Latest

ಕಗ್ಗದಿಂದ ಜೀವನ ಮೌಲ್ಯದ ಚಿಂತನೆಯ ಎತ್ತರ; ಸ್ವರ್ಣವಲ್ಲೀ ಶ್ರೀ

ಪ್ರಗತಿವಾಹಿನಿ ಸುದ್ದಿ, ಶಿರಸಿ: “ಮಂಕು ತಿಮ್ಮನ ಕಗ್ಗ ಓದಿದರೆ, ಅರ್ಥ ಮಾಡಿಕೊಂಡರೆ ಜೀವನ ಮೌಲ್ಯದ ಚಿಂತನೆಯು ಎತ್ತರಕ್ಕೇರುತ್ತದೆ” ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶರಾದ ಶ್ರೀಗಂಗಾಧರೇಂದ್ರ ಸರಸ್ವತೀ‌ ಸ್ವಾಮೀಜಿಗಳು ನುಡಿದರು.

ನಗರದ ಯೋಗ ಮಂದಿರದಲ್ಲಿ ಶುಕ್ರವಾರ ದಿಂದ ಪ್ರಾರಂಭಿಸಿದ ಆರು ದಿನಗಳ ಮಂಕು ತಿಮ್ಮನ ಕಗ್ಗದ ಕುರಿತು ವಿಶೇಷ ಪ್ರವಚನ ಮಾಲಿಕೆಗೆ ಚಾಲನೆ ನೀಡಿ ಆಶೀರ್ವಚನ ನುಡಿದರು.

“ಕಗ್ಗವು ಮನುಷ್ಯನಿಗೆ ಬೇಕಾದ ಜೀವನ ಮೌಲ್ಯ, ಅದರೊಳಗಿನ ನೋಟ ನೀಡುವ ಸರಳ ಪದ್ಯಗಳ ಗುಚ್ಛ ಹೊಂದಿರುವ ಅಪರೂಪ ಕೃತಿ, ಗ್ರಂಥ. ಇಂಥ ಗ್ರಂಥಗಳು ಅಪರೂಪ. ಇದು ನಮಗೂ ಇಷ್ಟವಾದ ಕೃತಿ.ಹಾಗಾಗಿ ಸ್ವತಃ ಈ ಬಗ್ಗೆ ಕಳೆದ ಐದು ವರ್ಷಗಳಿಂದ ಪ್ರವಚನ ನಡೆಸುತ್ತಿದೆ” ಎಂದು ಅವರು ತಿಳಿಸಿದರು.

ಕಗ್ಗದ ಕುರಿತು‌ ನುಡಿದ ಶ್ರೀಗಳು, “ಮನುಷ್ಯ ಜನ್ಮ‌ ದೊಡ್ಡದು. ದೈವ ಫಲ, ನಮ್ಮ ಪ್ರಯತ್ನ, ನಮ್ಮ ಕರ್ಮಗಳು ನಮ್ಮ ಜೀವನದಲ್ಲಿ ಕೆಲಸ ಮಾಡುತ್ತವೆ. ಈ ಮೂರು ಸಂಗತಿಗಳು ಜೀವವನ್ನು ಆಟ‌ ಆಡಿಸುತ್ತವೆ. ಅವರ ಆಟದ ಎಲೆಗಳು ನಾವು. ಜೀವ ಸಮೂಹವನ್ನು ಕಲೆಸಿ ಕೊಡುವದೇ ಸೃಷ್ಟಿ. ಅದು ಜೀವಗಳನ್ನು ಒಯ್ಯುವುದು, ಮರಳಿ ತರುವುದು ಮಾಡುತ್ತಿರುತ್ತದೆ. ಇವು ಜನ್ಮಗಳೇ ಆಗಿವೆ ಎಂದೂ ಜೀವನ ಮರ್ಮದ‌ ಕುರಿತು ಕಗ್ಗ ತಿಳಿಸುತ್ತದೆ” ಎಂದರು.

“ವಿಧಿ ಆಟದ ಮುಂದೆ ಯಾವುದೂ, ಯಾರೂ ತಡೆಯಲು ಸಾಧ್ಯ ಇಲ್ಲ. ಜೀವಗಳ ಸುತ್ತುವಿಕೆಯೇ ಭಗವಂತನ ಆಟ. ಈ ಚಿಂತನೆ ಅರ್ಥ ಮಾಡಿಕೊಂಡರೆ ಜೀವನ ಸುಲಭ ಆಗುತ್ತವೆ” ಎಂದು ಶ್ರೀಗಳು ವಿಶ್ಲೇಷಿಸಿದರು.

ಮಾ.27 ಹೊರತುಪಡಿಸಿ 30ರ ತನಕ ಮಂಕು ತಿಮ್ಮನ ಕಗ್ಗದ ಕುರಿತು ಪ್ರವಚನ ಶ್ರೀಗಳು ನೀಡಲಿದ್ದಾರೆ. ವಿದ್ವಾನ್ ಶಂಕರ ಭಟ್ಟ ಉಂಚಳ್ಳಿ ಅವರ ಕಗ್ಗದ ಪದ್ಯ ಹಾಡಲಿದ್ದಾರೆ. ಪ್ರವಚನದ ವೇಳೆ ಶಿಷ್ಯರು, ಮಾತೆಯರು, ಯೋಗ ಮಂದಿರದ ಪ್ರಮುಖರು ಪಾಲ್ಗೊಳ್ಳುತ್ತಿದ್ದಾರೆ.

https://pragati.taskdun.com/winds-of-change-in-karnataka-chief-minister-basavaraja-bommai/
https://pragati.taskdun.com/4-5-lakh-cash-seized-in-arabavi-constituency/
https://pragati.taskdun.com/liquor-seized-near-yaragatti/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button