Kannada NewsLatestPragativahini Special

*ಸಮಾನತೆಯ ಹರಿಕಾರ, ಆಧುನಿಕ ಬಸವಣ್ಣ ಡಾ.ಬಾಬಾ ಸಾಹೇಬ್ ಅಂಬೇಡ್ಕರ್* *ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ವಿಶೇಷ ಲೇಖನ*

**

ಲಕ್ಷ್ಮೀ ಹೆಬ್ಬಾಳಕರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು

12ನೇ ಶತಮಾನದಲ್ಲಿ ಈ ಭೂಮಿಯಲ್ಲಿ ಸಮಾನತೆಯ ಸಂದೇಶ ಸಾರಿ ಹೋಗಿದ್ದ ಬಸವಣ್ಣ ಮತ್ತು 20ನೇ ಶತಮಾನದಲ್ಲಿ ಅದೇ ಸಂದೇಶವನ್ನು ಜಾರಿಗೊಳಿಸಲು ತಮ್ಮನ್ನು ತೊಡಗಿಸಿಕೊಂಡ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಇಬ್ಬರಲ್ಲೂ ನನಗೆ ಹಲವು ಸಾಮ್ಯತೆಗಳು ಕಾಣುತ್ತವೆ.

ಇಬ್ಬರದ್ದೂ ಧ್ಯೇಯ, ಉದ್ದೇಶ ಒಂದೇ ಆಗಿತ್ತು, ಸಮಾಜದಲ್ಲಿ ಮೇಲು, ಕೀಳು ಎನ್ನುವ ಭಾವನೆ ಇರಬಾರದು. ಎಲ್ಲರಿಗೂ ಬದುಕಿನ ಹಕ್ಕು ಸಮಾನವಾಗಿ ಸಿಗಬೇಕು, ನೈಸರ್ಗಿಕ ಸಂಪನ್ಮೂಲಗಳ ಬಳಕೆಗೆ ಸಮಾನ ಅಧಿಕಾರವಿರಬೇಕು. ಎಲ್ಲ ಹಕ್ಕುಗಳೂ ಸಮಾನವಿರಬೇಕು ಎನ್ನುವ ಉದ್ಧೇಶದೊಂದಿಗೆ ಅರಿವಿನ ಸಮಾಜ ನಿರ್ಮಿಸಿ, ಹೊಸ ಬೆಳಕನ್ನು ಕಾಣುವ ಕನಸು ಹೊತ್ತವರು. ಬಸವಣ್ಣ ಸಾರಿದ ಸಂದೇಶವನ್ನು ಅಕ್ಷರಶಃ ಜಾರಿಗೆ ತರಲು ಅಂಬೇಡ್ಕರ್ ಅವರು ತಮ್ಮ ಜೀವಿತಾವಧಿಯನ್ನು ಸಂಪೂರ್ಣವಾಗಿ ಬಳಸಿಕೊಂಡರು. ಸತ್ಯ, ಸಮಾನತೆ, ಸಹಿಷ್ಣುತೆ ಮಾನವ ಧರ್ಮದ ದೊಡ್ಡ ಆಸ್ತಿಗಳು ಎಂದು ಭಾವಿಸಿ, ಅದನ್ನು ಎಲ್ಲರಲ್ಲಿ ಕಾಣುವ ಕನಸನ್ನು ಹೊತ್ತವರು ಬಸವಣ್ಣ ಮತ್ತು ಅಂಬೇಡ್ಕರ್ ಅವರು.

