*ರಂಗ ಸೃಷ್ಟಿಯಿಂದ ಕೃತಜ್ಞತಾ ಸಮರ್ಪಣೆ ಕಾರ್ಯಕ್ರಮ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಹೇಮರಡ್ಡಿ ಮಲ್ಲಮ್ಮ ನಾಟಕವನ್ನು ಅತ್ಯಂತ ಯಶಸ್ವಿಯಾಗಿ ಪ್ರದರ್ಶಿಸಿದ ಹಿನ್ನೆಲೆಯಲ್ಲಿ ರಂಗಸೃಷ್ಟಿ ತಂಡದ ಕಲಾವಿದರಿಗೆ ಕೃತಜ್ಞತೆ ಸಮರ್ಪಣೆ ಕಾರ್ಯಕ್ರಮ ಈಚೆಗೆ ನಡೆಯಿತು.
ಬೆಳಗಾವಿಯ ಸ್ಕೌಟ್ಸ್ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಲ್ಲ ಕಲಾವಿದರಿಗೆ ಗೌರವ ಕಾಣಿಕೆ ನೀಡಿ ಸನ್ಮಾನಿಸಲಾಯಿತು.
ರಂಗಸೃಷ್ಟಿ ಅಧ್ಯಕ್ಷ ಮತ್ತು ನಾಟಕದ ಪ್ರಾಯೋಜಕತ್ವ ವಹಿಸಿದ್ದ ರಮೇಶ ಜಂಗಲ್ ಅವರು ಮಾತನಾಡಿ, ನಿರೀಕ್ಷೆಗೂ ಮೀರಿ ನಾಟಕ ಯಶಸ್ವಿಯಾಗಿದೆ. ಸಭಾಭವನ ಕಿಕ್ಕಿರಿದು ತುಂಬಿದ್ದರಿಂದ ನೂರಾರು ಜನರು ವಾಪಸ್ ಹೋಗಬೇಕಾಯಿತು. ಇದರ ಶ್ರೇಯಸ್ಸು ಎಲ್ಲ ಕಲಾವಿದರಿಗೆ ಸಲ್ಲುತ್ತದೆ. ಹಾಗಾಗಿ ಎಲ್ಲ ಕಲಾವಿದರಿಗೆ ಧನ್ಯವಾದ ಮತ್ತು ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಬೇರೆಬೇರೆ ಕಡೆಗಳಿಂದ ಸಹ ನಾಟಕ ಪ್ರದರ್ಶನಕ್ಕೆ ಬೇಡಿಕೆ ಬರುತ್ತಿದೆ. ಆದಷ್ಟು ಶೀಘ್ರದಲ್ಲಿ ಧಾರವಾಡ ಮತ್ತು ಗದಗದಲ್ಲಿ ಪ್ರದರ್ಶನ ಹಮ್ಮಿಕೊಳ್ಳಲಾಗುವುದು ಎಂದರು.
ನಾಟಕ ರಚನೆಕಾರ ಡಾ.ರಾಮಕೃಷ್ಣ ಮರಾಠೆ, ಹೊಸಬರೂ ಸೇರಿದಂತೆ ಎಲ್ಲ ಕಲಾವಿದರೂ ಅತ್ಯಂತ ಮನೋಜ್ಞವಾಗಿ ಅಭಿನಯಿಸುವ ಮೂಲಕ ನಾಟಕವನ್ನು ಯಶಸ್ವಿಗೊಳಿಸಿದ್ದಾರೆ. ಎಲ್ಲರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.
ಇದೇ ವೇಳೆ, ನಾಟಕ ನಿರ್ದೇಶಕ ಶಿರೀಶ್ ಜೋಶಿ ದಂಪತಿಯ ವಿವಾಹ ವಾರ್ಷಿಕೋತ್ಸವ ಆಚರಿಸಿ, ಚಾರ್ ಧಾಮ ಪ್ರವಾಸಕ್ಕೆ ಹೊರಟಿರುವ ಸಂದರ್ಭದಲ್ಲಿ ಶುಭ ಕೋರಲಾಯಿತು. ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ವೇಮನ ಅಧ್ಯಯನ ಪೀಠದ ಸಂಯೋಜಕ ಎಚ್.ಬಿ.ನೀಲಗುಂದ ದಂಪತಿ ಉಪಸ್ಥಿತರಿದ್ದರು.
ರಂಗಸೃಷ್ಟಿಯ ಎಲ್ಲ ಪದಾಧಿಕಾರಿಗಳು ಹಾಗೂ ಕಲಾವಿದರು ಕುಟುಂಬ ಸಮೇತ ಉಪಸ್ಥಿತರಿದ್ದರು.