Kannada NewsKarnataka NewsLatest

ವೈದ್ಯಕೀಯ ಲೋಕಕ್ಕೆ ಹೋಮಿಯೋಪಥಿಕ್ ಕೊಡುಗೆ ಅಪಾರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -೧೩೦ ಕೋಟಿ  ಜನಸಂಖ್ಯೆ ಹೊಂದಿದ ಭಾರತದಂತಹ ದೇಶದಲ್ಲಿ ಸಾಮಾನ್ಯ ಮತ್ತು ಬಡ ಜನರಿಗೆ ಅವರ ಆದಾಯಕ್ಕೆ ತಕ್ಕಂತೆ ವೈದ್ಯಕೀಯ ಚಿಕಿತ್ಸೆ ನೀಡುತ್ತಿರುವ ಹೋಮೀಯೋಫಥಿ ಪದ್ದತಿ ವೈದ್ಯಕೀಯ ಲೋಕಕ್ಕೆ ಅಪಾರ ಕೊಡುಗೆಯನ್ನು ನೀಡಿದೆ ಎಂದು ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಎಸ್.ಎನ್.ಸತ್ಯನಾರಾಯಣ ಅವರು ಅಭಿಪ್ರಾಯ ವ್ಯಕ್ತ ಪಡಿಸಿದರು.

ಶನಿವಾರ ಬೆಳಗಾವಿಯ ಕೆ.ಎಲ್.ಇ. ಶತಮಾನೋತ್ಸವ ಕನ್ವೇನಷನ್ ಸೆಂಟರ್ ಸಭಾಗೃಹದಲ್ಲಿ ಹೋಮೀಯೋಪೆಥಿಕ ಮೆಡಿಕಲ್ ಅಸೋಸಿಯೇಶನ್ ವತಿಯಿಂದ ಹಾಗೂ ಕರ್ನಾಟಕ ಖಾಸಗಿ ಹೋಮೀಯೋಪಥಿಕ ವೈದ್ಯಕೀಯ ಮಹಾವಿದ್ಯಾಲಯಗಳ ಆಡಳಿತ ಮಂಡಳಿ ಸಂಘ, ಆಯುಷ್ಯ ಇಲಾಖೆ ಕರ್ನಾಟಕ ಸರಕಾರ, ಮತ್ತು ರಾಜೀವ ಗಾಂಧಿ ಆರೋಗ್ಯ ಮತ್ತು ವಿಜ್ಞಾನ ವಿಶ್ವ ವಿದ್ಯಾಲಯ ಇವುಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ಎರಡು ದಿನಗಳ ೨೧ ನೇ ಅಖಿಲ ಭಾರತೀಯ ಹೋಮಿಯೋಪೆಥಿಕ್ ವೈಜ್ಞಾನಿಕ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಇಂದು ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಸಂಶೋಧನೆಗಳು ನಡೆದಿವೆ. ಹೊಸ ಹೊಸ ಚಿಕಿತ್ಸೆ ಪದ್ದತಿಗಳು ಬಂದಿವೆ. ಆದರೆ ಹೋಮೀಯೋಪಥಿ ಚಿಕಿತ್ಸೆ ಪದ್ದತಿ ಅತ್ಯಂತ ಕಡಿಮೆ ದರದಲ್ಲಿ ಚಿಕಿತ್ಸೆಯನ್ನು ಗುಣಪಡಿಸುವ ವಿಧಾನವಾಗಿದೆ. ಹೋಮೀಯೋಪಥಿ ಚಿಕತ್ಸೆ ನೀಡುವ ಸಂದರ್ಭದಲ್ಲಿ ನೀಡಲಾಗುವ ಔಷಧಿಗಳು ಮನುಷ್ಯನ ದೇಹದ ಮೇಲೆ ಯಾವುದೇ ಅಡ್ಡ ಪರಿಣಾಮಗಳು ಬೀರುವುದಿಲ್ಲ. ಇದರಿಂದ ಕಡಿಮೆ ದರದಲ್ಲಿ ಮತ್ತು ಸೂಕ್ತ ಚಿಕಿತ್ಸೆ ಪಡೆಯಬಹುದಾಗಿದೆ ಎಂದು ಅವರು ಹೇಳಿದರು.

