
ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಪಟ್ಟಣದ ಪೊಲೀಸ್ ಠಾಣೆಯಲ್ಲಿ ಕಳೆದ ವರ್ಷ ಇದೇ ತಿಂಗಳು ದಾಖಲಾಗಿದ್ದ ಪೋಕ್ಸೋ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿರುವ ಬೆಳಗಾವಿಯ ವಿಶೇಷ ಪೊಕ್ಸೋ ನ್ಯಾಯಾಲಯ ಪ್ರಕರಣ ದಾಖಲಾಗಿ ಒಂದು ವರ್ಷದ ಒಳಗೆ ಪ್ರಕರಣದ ತೀರ್ಪು ಪ್ರಕಟಿಸಿದೆ.
ಅಳ್ನಾವರ ತಾಲ್ಲೂಕು ಡೋರಿ ಗ್ರಾಮದ ಸಂಜಯ ವಿಠ್ಠಲ ಬೈಲೂರ ಎಂಬ ವ್ಯಕ್ತಿ ತನ್ನ ಸ್ವಂತ ಅಣ್ಣನ ಮಗಳು ಅಪ್ರಾಪ್ತೆ ಎಂದು ತಿಳಿದಿದ್ದರೂ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ಖಾನಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದ ತನಿಖೆ ನಡೆಸಿದ್ದ ಖಾನಾಪುರ ಠಾಣೆಯ ಇನ್ಸಪೆಕ್ಟರ್ ಎಲ್.ಎಚ್ ಗೌಂಡಿ ಹಾಗೂ ಬಸ್ ಇನ್ಸಪೆಕ್ಟರ್ ಎಂ.ಬಿ ಬಿರಾದಾರ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು. ಸರಕಾರಿ ಅಭಿಯೋಜಕ ಎಲ್.ವಿ ಪಾಟೀಲ ವಾದ ಮಂಡಿಸಿದ್ದರು.
ಪೊಲೀಸ್ ಠಾಣೆಯ ಸಿಬ್ಬಂದಿ ಮಂಜುನಾಥ ಮುಸಳಿ ತನಿಖಾ ಸಹಾಯಕರಾಗಿ ಕಾರ್ಯನಿರ್ವಹಿಸಿದ್ದರು. ಮಂಗಳವಾರ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ನ್ಯಾ.ಸಿ.ಎಮ್ ಪುಷ್ಪಲತಾ ಆರೋಪಿಗೆ 30 ವರ್ಷ ಕಾರಾಗೃಹ ಶಿಕ್ಷೆ ಹಾಗೂ 1 ಲಕ್ಷ ದಂಡವನ್ನು ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.
ಈ ತೀರ್ಪು ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ ಎಸಗುವವರಿಗೆ ಪಾಠವಾಗಲಿದೆ ಎಂದು ಖಾನಾಪುರ ಠಾಣೆಯ ಪೊಲೀಸರು ವಿಶ್ಲೇಷಿಸಿದ್ದಾರೆ.



