
ಪ್ರಗತಿವಾಹಿನಿ ಸುದ್ದಿ: ಶಾಸಕ ಯತ್ನಾಳ ಅವರನ್ನು ಬಿಜೆಪಿ ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಲಾಗಿದ್ದು, ಸತ್ಯವಂತರಿಗೆ ಇದು ಕಾಲವಲ್ಲ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಯತ್ನಾಳ ಬರೆದುಕೊಂಡಿದ್ದಾರೆ.
ಸತ್ಯವಂತರಿಗಿದು ಕಾಲವಲ್ಲ. ದುಷ್ಟಜನರಿಗೆ ಸುಭಿಕ್ಷಕಾಲ. ಉಪಕಾರ ಮಾಡಿದರೆ ಅಪಕರಿಸುವ ಕಾಲ. ಸಕಲವು ತಿಳಿದವಗೆ ದುರ್ಭಿಕ್ಷ ಕಾಲ. ಧರ್ಮ ಮಾಡುವಗೆ ನಿರ್ಮೂಲವಾಗುವ ಕಾಲ. ಕರ್ಮಿ ಪಾತಕರಿಗೆ ಬಹು ಸೌಖ್ಯಕಾಲ. ಸತ್ಯವಂತರಿಗಿದು ಕಾಲವಲ್ಲ ಎಂದು ಬರೆದುಕೊಂಡಿದ್ದಾರೆ.
ನೇರವಾಗಿ ಸತ್ಯವನ್ನು ಹೇಳಿದ್ದಕ್ಕಾಗಿ ಪಕ್ಷವು ನನಗೆ ಪ್ರತಿಫಲ ನೀಡಿದೆ ಎಂದು ನಾನು ಭಾವಿಸಿದ್ದೇನೆ. ಕೆಲವು ವೈಯಕ್ತಿಕ ಸ್ವಾರ್ಥಗಳನ್ನು ಹೊಂದಿರುವವರು ತಮ್ಮ ಗುರಿಗಳನ್ನು ಯಶಸ್ವಿಯಾಗಿ ಮುಂದುವರಿಸುವಲ್ಲಿ ಪಾತ್ರ ವಹಿಸಿದ್ದಾರೆ. ಆದರೆ, ನನ್ನನ್ನು ಅಮಾನತುಗೊಳಿಸುವ ಈ ನಿರ್ಧಾರವು ಭ್ರಷ್ಟಾಚಾರ, ಕುಟುಂಬ ರಾಜಕೀಯ, ಉತ್ತರ ಕರ್ನಾಟಕದ ಅಭಿವೃದ್ಧಿ ಮತ್ತು ಹಿಂದುತ್ವಕ್ಕಾಗಿ ನನ್ನ ಹೋರಾಟವನ್ನು ತಡೆಯಲಾರದು.
ನಾನು ಈಗಲೂ ಅದೇ ಉತ್ಸಾಹ ಮತ್ತು ದೃಢತೆಯೊಂದಿಗೆ ನನ್ನ ಜನರ ಸೇವೆಯನ್ನು ಮುಂದುವರಿಸುತ್ತೇನೆ ಎಂದು ಯತ್ನಾಳ್ ಬರೆದುಕೊಂಡಿದ್ದಾರೆ. ನನ್ನ ಎಲ್ಲಾ ಕಾರ್ಯಕರ್ತರು, ಶುಭಚಿಂತಕರು, ಸ್ನೇಹಿತರು, ಪರಿಚಿತರು, ಸ್ವಾಮೀಜಿಗಳು, ಮಾಧ್ಯಮಗಳು, ಬೆಂಬಲದ ಆಧಾರಸ್ತಂಭವಾಗಿರುವ ನನ್ನ ಕುಟುಂಬ ಮತ್ತು ಸರ್ವಶಕ್ತ ದೇವರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ.
ಈ ಕ್ಷಣದಲ್ಲಿ ಪುರಂದರ ದಾಸರ ಮಾತುಗಳು ನೆನಪಾಗುತ್ತವೆ, ಅವರು ಹೇಳಿದಂತೆ ಸತ್ಯವಂತರಿಗಿದು ಕಾಲವಲ್ಲ ದುಷ್ಟಜನರಿಗೆ ಸುಭಿಕ್ಷಕಾಲ. ಪಕ್ಷದ ಈ ನಿರ್ಧಾರದ ಬಳಿಕವೂ ನನ್ನ ಧೈಯದಲ್ಲಿ ಯಾವುದೇ ಬದಲಾವಣೆ ಇಲ್ಲ. ಉತ್ತರ ಕರ್ನಾಟಕದ ಅಭಿವೃದ್ಧಿ ಮತ್ತು ಭ್ರಷ್ಟಾಚಾರದ ವಿರುದ್ಧದ ಹೋರಾಟವನ್ನು ಮುಂದುವರಿಸುತ್ತೇನೆ. ನನ್ನ ಜನರಿಗಾಗಿ ಸೇವೆ ಸಲ್ಲಿಸುವ ನನ್ನ ಸಂಕಲ್ಪ ಇನ್ನಷ್ಟು ಬಲವಾಗಿದೆ ಎಂದು ಯತ್ನಾಳ್ ಬರೆದುಕೊಂಡಿದ್ದಾರೆ.