ಇಂದು ವಿಶ್ವದೆಲ್ಲೆಡೆ ಹೋಮೀಯೋಫಥಿಕ ಪದ್ದತಿಗೆ ಮಾನ್ಯತೆ ದೊರಕಿದೆ. ಹೋಮೀಯೋಫಥಿಕ ವೈದ್ಯಕೀಯ ಚಿಕಿತ್ಸೆಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯುವ ಸಂದರ್ಭದಲ್ಲಿ ಒಂದು ಕಾಲದಲ್ಲಿ ಬ್ರೀಟಿಷ ರಾಜವಂಶಸ್ಥರು ಸಹ ಹೋಮೀಯೋಫಥಿಕ ಚಿಕಿತ್ಸೆ ಪಡೆಯುತ್ತಿದ್ದರು ಎಂಬ ಅಂಶವನ್ನು ನಾವು ಕಾಣಬಹುದು. ಹೋಮೀಯೋಫಥಿ ವೈದ್ಯರೂ ಸಹ ರೋಗದ ಬಗ್ಗೆ ಖಚಿತ ಮಾಹಿತಿ ಪಡೆದು ಚಿಕಿತ್ಸೆ ನೀಡುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದು ಅವರು ತಿಳಿಸಿದರು.

ಕಾರ್ಯಾಗಾರದಲ್ಲಿ ಮುಖ್ಯ ಭಾಷಣ ನೀಡಿದ ನ್ಯಾನೋ ಮತ್ತು ಸಾಪ್ಟ್ ಮ್ಯಾಟರ‍್ಸ್ ಸಾಯಿನ್ಸ್ ಕೇಂದ್ರ ಬೆಂಗಳೂರು ವಿಜ್ಞಾನಿ ಡಾ. ಚನ್ನಬಸವೇಶ್ವರ ವ್ಹಿ.ಯಲಮಗ್ಗಡ ಅವರು , ಇಂದು ಹೋಮೀಯೋಪಥಿಕ ವೈದ್ಯಕೀಯ ಪದ್ದತಿ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.

ಹೋಮೀಯೋಪಥಿ ಚಿಕಿತ್ಸೆ ಲಾಭದಾಯಕ ಮತ್ತು ಪರಿಣಾಮಕಾರಿಯಾಗಿದೆ ಎಂಬುದರ ಬಗ್ಗೆ ಹಲವಾರು ಸಂಶೋಧನೆಗಳ ಮೂಲಕ ಕಂಡು ಬಂದಿದೆ. ಆದರೂ ಸಹ ಹೋಮೀಯೋಪಥಿಕ ಚಿಕಿತ್ಸೆ ಬಗ್ಗೆ ಮತ್ತು ಔಷಧಿಗಳ ಬಗ್ಗೆ ಸಂಶೋಧನೆಗಳು ಮತ್ತು ಅವಿಷ್ಕಾರಗಳು ನಡೆಯಬೇಕಾಗಿದೆ.

ಈ ನಿಟ್ಟಿನಲ್ಲಿ ಇಂದಿನ ಯುವ ವೈದ್ಯರು, ಸಮಾಜದ ವಿವಿಧ ಘಟಕಗಳೊಂದಿಗೆ ಚರ್ಚೆ -ಸಂವಾದ ನಡೆಸಿ ಸಂಶೋಧನೆಯನ್ನು ನಡೆಸಬೇಕಾಗಿದೆ. ಇದರಿಂದ ಜನ ಸಾಮನ್ಯರಿಗೆ ಶೀಘ್ರ ಮತ್ತು ಅತ್ಯಂತ ಪರಿಣಾಮಕಾರಿಯಾದ ಚಿಕಿತ್ಸೆ ನೀಡಲು ಅನಕೂಲವಾಗಿಲಿದೆ ಎಂದು ಅವರು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹೋಮೀಯೋಪಥಿಕ ಮೆಡಿಕಲ್ ಅಸೋಶಿಯೇಶನ ಆಫ್ ಇಂಡಿಯಾ ಸಂಸ್ಥೆಯ ಅಧ್ಯಕ್ಷ ಡಾ. ರಾಮಜೀ ಸಿಂಗ್ ಅವರು ಮಾತನಾಡಿ, ಹೋಮೀಯೋಪಥಿಕ ವೈದ್ಯಕೀಯ ಕ್ಷೇತ್ರಕ್ಕೆ ಅಗತ್ಯವಾಗಿರುವ ಎಲ್ಲ ಸವಲತ್ತುಗಳನ್ನು ಕೇಂದ್ರ ಸರಕಾರದಿಂದ ಪಡೆಯಲು ಸಂಘಟನೆ ಪ್ರಯತ್ನಶೀಲವಾಗಿದ್ದು, ಶೀಘ್ರದಲ್ಲಿಯೇ ಸರಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸಲಿದೆ. ಇದೀಗ ಬೆಳಗಾವಿಯಲ್ಲಿ ನಡೆಯುತ್ತಿರುವ ಕಾರ್ಯಾಗಾರ ಅತ್ಯಂತ ಯಶಸ್ವಿಯಾಗಿದ್ದು ೨೦೨೦ ರ ಕಾರ್ಯಾಗಾರವನ್ನು ಹೈದ್ರಾಬಾದನಲ್ಲಿ ನಡೆಸಲಾಗುವುದೆಂದು ಅವರು ತಿಳಿಸಿದರು.