Home add -Advt

ಸಮಾಜದಲ್ಲಿನ ಅಸಮಾನತೆಗಾಗಿ ಅಂಬೇಡ್ಕರ್ ಅವರಿಗೆ ಬಹಳ ದೊಡ್ಡ ಮಟ್ಟದ ಅಸಮಾಧಾನವಿತ್ತು. ಆದರೆ ಅದಕ್ಕಾಗಿ ಅವರೆಂದೂ ತಾಳ್ಮೆ ಕಳೆದುಕೊಳ್ಳಲಿಲ್ಲ, ಅಹಿಂಸೆಯ ಮಾರ್ಗ ತುಳಿಯಲಿಲ್ಲ. ಅತ್ಯಂತ ಸಮಾಧಾನದಿಂದಲೇ ಅರಿವನ್ನು ಮೂಡಿಸಲು ಪ್ರಯತ್ನಿಸಿದರು. ಅದೇ ತತ್ವದ ಆಧಾರದ ಮೇಲೆಯೇ ಸಂವಿಧಾನವನ್ನು ರಚಿಸಿದರು. ಅವರು ಜೀವಿತದುದ್ದಕ್ಕೂ ಯಾರನ್ನೂ ದ್ವೇಷಿಸಲಿಲ್ಲ. ಯಾರ ಹಕ್ಕುಗಳನ್ನೂ, ಅಧಿಕಾರವನ್ನೂ ಅವರು ಕಸಿದುಕೊಳ್ಳಲು ಬಯಸಿರಲಿಲ್ಲ. ಆದರೆ ಎಲ್ಲರನ್ನೂ ಸಮಾನವಾಗಿ ಕಾಣಬೇಕೆನ್ನುವುದಷ್ಟೆ ಅವರ ಬಯಕೆಯಾಗಿತ್ತು. ಮನುಷ್ಯನಾಗಿ ಹುಟ್ಟಿದವರು ಹೇಗೆ ಬದುಕಬಹುದು ಎಂದು ತೋರಿಸುವ ಮೂಲಕ ಇಡೀ ಮಾನವಕುಲಕ್ಕೆ ಆದರ್ಶರಾದರು.

ಅಂಬೇಡ್ಕರ್ ಅವರನ್ನು ಉಲ್ಲೇಖಿಸುವಾಗ ನಾವು ಕೇವಲ ಸಂವಿಧಾನ ಶಿಲ್ಪಿ ಎಂದರೆ ಸಾಲುವುದಿಲ್ಲ, ಮಹಾನ್ ಮಾನವತಾವಾದಿ ಎಂದರೂ ಪೂರ್ಣವಾಗುವುದಿಲ್ಲ,ಒಬ್ಬ ವ್ಯಕ್ತಿ ಏನೆಲ್ಲ ಆಗಬಹುದು,ಸಮಾಜಕ್ಕೆ ಏನೆಲ್ಲ ಒಳಿತು ಮಾಡಬಹುದು ಎನ್ನುವುದಕ್ಕೆ ಸಾಕ್ಷಿಯಾಗಿ ಜೀವಿಸಿದವರು. ಕಾನೂನು ತಜ್ಞರಾಗಿ, ಸಮಾಜ ಸುಧಾರಕರಾಗಿ,ಅರ್ಥ ಶಾಸ್ತ್ರಜ್ಞರಾಗಿ,ಪತ್ರಕರ್ತರಾಗಿ, ತತ್ವಜ್ಞಾನಿಯಾಗಿ, ಸಾಹಿತಿಯಾಗಿ ತಮ್ಮ ಇರುವಿಕೆಯನ್ನು ತೋರ್ಪಡಿಸಿದವರು.  ಹಾಗಾಗಿಯೇ ಅವರ ಹೆಸರೇ ನಮಗೆಲ್ಲ ಸ್ಫೂರ್ತಿ. ಸಾಧನೆಗೆ ಪ್ರೇರಣೆ. ಅವರ ಬದುಕು, ತತ್ವ, ಆದರ್ಶಗಳು ನಮ್ಮೆಲ್ಲರ ಪಾಲಿಗೆ ಸಾರ್ವಕಾಲಿಕ ಮಾರ್ಗದರ್ಶಕ. ಸಮಾನತೆಯಿಂದಲೇ ಪ್ರಗತಿ ಎನ್ನುವುದು ಅವರ ಪರಮೋಚ್ಛ ನಂಬಿಕೆಯಾಗಿತ್ತು.

