Kannada NewsKarnataka NewsLatest

ಕೆರಳಿ ಕೆಂಡವಾದ ಶಾಸಕಿ

 ಪ್ರಗತಿವಾಹಿನಿ ಸುದ್ದಿ, ಕಕ್ಕೇರಿ: ಖಾನಾಪುರ ತಾಲೂಕಿನ ಮುಂಡವಾಡ ಗ್ರಾಮದ ವ್ಯಾಪ್ತಿಯಲ್ಲಿ ಧಾರವಾಡ – ರಾಮನಗರ ರಾಜ್ಯ ಹೆದ್ದಾರಿ -೩೪ ರ ಸುಂಕ ವಸೂಲಿ ಕೇಂದ್ರವು ಬರುತ್ತದೆ.

ಸ್ಥಳೀಯ ವಾಹನಗಳಿಗೆ ಟೋಲ್ ವಸೂಲಿ ರದ್ದುಗೊಳಿಸಲು ಶಾಸಕಿ ಡಾ.ಅಂಜಲಿ ನಿಂಬಾಳಕರ  ಕಟ್ಟು ನಿಟ್ಟಿನ ಆದೇಶ ನೀಡಿದರು. ಭಾರೀ ಸುಂಕ ವಸೂಲಿ ಮಾಡುತ್ತಿದ್ದುದನ್ನು ಖಾನಾಪುರ ಶಾಸಕಿ ಡಾ.ಅಂಜಲಿ ಹೇಮಂತ ನಿಂಬಾಳಕರ ಅವರು ಗಂಭೀರವಾಗಿ ಪರಿಗಣಿಸಿದರು.

ಈ ಟೋಲ್ ಕೇಂದ್ರ ಸಮೀಪದ ಮುಂಡವಾಡ ಗ್ರಾಮದ ರೈತರು ನಿತ್ಯ ಬೆಳಗಾದರೆ ತಮ್ಮ ಜಮೀನುಗಳಿಗೆ ಮತ್ತು ಸುತ್ತಲಿನ ಗ್ರಾಮಗಳಿಗೆ ಹೋಗಬೇಕೆಂದರೆ ಕನಿಷ್ಠ ೧೫೦ ರೂ. ಗಳನ್ನು ಪ್ರತಿ ಸಲದ ಪ್ರಯಾಣಕ್ಕೆ ಟೋಲ್ ಕರವನ್ನು ಭರಿಸಬೇಕು. ಸ್ಥಳೀಯ ಗ್ರಾಮಗಳ ಸಾರ್ವಜನಿಕರು ತಮ್ಮ ಈ ಕರಭಾರದ ಅಳಲನ್ನು ಶಾಸಕಿ ಡಾ.ಅಂಜಲಿ ಹೇಮಂತ ನಿಂಬಾಳಕರ ಅವರ ಗಮನಕ್ಕೆ  ತಂದಾಗ ಇದಕ್ಕೊಂದು ಮುಕ್ತಿ ಕಾಣಿಸಲು ನಿರ್ಧರಿಸಿದ್ದರು.

ಶುಕ್ರವಾರ ಲೋಂಡಾ ಗ್ರಾಮದ ಪೂರ್ವ ನಿರ್ಧಾರಿತ ಕಾರ್ಯಕ್ರಮಗಳಿಗೆ ಹಾಜರಾಗಲು ಹೋಗುವ ಸಂದರ್ಭದಲ್ಲಿ  ಟೋಲ್ ಹಾವಳಿ ನೆನಪಾಗಿ, ಕಾರ್ಯಪ್ರವರ್ತರಾದ ಶಾಸಕಿ ಡಾ.ಅಂಜಲಿ ಅವರು ಜಿವಿಆರ್ ಕಂಪನಿಯ ಸುಂಕ ವಸೂಲಿ ಕೇಂದ್ರಕ್ಕೆ ಭೇಟಿ ನೀಡಿದರು.  ಕರವಸೂಲಿ ಹುಡುಗನ ದುಂಡಾವರ್ತನೆ ಶಾಸಕರನ್ನು ಮತ್ತಷ್ಟು ಕೆರಳಿಸಿತು. ಅನ್ಯಾಯದ ವಿರುದ್ಧ ಒಂದು ಪ್ರತಿಭಟನೆಯನ್ನು ಮಾಡಿ, ಕರ ವಸೂಲಿ ಮ್ಯಾನೇಜರ್ ಮತ್ತು ಅವರ ಮುಖ್ಯ ಸಂಚಾಲಕರೊಂದಿಗೆ ನೇರವಾಗಿ ಫೋನನಲ್ಲಿ ಮಾತನಾಡಿದರು.

೫ ಕಿ.ಮೀ. ವ್ಯಾಪ್ತಿಯ ಸ್ಥಳೀಯರಿಗೆ ಆಧಾರಕಾರ್ಡ ಪರಿಶೀಲಿಸಿ ವಾಹನ ಮಾಲಕರಿಗೆ ಗುರುತಿನ ಚೀಟಿ ನೀಡಬೇಕು. ಅದನ್ನು ಹೊಂದಿದವರಿಗೆ ಟೋಲ್ ನಿಂದ ಸಂಪೂರ್ಣ ವಿನಾಯಿತಿ ನೀಡಬೇಕು. ಇಲ್ಲವಾದರೆ ನಮ್ಮ ತಾಲೂಕು ಬಿಟ್ಟು ಹೊರಗಡೆ ತಮ್ಮ ಕೇಂದ್ರವನ್ನು ವರ್ಗಾಯಿಸಬೇಕು ಎಂದು ಶಾಸಕರು ಸುಂಕ ವಸೂಲಿ ಜಿವಿಆರ್ ಕಂಪನಿಯ ಮ್ಯಾನೇಜರ್ ಗೆ ಕಟ್ಟು ನಿಟ್ಟಿನ ಆದೇಶ ನೀಡಿದರು. ಈ ಸುಂಕ ವಿನಾಯತಿ ನಿರ್ಧಾರಕ್ಕೆ ಬರಲು ಅವರಿಗೆ ಎರಡು ದಿನಗಳ ಕಾಲಾವಕಾಶವನ್ನು ನೀಡಿದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button