
https://youtu.be/WU0r_YdwcNM
ಪ್ರಗತಿವಾಹಿನಿ ಸುದ್ದಿ, ಶಿರಸಿ – ತುಂಬಾ ವಿಚಿತ್ರವಾಗಿ ಮತ್ತು ತೀವ್ರವಾಗಿ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತಿರುವ ಕೊರೋನ ಮಾರಕ ರೋಗವನ್ನು ತಡೆಗಟ್ಟಲು ಕೆಲವು ಮುನ್ನೆಚ್ಚರಿಕೆ ಕ್ರಮವನ್ನು ಅನುಸರಿಸಬೇಕು. ಅದಕ್ಕೆಂದೇ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಹಾಕಿದೆ. ಸಾಕಷ್ಟು ಮುಂದಾಲೋಚನೆಯೊಂದಿಗೆ ಹಾಕಿರುವ ಈ ಕ್ರಮಗಳಿಗೆ ನಾವೆಲ್ಲರೂ ಪೂರ್ಣವಾಗಿ ಸಹಕರಿಸೋಣ.
ಇದಲ್ಲದೇ ದೇವತಾ ಉಪಾಸನೆಯೂ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ ಎಂದು ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಜನತೆಗೆ ಸಂದೇಶ ನೀಡಿದ್ದಾರೆ.
ಕೊರೋನ ಎಂಬ ಮಾರಕ ಮಹಾರೋಗ ಜಗತ್ತಿನಾದ್ಯಂತ ಹರಡುತ್ತಿರುವುದು ದುರಾದೃಷ್ಟ. ತುಂಬಾ ಮುಂದುವರಿದ ದೇಶಗಳೇ ಇದನ್ನು ನಿಯಂತ್ರಿಸಲು ಆಗದೆ ತತ್ತರಿಸಿ ಹೋಗಿವೆ. ಒಂದು ದೃಷ್ಟಿಯಲ್ಲಿ ಈ ರೋಗ ತಡವಾಗಿ ಭಾರತಕ್ಕೆ ಬಂತು. ಇದರಿಂದ ಎಚ್ಚೆತ್ತುಕೊಳ್ಳುವುದಕ್ಕೆ ಅವಕಾಶವಾಗಿದೆ. ಆದ್ದರಿಂದ ಎಲ್ಲರೂ ಎಚ್ಚರಿಕೆಯಿಂದ ವರ್ತಿಸುವಲ್ಲಿ ಉಪೇಕ್ಷೆ ಮಾಡಬಾರದು, ಅಲಕ್ಷ್ಯ ಮಾಡಬಾರದು. ನಮ್ಮ ದೇಶದ ಸರ್ಕಾರ ಯಾವೆಲ್ಲ ಎಚ್ಚರಿಕೆ ಕ್ರಮಗಳನ್ನು ಅನುಸರಿಸಲು ಹೇಳಿದೆಯೋ ಅವೆಲ್ಲವನ್ನೂ ದೇಶದ ಉಳಿವಿಗಾಗಿ ಪಾಲಿಸಬೇಕು.
ಮನುಷ್ಯ ಪ್ರಯತ್ನದಿಂದ ಯಾವುದೇ ರೀತಿಯಲ್ಲಿ ಸಾಧ್ಯವಾಗದಾಗ ಭಗವಂತನ ಮೊರೆ ಹೋಗುವುದು ಅನಿವಾರ್ಯ. ಆ ದೃಷ್ಟಿಯಿಂದ ಶ್ರೀಮಠದಲ್ಲಿ ಸರ್ಕಾರದ ನಿರ್ಬಂಧನೆಗಳನ್ನು ಮೀರದೆ ಧಾರ್ಮಿಕ ಕಾರ್ಯಕ್ರಮಗಳನ್ನು ಆರಂಭಿಸಲಾಗಿದೆ. ೪೦೦ಕ್ಕೂ ಹೆಚ್ಚು ವೈದಿಕರಿಂದ ಒಂದೆರಡು ದಿನಗಳಲ್ಲಿ ಸಂಪನ್ನಗೊಳಿಸಬಹುದಾದ ಸಹಸ್ರಚಂಡೀ ಕಾರ್ಯಕ್ರಮವನ್ನು ಕೆಲವೇ ವೈದಿಕರು ಸಂಪನ್ನಗೊಳಿಸುತ್ತಿದ್ದಾರೆ. ಹೊರಗಿನಿಂದ ಯಾರನ್ನೂ ಕರೆಯದೆ ಮಠದ ಪರಿವಾರದವರೇ ಈ ಕೈಂಕರ್ಯವನ್ನು ನೆರವೇರಿಸುತ್ತಿದ್ದಾರೆ. ಇದಕ್ಕೆ ೨೫ಕ್ಕೂ ಹೆಚ್ಚು ದಿನಗಳು ಬೇಕಾಗಬಹುದು. ಅಲ್ಲದೇ ಮೃತ್ಯುಂಜಯ ಹವನ, ಮಹಾರುದ್ರ ಹವನ ಧನ್ವಂತರಿ ಹೋಮ, ಲಕ್ಷ್ಮೀನೃಸಿಂಹ ಹವನ, ವಿಷ್ಣು ಸಹಸ್ರನಾಮ ಪಾರಾಯಣ, ಮುಂತಾದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಭಕ್ತರಿಗೆ ಬರಲು ಅವಕಾಶ ಮಾಡಿ ಕೊಟ್ಟಿಲ್ಲ. ಆದರೆ ದೇಶದ ಕಲ್ಯಾಣವನ್ನು ಬಯಸಿ, ಜನರ ಉಳಿತನ್ನು ಭಗವಂತನಲ್ಲಿ ಪ್ರಾರ್ಥಿಸಿ ನಡೆಸಲಾಗುತ್ತಿದೆ.
