*ನಾಗರೀಕ ಸೌಲಭ್ಯ ನಿವೇಶನಗಳ ಹಂಚಿಕೆ ಪ್ರಕ್ರಿಯೆ ಪಾರದರ್ಶಕ: ಸಚಿವ ಬೈರತಿ ಸುರೇಶ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಾಗರೀಕ ಸೌಲಭ್ಯ ನಿವೇಶನಗಳ ಹಂಚಿಕೆ ಪ್ರಕ್ರಿಯೆಯು ಸಂಪೂರ್ಣ ಪಾರದರ್ಶಕವಾಗಿದ್ದು, ಸದ್ಯ ರಾಜ್ಯದಲ್ಲಿ ಯಾವುದೇ ಸಮಸ್ಯೆಗಳಿಲ್ಲ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನಾ ಸಚಿವರಾದ ಬೈರತಿ ಸುರೇಶ ಹೇಳಿದರು.
ನಗರಾಭಿವೃದ್ಧಿ ಇಲಾಖೆಯಿಂದ ಹಂಚಿಕೆ ಮಾಡುವ ಸಿ.ಎ. ನಿವೇಶನಗಳಿಗೆ ಸಾರ್ವಜನಿಕರು ನಿರಾಸಕ್ತಿ ತೋರಿಸುತ್ತಿರುವ ಬಗ್ಗೆ ಹಾಗೂ ಗುತ್ತಿಗೆಯನ್ನು ವಿಸ್ತರಿಸುವ ಪ್ರಕ್ರಿಯೆಯಲ್ಲಿ ಇಲಾಖೆಯು ಸಮರ್ಪಕವಾದ ನೀತಿಯನ್ನು ಅನುಸರಿಸುತ್ತಿಲ್ಲ ಎಂದು ಸದಸ್ಯರಾದ ಡಿ ಎಸ್ ಅರುಣ್ ಅವರು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರ ಗಮನ ಸೆಳೆಯುವ ಸೂಚನೆಯ ಮೇಲೆ ಮಾತನಾಡಿದ ಸಚಿವರು, ರಾಜ್ಯದಲ್ಲಿನ ನಗರಾಭಿವೃದ್ಧಿ ಪ್ರಾಧಿಕಾರಗಳಲ್ಲಿ ಮತ್ತು ನಗರ ಯೋಜನಾ ಪ್ರಾಧಿಕಾರಗಳಲ್ಲಿ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ (ನಾಗರೀಕ ಸೌಲಭ್ಯ ನಿವೇಶನ ಹಂಚಿಕೆ) ನಿಯಮಗಳು 1991 ರನ್ವಯ ಹಾಗೂ ಕರ್ನಾಟಕ ಯೋಜನಾ ಪ್ರಾಧಿಕಾರಗಳ (ನಾಗರೀಕ ಸೌಕರ್ಯ ನಿವೇಶನಗಳ ಹಂಚಿಕೆ) 2016 ರನ್ವಯ ಕ್ರಮವಾಗಿ ನಾಗರೀಕ ಸೌಲಭ್ಯ ನಿವೇಶನಗಳನ್ನು ಹಂಚಿಕೆ ಮಾಡಲಾಗುತ್ತಿದೆ.
ನಾಗರೀಕ ಸೌಲಭ್ಯ ನಿವೇಶನಗಳನ್ನು ಹಂಚಿಕೆ ಮಾಡಲು ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ (ನಾಗರೀಕ ಸೌಲಭ್ಯ ನಿವೇಶನ ಹಂಚಿಕೆ) ನಿಯಮಗಳು 1991ರ ನಿಯಮ 7 ಉಪ ನಿಯಮ (3) ರನ್ವಯ ನಾಗರಿಕ ಸೌಲಭ್ಯಗಳುಳ್ಳ ನಿವೇಶನಗಳ ಹಂಚಿಕೆಯ ಸಮಿತಿಯನ್ನು ರಚಿಸಬಹುದಾಗಿದೆ. ಈ ಸಮಿತಿಯು ನಿಯಮ 7(1) ರಲ್ಲಿನ ಅಂಶಗಳೊAದಿಗೆ ಪರಿಶೀಲಿಸಿ ನಾಗರೀಕ ಸೌಲಭ್ಯ ನಿವೇಶನ ಹಂಚಿಕೆ ಮಾಡಲು ಸಮಿತಿಯು ತೀರ್ಮಾನ ಕೈಗೊಳ್ಳುತ್ತದೆ. ಈ ತೀರ್ಮಾನವು ಪ್ರಾಧಿಕಾರದ ಅನುಮೋದನೆಗೆ ಒಳಪಟ್ಟಿರುತ್ತದೆ.
ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ (ನಾಗರೀಕ ಸೌಲಭ್ಯ ನಿವೇಶನಗಳ ಹಂಚಿಕೆ) ನಿಯಮಗಳು-1991 ನಿಯಮ-8(1)ರ ರೀತ್ಯಾ ಉಪನೋಂದಣಾಧಿಕಾರಿಗಳ ಮಾರ್ಗಸೂಚಿ ಬೆಲೆಯನ್ನು ಅನುಸರಿಸಿ ಗುತ್ತಿಗೆ ಮೊತ್ತದ ದರವನ್ನು ನಿಗಧಿಪಡಿಸಬೇಕಾಗುತ್ತದೆ. ಅದರಂತೆ ಸಂಬAಧಪಟ್ಟ ನಗರಾಭಿವೃದ್ಧಿ ಪ್ರಾಧಿಕಾರಗಳು ಮತ್ತು ನಗರ ಯೋಜನಾ ಪ್ರಾಧಿಕಾರಗಳು ನಾಗರೀಕ ಸೌಕರ್ಯ ನಿವೇಶನಗಳನ್ನು ಗುತ್ತಿಗೆ ಆಧಾರದ ಮೇಲೆ 30 ವರ್ಷಗಳ ಅವಧಿಗೆ ನೀಡುತ್ತಿರುತ್ತದೆ.
ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ (ನಾಗರೀಕ ಸೌಲಭ್ಯ ನಿವೇಶನಗಳ ಹಂಚಿಕೆ) ನಿಯಮಗಳು-1991 8(1) ರಂತೆ ಗುತ್ತಿಗೆ ಮೌಲ್ಯದ ಹೆಚ್ಚುವರಿ ಶೇ.50 ರಂತೆ ಗುತ್ತಿಗೆ, ಮೌಲ್ಯವನ್ನು ನಿಗಧಿಪಡಿಸಿ ನಿಯಮ-10 (14)ರನ್ವಯ ಸಿ.ಎ ನಿವೇಶನಗಳ ನವೀಕರಣವನ್ನು ಸರ್ಕಾರದ ಪೂರ್ವಾನುಮೋದನೆಯನ್ನು ಪಡೆದು ಮುಂದಿನ 30 ವರ್ಷಗಳ ಅವಧಿಗೆ ಗುತ್ತಿಗೆ ಅವಧಿಯನ್ನು ವಿಸ್ತರಿಸಬೇಕಾಗಿರುತ್ತದೆ.
ರಾಜ್ಯದ ನಗರಾಭಿವೃದ್ಧಿ ಪ್ರಾಧಿಕಾರಗಳಿಗೆ ಮತ್ತು ನಗರ ಯೋಜನಾ ಪ್ರಾಧಿಕಾರಗಳಿಗೆ ಸರ್ಕಾರದ ವತಿಯಿಂದ ಯಾವುದೇ ಅನುದಾನವನ್ನು ನೀಡುವುದಿಲ್ಲ. ಪ್ರಾಧಿಕಾರಗಳು ಸ್ವಂತ ಆರ್ಥಿಕ ಸಂಪನ್ಮೂಲಗಳನ್ನು ಕ್ರೋಢೀಕರಿಸಿಕೊಂಡು ಕಾರ್ಯ ನಿರ್ವಹಿಸುತ್ತವೆ.
ನಾಗರೀಕ ಸೌಲಭ್ಯ ನಿವೇಶನವನ್ನು ಗುತ್ತಿಗೆ ಆಧಾರದ ಮೇಲೆ ಸಂಘ ಸಂಸ್ಥೆಗಳಿಗೆ ಮಾರುಕಟ್ಟೆ ಮೌಲ್ಯಕ್ಕಿಂತ ಕಡಿಮೆ ದರವನ್ನು ನಿಗಧಿಗೊಳಿಸಿ ಹಂಚಿಕೆ ಮಾಡಿದ್ದಲ್ಲಿ, ಪ್ರಾಧಿಕಾರಗಳಿಗೆ ಆರ್ಥಿಕ ನಷ್ಟ ಉಂಟಾಗುತ್ತದೆ.
ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ (ನಾಗರೀಕ ಸೌಲಭ್ಯ ನಿವೇಶನ ಹಂಚಿಕೆ) ನಿಯಮಗಳು, 1991 ರ ನಿಯಮ 8(4) ರಂತೆ ಹಾಗೂ ಯೋಜನಾ ಪ್ರಾಧಿಕಾರಗಳು (ನಾಗರೀಕ ಸೌಲಭ್ಯ ನಿವೇಶನ ಹಂಚಿಕೆ) ನಿಯಮಗಳು, 2016 ರ ನಿಯಮ 13(4) ರಂತೆ ವಿಕಲಚೇತನರು ಹಾಗೂ ಬುದ್ಧಿಮಾಂದ್ಯರ ಕಲ್ಯಾಣಕ್ಕಾಗಿ ಸ್ಥಾಪಿಸಲಾಗಿರುವ ಸಂಸ್ಥೆಗಳು, ಕೇವಲ ಕನ್ನಡ ಮಾಧ್ಯಮದಲ್ಲಿ ಶಾಲೆಯನ್ನು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳು, ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ವರ್ಗದ ಸಂಸ್ಥೆಗಳು ಮತ್ತು ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರಗಳ ಇಲಾಖೆಗಳು ಮತ್ತು ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದಿಂದ ಸ್ಥಾಪಿಸಲ್ಪಟ್ಟ ನಿಗಮ ಅಥವಾ ಯಾವುದೇ ಸಂಸ್ಥೆಗಳಿಗೆ ಪ್ರಾಧಿಕಾರವು ನಿಗಧಿಪಡಿಸಿದ ಗುತ್ತಿಗೆ ಹಣದ ಪೈಕಿ ಶೇ.50 ರಷ್ಟರ ದರದಲ್ಲಿ ಹಂಚಿಕೆ ಮಾಡಲು ಅವಕಾಶ ಕಲ್ಪಿಸಲಾಗಿರುತ್ತದೆ.
ನಾಗರೀಕ ಸೌಲಭ್ಯ ನಿವೇಶನಗಳ ಹಂಚಿಕೆಗೆ ಸಂಬಂಧಿಸಿದಂತೆ ಒಂದಕ್ಕಿಂತ ಹೆಚ್ಚು ಅರ್ಜಿದಾರರಿದ್ದಲ್ಲಿ ಲಾಟರಿ ಮುಖಾಂತರ ಹಂಚಿಕೆ ಮಾಡುವ ವ್ಯವಸ್ಥೆ ಜಾರಿಯಲ್ಲಿದೆ. ಗುತ್ತಿಗೆ ನವೀಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ (ನಾಗರಿಕ ಸೌಲಭ್ಯ ನಿವೇಶನಗಳ ಹಂಚಿಕೆ) ನಿಯಮಗಳು, 1991 ಮತ್ತು ಕರ್ನಾಟಕ ಯೋಜನಾ ಪ್ರಾಧಿಕಾರಗಳ (ನಾಗರಿಕ ಸೌಲಭ್ಯ ನಿವೇಶನಗಳ ಹಂಚಿಕೆ) ನಿಯಮಗಳು, 2016 ರಲ್ಲಿ ಗುತ್ತಿಗೆಯನ್ನು ನವೀಕರಿಸಲು ಸ್ಪಷ್ಟ ಅವಕಾಶವಿರುತ್ತದೆ. ಆದುದರಿಂದ, ಈ ವಿಷಯದಲ್ಲಿ ಯಾವುದೇ ಗೊಂದಲಗಳಿಗೆ ಆಸ್ಪದವಿರುವುದಿಲ್ಲ ಎಂದು ಸಚಿವರು ತಿಳಿಸಿದರು.
ಈಗ ಇರುವ ನಿವೇಶನಗಳಿಗೆ ಬೇಡಿಕೆಯಿಲ್ಲ. ಈಗ ನಿರ್ಮಿಸಿರುವ ನಿವೇಶನಗಳ ಹಸ್ತಾಂತರ ಪ್ರಕ್ರಿಯೆ ಮಾಡಿಲ್ಲ. ಸಿಎ ಸೈಟ್ಗಳನ್ನು ಎಸ್ಸಿ ಮತ್ತು ಎಸ್ಟಿಗಳಿಗೆ ಕಾಯ್ದಿರಿಸಬೇಕು ಎಂದು ಡಿ.ಎಸ್.ಅರುಣ ಅವರು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಸಿಎ ಸೈಟ್ಗಳನ್ನು ಪರಬಾರೆ ಮಾಡಲು ಬರುವುದಿಲ್ಲ. ಎಸ್ಸಿ ಮತ್ತು ಎಸ್ಟಿಗಳಿಗೆ ಮಿತಿ ಹೇರಲು ಸಾಧ್ಯವಿಲ್ಲ. ಎಸ್ ಆರ್ ವ್ಯಾಲ್ಯು ಬಗ್ಗೆ ಪರಿಶೀಲಿಸಲಾಗುವುದು ಎಂದು ತಿಳಿಸಿದರು.




