Belagavi NewsBelgaum News

*ಒಂದೇ ದಿನ ಎರಡು ಲಿವರ್ ಕಸಿ ಯಶಸ್ವಿ: ಅಂಗಾಂಗ ಕಸಿಯಲ್ಲಿ ಮತ್ತೊಮ್ಮೆ ಸಾಧನೆ ಮಾಡಿದ ಕೆ.ಎಲ್.ಇ ಆಸ್ಪತ್ರೆ ವೈದ್ಯರು*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಡಾ ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರವು ಒಂದೇ ದಿನ ಎರಡು ಲೀವರ್ ಕಸಿ ಮಾಡಿ, ಸಾವಿನಂಚಿನಲ್ಲಿದ್ದವರ ಜೀವ ಉಳಿಸುವ ಮೂಲಕ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಅಂಗಾಂಗ ಕಸಿಯಲ್ಲಿ ಮತ್ತೊಮ್ಮೆ ರಾಜ್ಯದಲ್ಲಿ ಸಾಧನೆಯ ಗರಿಯನ್ನು ಕೆ.ಎಲ್.ಇ ಆಸ್ಪತ್ರೆ ತನ್ನ ಮುಡಿಗೇರಿಸಿಕೊಂಡಿದೆ. ಈ ಭಾಗದಲ್ಲಿ ಒಂದೇ ದಿನ ಎರಡು ಲೀವರ್ ಕಸಿ ಮಾಡಿದ ಸಾಧನೆ ಇದೇ ಮೊದಲು.

ಧಾರವಾಡದ ಎಸ್‌ಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶ್ರೀಕಂಠ ನೀಲಕಂಟಪ್ಪ ಉಂಬರ್ಜೆ (60) ಎಂಬುವರು ಹಾಗೂ ಸವದತ್ತಿ ತಾಲೂಕಿನ ಹಿರೆಬುದ್ನೂರ ಗ್ರಾಮದ ಯುವಕ, ತವರು ಮನೆಯಲ್ಲಿರುವ ತನ್ನ ಗರ್ಭಿಣಿ ಹೆಂಡತಿಯ ಭೇಟಿಗಾಗಿ ತೆರಳುತ್ತಿರುವಾಗ ಸಂಭವಿಸಿದ ರಸ್ತೆ ಅಪಘಾತದಲ್ಲಿ ತಲೆಗೆ ತೀವ್ರ ಪೆಟ್ಟು ಬಿದ್ದು ಕೆ.ಎಲ್‌.ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಣಮಂತ ಉದ್ದಪ್ಪಾ ಸರ‍್ವಿ (21) ಎಂಬ ಯುಕನೋರ್ವನ ಮೆದುಳು ನಿಷ್ಕ್ರಿಯಗೊಂಡ ನಂತರ ತಮ್ಮ ಅಂಗಾಂಗಳನ್ನು ದಾನ ಮಾಡಿದ್ದರು. ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಬಾಗಲಕೋಟೆಯ ಪೊಲೀಸ್ ಸಿಬ್ಬಂದಿಗೆ ಹಾಗೂ 63 ವರ್ಷದ ಮಂಗಳೂರಿನ ರೋಗಿಗಳಿಗೆ ಲೀವರ್ ಕಸಿ ಮಾಡಲಾಗಿದೆ.

ಯುವಕ ನೀಡಿದ ಎರಡು ಕಿಡ್ನಿಗಳಲ್ಲಿ ಒಂದನ್ನು ಕೆ.ಎಲ್‌.ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿನ ಮುಧೋಳದ ರೋಗಿಗೆ ಕಸಿ ಮಾಡಿದರೆ, ಇನ್ನೊಂದನ್ನು ಹುಬ್ಬಳ್ಳಿಯ ಆಸ್ಪತ್ರೆಯಲ್ಲಿನ ರೋಗಿಗೆ ನೀಡಲಾಯಿತು. ಲೀವರ್ ಹಾಗೂ ಕಿಡ್ನಿ ಕಸಿಗೊಳಗಾದ ಮೂವರು ಗುಣಮುಖರಾಗುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ಅವರು ಆಸ್ಪತ್ರೆಯಿಂದ ಬಿಡುಗಡೆಗೊಳ್ಳಲಿದ್ದಾರೆ ಎಂದು ಗ್ಯಾಸ್ಟ್ರೋಎಂಟ್ರಾಲಾಜಿ ಮುಖ್ಯಸ್ಥರಾದ ಡಾ. ಸಂತೋಷ ಹಜಾರೆ ತಿಳಿಸಿದ್ದಾರೆ.