1920ರ ದಶಕದಲ್ಲೇ ಎರಡೆರಡು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದ ಮಹಾನ್ ಚೇತನ ಅವರು.ಸಮಾಜದಲ್ಲಿ ಅಸಮಾನತೆ,ಅಸ್ಪೃಶ್ಯತೆ ತಾಂಡವವಾಡುತ್ತಿದ್ದ ಅಂದಿನ ದಿನಗಳಲ್ಲಿ ಅಮೇರಿಕಾದ ಕೊಲಂಬಿಯಾ ವಿಶ್ವವಿದ್ಯಾಲಯ ಮತ್ತು ಲಂಡನ್ ಸ್ಕೂಲ್ ಆಫ್ ಎಕಾನಾಮಿಕ್ಸ್ ನಿಂದ ಡಾಕ್ಟರೇಟ್ ಪದವಿ ಪಡೆದರು ಎಂದರೆ ಅವರ ಜೀವನೋತ್ಸಾಹ ಹೇಗಿತ್ತು ಎನ್ನುವುದನ್ನು ನಾವು ಊಹಿಸಲೂ ಸಾಧ್ಯವಾಗುವುದಿಲ್ಲ.

ಡಾಕ್ಟರೇಟ್ ಪದವಿ ಪಡೆದು ಹಿಂದಿರುಗಿದಾಗ ಮೊದಲಿನ ಷರತ್ತಿನಂತೆ ಬರೋಡಾದ ಮಹಾರಾಜರ ಆಸ್ಥಾನದಲ್ಲಿ ಸೈನ್ಯದ ಕಾರ್ಯದರ್ಶಿಗಳಾಗಿ ಕೆಲಸಕ್ಕೆ ಸೇರಿದರು. ಆದರೆ,  ಆಸ್ಥಾನಿಕ ಹಿರಿಯ ಮಂತ್ರಿಗಳು ಮಹಾರಾಜರಿಗೆ ತಿಳಿಯದಂತೆ ಇವರೊಂದಿಗೆ ಅಸ್ಪೃಶ್ಯತೆಯ ಆಚರಣೆ ಮೂಲಕ ಕಿರುಕುಳ ನೀಡುತ್ತಿದ್ದರು. ಸಾಮಾನ್ಯ ಸಿಪಾಯಿ ಕೂಡ ಇವರ ಫೈಲುಗಳನ್ನು ಮುಟ್ಟಿಸಿಕೊಳ್ಳುತ್ತಿರಲಿಲ್ಲ, ಉಳಿಯಲು ಆಸ್ಥಾನದಲ್ಲಿ ನಿವೇಶನ ನೀಡಲಿಲ್ಲ, ಮತ್ತು ಉಳಿದಿದ್ದ ಪಾರ್ಸಿ ಹೊಟೇಲ್ ನಿಂದ ಇವರನ್ನು ದಬ್ಬಿ ಹೊರಹಾಕಿದರು. ಅನಿವಾರ್ಯವಾಗಿ ಅಲ್ಲಿ ಕೆಲಸ ಮಾಡಲಾಗದೆ ಮುಂಬೈಗೆ ಬಂದರು. 

ತಮ್ಮ ಜೀವನದ ಗುರಿ ಸಾಧನೆಗಾಗಿ ಕೆಲಸ ಮಾಡುತ್ತಲೇ ಸಾಮಾಜಿಕ ಸಮಾನತೆಗಾಗಿ ಹೋರಾಟ ನಡೆಸಿದರು, ಅಸ್ಪೃಶ್ಯತೆ ವಿರುದ್ಧ ಸಮರ ಸಾರಿದರು. 

