪ್ರೀಂ ಕೋರ್ಟ್ ಆದೇಶದ ಪ್ರತಿ ನಮ್ಮ ಬಳಿಯೂ ಇದೆ. ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗುವಂತಹ ಪ್ರದೇಶದಲ್ಲಿ ದೇವಾಲಯಗಳಿದ್ದರೆ, ಅಕ್ರಮವಾಗಿ ನಿರ್ಮಿಸಿದ್ದರೆ ಅಂತಹ ದೇವಾಲಯಗಳನ್ನು ತೆರವುಗೊಳಿಸಬಹುದು. ಆದರೆ ಅದಕ್ಕೂ ಮುನ್ನ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಬೇಕು ಎಂದಿದೆ. ಜಿಲ್ಲಾಡಳಿತ ಜನರಿಂದ ಅಭಿಪ್ರಾಯ ಸಂಗ್ರಹಿಸಿದೆಯೇ? ಎಂದು ಪ್ರಶ್ನಿಸಿದ್ದಾರೆ.

ಕಳ್ಳುರು ಬರುವಂತೆ ಬೆಳಗಿನಜಾವ 3-4 ಗಂಟೆ ಸಮಯದಲ್ಲಿ ದೇವಾಲಯಗಳ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇದನ್ನು ಒಪ್ಪಲು ಸಾಧ್ಯವೇ ಇಲ್ಲ. ನನ್ನ ಧರ್ಮಕ್ಕೆ ಅನ್ಯಾಯವಾದಾಗ ಆಕ್ರೋಶ ವ್ಯಕ್ತವಾಗುವುದು ಸಹಜ. ದೇವಾಲಯಗಳನ್ನು ತೆರವುಗೊಳಿಸುವ ಮೂಲಕ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟುಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಡುಬೀದಿಯಲ್ಲಿ ಮಹಿಳೆಯ ಕೈಹಿಡಿದು ಎಳೆದಾಡಿದ ಜೆಡಿಎಸ್ ಮುಖಂಡ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button