ಲೀವರ್ ಸೇರಿದಂತೆ ಅಂಗಾಂಗಗಳ ಕಸಿ ಮಾಡಲು ಅತ್ಯಾಧುನಿಕ ಬೃಹತ್ ವೈದ್ಯಕೀಯ ಮೂಲಸೌಕರ್ಯ, ತರಬೇತಿ ಪಡೆದ ವೃತ್ತಿನಿರತ ಕಾರ್ಯಪಡೆ, ನಿಖರವಾದ ಯೋಜನೆ, ಕಸಿ ನಂತರದ ತೀವ್ರ ನಿಗಾ ವಹಿಸಬೇಕಾಗಿರುತ್ತದೆ. ವೃತ್ತಿನಿರತ ತಂಡದ ಕಾರ್ಯಕ್ಕೆ ಆಡಳಿತಾತ್ಮಕ ಸಹಕಾರದ ಅಗತ್ಯವೂ ಅಷ್ಟೇ ಮುಖ್ಯವಾಗಿರುತ್ತದೆ. ಅದೆಲ್ಲ ಇಲ್ಲಿ ಸಮ್ಮಿಳಿತಗೊಂಡಿದೆ. ಆದ್ದರಿಂದಲೇ ಒಂದೇ ದಿನ 2 ಲೀವರ್ ಹಾಗೂ 1 ಕಿಡ್ನಿ ಕಸಿ ಮಾಡಲು ಸಾಧ್ಯವಾಗಿದೆ. ಉತ್ತರ ಕರ್ನಾಟಕ ಮತ್ತು ಗೋವಾ ರಾಜ್ಯವನ್ನೊಳಗೊಂಡಂತೆ ಏಕೈಕ ಕೇಂದ್ರ ಇದು ಎಂದು ತಿಳಿಸಿದ್ದಾರೆ.

ಅಂಗಾಂಗ ದಾನ ಮಾಡಿದ ಕುಟುಂಬ ಸದಸ್ಯರ ಕಾರ್ಯವನ್ನು ಶ್ಲಾಘಿಸಿದ ಕೆ.ಎಲ್‌.ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರು, ಓರ್ವ ವ್ಯಕ್ತಿಯು ನೀಡುವ ಅಂಗಾಂಗದಿಂದ ಇನ್ನೊಬ್ಬರಿಗೆ ಜೀವದಾನ ಮಾಡಲು ಪ್ರೇರೆಪಿಸುತ್ತದೆ. ಅಲ್ಲದೇ ಇನ್ನೊಬ್ಬರ ಜೀವ ಉಳಿಸುತ್ತದೆ. ಈ ಭಾಗದ ಯಾವುದೇ ರೋಗಿಯು ಒಳ್ಳೆಯ ಗುಣಮಟ್ಟದ, ಸೂಪರ್ ಸ್ಪೆಷಾಲಿಟಿ ಚಿಕಿತ್ಸೆಯಿಂದ ವಂಚಿತರಾಗಬಾರದು ಹಾಗೂ ವೈದ್ಯಕೀಯ ಸೇವೆಗಳೆಲ್ಲವನ್ನೂ ಕೈಗೆಟುಕುವ ದರದಲ್ಲಿ ಲಭಿಸುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಬೆಳಗಾವಿ- ಹುಬ್ಬಳ್ಳಿ ಧಾರವಾಡ ಪೋಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತದ ಸಹಕಾರದಿಂದ ರಾಷ್ಟ್ರೀಯ ಹೆದ್ದಾರಿಯ ಹಸಿರು ಪಥದಲ್ಲಿ ಧಾರವಾಡ ಎಸ್‌ಡಿಎಂ ಆಸ್ಪತ್ರೆಯಿಂದ ಲೀವರ್ ಅನ್ನು ತರಲಾಯಿತು. ಪೊಲೀಸರ ಕಾರ್ಯಕ್ಕೆ ನಮ್ಮದೊಂದು ಸಲಾಮ್ ಹಾಗೂ ಹೃದಯಪೂರ್ವಕ ಧನ್ಯವಾದಗಳು.

ಕೆ.ಎಲ್‌.ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ಡಾ. ಸಂತೋಷ ಹಜಾರೆ, ಲೀವರ್ ಕಸಿ ಶಸ್ತ್ರಚಿಕಿತ್ಸಕರಾದ ಡಾ. ಸುದರ್ಶನ ಚೌಗಲೆ ಅವರು ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿದ್ದಾರೆ. ಯಶಸ್ವಿ ಕಸಿ ಶಸ್ತ್ರಚಿಕಿತ್ಸೆ ನೆರವೇರಿಸಿದ ವೈದ್ಯರ ತಂಡವನ್ನು ಕೆ.ಎಲ್‌.ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಹಾಗೂ ಆಡಳಿತ ಮಂಡಳಿ ಸದಸ್ಯರು, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. (ಕರ್ನಲ್) ಎಂ ದಯಾನಂದ ಅಭಿನಂದಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button