ತಾವು ವಿಶ್ವಾಸವಿಟ್ಟ ಜನರೂ ಕೂಡ ಸ್ವಾರ್ಥಕ್ಕೆ ಬಲಿಯಾದಾಗ ಅವರ ದುಃಖ ಇಮ್ಮಡಿಯಾಯಿತು. ಸಂವಿಧಾನದ ಮೂಲಕವೂ ಸಮಾನತೆಯನ್ನು ಸಾಧಿಸಲು ಪ್ರತ್ನಿಸಿದರು. ಆದರೆ, ಜನರ ಮನಸ್ಥಿತಿಯಲ್ಲಿ ಅಂತಹ ಬದಲಾವಣೆ ಕಾಣದಿದ್ದಾಗ ಒಂದು ರೀತಿಯಲ್ಲಿ ಅವರು ನಿರಾಶರಾಗಿದ್ದರು. ತಮ್ಮ ಹೋರಾಟವನ್ನು ಮುಂದುವರಿಸಲು ಅನಾರೋಗ್ಯದ ಕಾರಣದಿಂದ ಸಾಧ್ಯವಾಗುತ್ತಿಲ್ಲ ಎನ್ನುವ ನೋವನ್ನೂ ತೋಡಿಕೊಂಡರು. 

ಕೊನೆಗೆ, ತಮ್ಮದೇ ಸಮುದಾಯದ ಸ್ವಾರ್ಥಿಗಳ ಬಗೆಗೆ ಕೂಡ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು. ನಾನು ಇದುವರೆಗೆ ಏನನ್ನು ಸಾಧಿಸಿ ಪಡೆದಿರುವೆನೋ ಆ ಸಾಧನೆಯ ಫಲವನ್ನು ಶಿಕ್ಷಣ ಪಡೆದ ನನ್ನ ಸಮುದಾಯದ ಕೆಲವೇ ಕೆಲವು ಮಂದಿ ಅನುಭವಿಸಿ ಮಜಾ ಮಾಡುತಿದ್ದಾರೆ ಎಂದೂ ಆಕ್ರೋಶಗೊಂಡಿದ್ದರು. ನನ್ನ ಸಹಪಾಠಿಗಳಲ್ಲಿ ಯಾರಲ್ಲಿ ನಾನು ಈ ಚಳುವಳಿಯನ್ನು ಮುನ್ನಡೆಸುವರೆಂದು ನಂಬಿಕೆ ಮತ್ತು ವಿಶ್ವಾಸವಿರಿಸಿದ್ದೆನೊ ಅವರು ತಮ್ಮ ತಮ್ಮಲ್ಲೇ ನಾಯಕತ್ವ ಮತ್ತು ಅಧಿಕಾರಕ್ಕಾಗಿ ಕಚ್ಚಾಡುತ್ತಿದ್ದಾರೆ ಎಂದಿದ್ದರು. ಈ ಎಲ್ಲವನ್ನೂ ನೋಡಿ ಸಹಿಸಲಾಗದೆ, ತಮ್ಮ ನಂಬಿಕೆಗೆ ಅಪಚಾರವಾದಾಗ ಅಂತಿಮವಾಗಿ ಬೌದ್ಧ ಧರ್ಮ ಸ್ವೀಕರಿಸುವ ನಿರ್ಧಾರಕ್ಕೆ ಬಂದರು.