ಕೊರೋನ ರೋಗಕ್ಕೆ ಔಷಧಿ ಇಲ್ಲ. ಇದಕ್ಕೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದೇ ಮುಖ್ಯ ಉಪಾಯ. ಆಧ್ಯಾತ್ಮಿಕ ಸಾಧನೆಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಸರಿಯಾಗಿ ಮಾಡಿದರೆ ಇದು ಅನುಭವಕ್ಕೆ ಬರುತ್ತದೆ. ಅಂದರೆ ಪ್ರಾಣಾಯಾಮ, ಜಪ, ಧ್ಯಾನ, ಸೋತ್ರ, ಪೂಜೆ ಇವುಗಳನ್ನು ಒಂದು ದಿನವೂ ತಪ್ಪದೆ ಮಾಡಿಕೊಂಡು ಹೋಗುತ್ತಿದ್ದರೆ ಅದು ರೋಗನಿರೋಧಕ ಶಕ್ತಿಯನ್ನು ಚೆನ್ನಾಗಿ ಬೆಳೆಸುತ್ತದೆ. ಆಧ್ಯಾತ್ಮಿಕ ಸಾಧನೆಯಿಂದ ಒಂದು ದಿವ್ಯ ಪ್ರಭಾವಲಯ ನಮ್ಮ ಶರೀರಕ್ಕೆ ಉಂಟಾಗುತ್ತದೆ. ಇದು ನಮ್ಮ ಮೇಲೆ ಎರಗುವ ಮಹಾರೋಗಗಳನ್ನು ತಡೆಯುತ್ತದೆ. ಇದು ಅನೇಕ ಸಾಧಕರ ಅನುಭವ ಕೂಡ. ಆದ್ದರಿಂದ ಎಲ್ಲರೂ ಶ್ರದ್ಧೆಯಿಂದ ತಮ್ಮ ಇಷ್ಟ ದೇವರ ಉಪಾಸನೆ ಮಾಡಬೇಕು.
ಒಟ್ಟಾರೆ ದೃಷ್ಟ ಹಾಗೂ ಅದೃಷ್ಟ ಅಂದರೆ ವ್ಯಾವಹಾರಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಎರಡೂ ರೀತಿಯ ಪ್ರಯತ್ನಗಳು ಒಟ್ಟಿಗೆ ಸೇರಿದಾಗ ಈ ಆಪತ್ತನ್ನು ದಾಟಲು ಸಾಧ್ಯವಾಗುತ್ತದೆ. ದೇವರ ಅನುಗ್ರಹ ಮತ್ತು ಮನುಷ್ಯನ ಪ್ರಯತ್ನ ಎರಡೂ ಎಲ್ಲಿ ಒಂದಾಗುತ್ತದೆಯೋ ಅಲ್ಲಿ ಯಶಸ್ಸು ಖಚಿತ ಎಂದು ನುಡಿದರು.
ದೇಶದಲ್ಲಿ ಉಂಟಾದ ಈ ಸೋಂಕಿನ ನಿವಾರಣೆಗಾಗಿ ಲಾಕ್ಡೌನ್ ಮಾಡಲಾಗಿದ್ದು ಆ ದಿಸೆಯಲ್ಲಿ ಅನೇಕ ಕಾರ್ಯಕರ್ತರು, ರಕ್ಷಣಾಸಿಬ್ಬಂದಿಗಳು, ಆರಕ್ಷಕದಳದವರು ಶ್ರಮಿಸುತ್ತಿದ್ದಾರೆ. ವೈದ್ಯರು ಅವಿರತವಾಗಿ ಶ್ರಮಿಸುತ್ತಿದ್ದಾರೆ. ಅನೇಕರು ದಾನಿಗಳು ಉದಾರವಾದ ಧನಸಹಾಯವನ್ನು ಮಾಡುತ್ತಿದ್ದಾರೆ. ಇವೆರಲ್ಲರೂ ಇಲ್ಲಿ ಅಭಿನಂದನಾರ್ಹರಾಗಿದ್ದಾರೆ. ಭಗವಂತನ ಅನುಗ್ರಹದಿಂದ ಇವರೆಲ್ಲರಿಗೂ ಶ್ರೇಯಸ್ಸುಂಟಾಗಲಿ, ಸೋಂಕಿತರು ಸೋಂಕುಮುಕ್ತರಾಗಲಿ, ಜಗತ್ತಿನಾದ್ಯಂತ ಹರಡಿದ, ಹರಡುತ್ತಿರುವ ಈ ಕರೋನ ಸಾಂಕ್ರಾಮಿಕ ಸೋಂಕು ನಿರ್ಮೂಲನೆ ಹೊಂದಲೆಂದು ಆಶಿಸಿದರು.
(ಪ್ರಗತಿವಾಹಿನಿ ಸುದ್ದಿಗಳನ್ನು ಎಲ್ಲರಿಗೂ ಕಳಿಸಿರಿ)