ಸಮಾರಂಭದಲ್ಲಿ ಹಿರಿಯ ವೈದ್ಯರಾದ ಬೆಳಗಾವಿಯ ಡಾ.ಎಸ್.ಎಸ್.ಆದಿ, ಡಾ.ಎಂ.ಎಸ್.ಮುರುಗೋಡ, ಬೆಂಗಳೂರಿನ ಡಾ.ರಾಮದಾಸ, ಹಾಗೂ ಕಲಬುರ್ಗಿಯ ಡಾ.ಎಸ್.ಎಸ್.ಶೆಟ್ಟಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು. ವೇದಿಕೆ ಮೇಲೆ ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವ ವಿದ್ಯಾಲಯದ ನಿರ್ದೇಶಕ ಮುನಿರ ಅಹ್ಮದ, ಕೇಂದ್ರ ಹೋಮೀಯೋಪಥಿ ಸಂಶೋಧನೆ ಮಂಡಳಿಯ ನಿರ್ದೇಶಕ ಡಾ.ಅನಿಲ ಖುರಾನಾ, ಮಂಡಳಿಯ ಕಾರ್ಯದರ್ಶಿ ಡಾ. ಕುಮಾರ ವಿವೇಕಾನಂದ, , ಆಯುಷ್ಯ ಕಚೇರಿಯ ಜಂಟಿ ನಿರ್ದೇಶಕ ಪ್ರಕಾಶಕುಮಾರ, ಎಂ. ಕರ್ನಾಟಕ ಖಾಸಗಿ ಹೋಮೀಯೋಪಥಿಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಡಳಿತ ಮಂಡಳಿಯ ಅಸೋಶೀಯೇಶನ ಸಂಘಟನೆಯ ಉಪಾಧ್ಯಕ್ಷ ಜಗದೀಶ ಸವದತ್ತಿ, ಹೋಮೀಯೋಪಥಿಕ ಮೆಡಿಕಲ್ ಆಸೋಶೀಯೇಶನ ಉಪಾಧ್ಯಕ್ಷ ಡಾ.ಎಸ್.ಐ.ಹುಸೇನ, ಕಾರ್ಯದರ್ಶಿ ಡಾ.ಪಿಯುಶ ಜೋಶಿ, ಡಾ. ಅರುಣ ಭಸ್ಮೆ , ಡಾ. ಎಂ.ವಾಯ್ ಪೆರಿ ರಾಜಗೋಪಾಲ, ಡಾ. ಶಿವಕುಮಾರ ಆರ್. ಡಾ.ಡಿ.ಟಿ.ಬಾಮನೆ ಮೊದಲಾದವರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಡಾ. ವಿಜಯಶ್ರೀ ಅಂಗಡಿ ವಂದೆ ಮಾತರಂ ಹಾಡಿದರು. ಡಾ. ಇಂದಿರಾ ಕುಲಕರ್ಣಿ ಹಾಗೂ ಸಂಗಡಿಗರು ನಾಡಗೀತೆ ಪ್ರಸ್ತುತ ಪಡಿಸಿದರು. ಡಾ.ಶ್ರೀಕಾಂತ ಕೊಂಕಣಿ ಅತಿಥಿಗಳನ್ನು ಸ್ವಾಗತಿಸಿದರು. ಡಾ.ರಿಂಕು ಪೋರವಾಲ ಪರಿಚಯಿಸಿದರು. ಹೋಮಿಯೋಪೆಥಿ ಕೇಂದ್ರ ಮಂಡಳಿಯ ಆಡಳಿತ ಮಂಡಳಿ ಕಾರ್ಯನಿರ್ವಾಹಕ ಸದಸ್ಯ ನಾಡೋಜ ಡಾ. ಬಿ.ಟಿ.ರುದ್ರೇಶ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಆನಂದ ಕುಲಕರ್ಣಿ ವಂದಿಸಿದರು. ಡಾ.ಜ್ಯೋತಿ ದಾಭೋಳಕರ ಮತ್ತು ಡಾ. ಮಿಲಿಂದ ಬೆಳಗಾಂವಕರ ಕಾರ್ಯಕ್ರಮ ನಿರೂಪಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button