‘ನಾನು ಅಸ್ಪೃಶ್ಯತೆ ಆಚರಿಸುವುದಿಲ್ಲ ಮತ್ತು ಎಲ್ಲ ಮನುಷ್ಯರನ್ನು ಸಮಾನವಾಗಿ ಕಾಣುತ್ತೇನೆ. ಕೊಲ್ಲುವುದಿಲ್ಲ, ಕದಿಯುವುದಿಲ್ಲ, ತಪ್ಪಾದ ಲೈಂಗಿಕ ವರ್ತನೆ ತೋರುವುದಿಲ್ಲ, ಮದ್ಯ ಕುಡಿಯುವುದಿಲ್ಲ ಮತ್ತು ಸುಳ್ಳು ಹೇಳುವುದಿಲ್ಲ ಎಂಬ ಪಂಚಶೀಲ ತತ್ವಗಳನ್ನು ಅನುಸರಿಸುತ್ತೇನೆ. ಜ್ಞಾನ, ಸಹಾನುಭೂತಿ ಮತ್ತು ಕರ್ತವ್ಯದ ಮೂರು ಪ್ರಮುಖ ತತ್ವಗಳ ಆಧಾರದಲ್ಲಿ ನೆಲೆಯಾಗಿರುವ ಬೌದ್ಧ ಧರ್ಮ ಮಾತ್ರ ನಿಜವಾದ ಧರ್ಮ ಎಂದು ನಾನು ನಂಬಿದ್ದೇನೆ. ಹಾಗಾಗಿಯೇ ಹಿಂದೂ ಧರ್ಮವನ್ನು ತೊರೆದು ಬೌದ್ಧ ಧರ್ಮವನ್ನು ಅಪ್ಪಿಕೊಳ್ಳುವ ಮೂಲಕ ಹೊಸ ಹುಟ್ಟು ಪಡೆದುಕೊಂಡಿದ್ದೇನೆ’ ಎಂದು ಪ್ರಮಾಣಗೈದರು.

ಅರ್ಥಶಾಸ್ತ್ರಜ್ಞರಾಗಿ, ಸಮಾಜ ಸುಧಾರಕರಾಗಿ, ಕಾನೂನು ತಜ್ಞರಾಗಿ, ನ್ಯಾಯ ಶಾಸ್ತ್ರಜ್ಞರಾಗಿ, ಪತ್ರಕರ್ತರಾಗಿ, ಸಾಹಿತಿಗಳಾಗಿ, ಎಲ್ಲಕ್ಕಿಂತ ಹೆಚ್ಚಾಗಿ ಸಂವಿಧಾನ ಶಿಲ್ಪಿಗಳಾಗಿ ಅಂಬೇಡ್ಕರ್ ಅವರು ಈ ರಾಷ್ಟ್ರಕ್ಕೆ ನೀಡಿದ ಕೊಡುಗೆ ಅವಿಸ್ಮರಣೀಯ, ಅಮೋಘ. ಸ್ವತಂತ್ರ ಭಾರತದ ಮೊದಲ ಕಾನೂನು ಸಚಿವರಾಗಿ ನಮ್ಮೆಲ್ಲರಿಗೆ ಮೇಲ್ಪಂಕ್ತಿ ಹಾಕಿಕೊಟ್ಟವರು ಅಂಬೇಡ್ಕರ್ ಅವರು. ಇಡೀ ವಿಶ್ವದಲ್ಲೇ ಶ್ರೇಷ್ಟ ಸಂವಿಧಾನ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದು ಅಂಬೇಡ್ಕರ್ ಅವರು ಕೊಟ್ಟ ಭಾರತದ ಸಂವಿಧಾನ. ಇಂತಹ ನಾಡಿನಲ್ಲಿ ಜೀವಿಸುತ್ತಿರುವುದೇ ನಮಗೆಲ್ಲ ದೊಡ್ಡ ಹೆಮ್ಮೆ.

ಅವರ ಜೀವನ ಸಾಧನೆ ಸೂರ್ಯ ಚಂದ್ರರಿರುವವರೆಗೂ ಈ ಭೂಮಿಯ ಮೇಲಿರುವವರಿಗೆ ಪ್ರೇರಣೆಯಾಗಬೇಕು, ಆದರ್ಶವಾಗಬೇಕು. ಇಂದಿನ ಯುವಕರು ಅಂಬೇಡ್ಕರ್ ಅವರ ಆದರ್ಶವನ್ನು  ಓದಬೇಕು, ಬೆಳೆಯಬೇಕು, ಜೀವಿಸಬೇಕು. ಇದೇ ಅವರಿಗೆ ನಿಜವಾಗಿ ನಾವು ನೀಡಬಹುದಾದ ಕೊಡುಗೆ, ಇದೇ ನನ್ನ ಆಶಯ ಕೂಡ.

Related Articles

Back to top button