
ಪ್ರಗತಿವಾಹಿನಿ ಸುದ್ದಿ: 2025ರ ಯುಪಿಎಸ್ಸಿ ಫಲಿತಾಂಶ ಪ್ರಕಟವಾಗಿದೆ. ರಾಜಸ್ಥಾನದ ಅನುಜ್ ಅಗ್ನಿಹೋತ್ರಿ ದೇಶಕ್ಕೆ ಪ್ರಥಮ ರ್ಯಾಂಕ್ಗಳಿಸಿದ್ದಾರೆ.
ಪ್ರಸ್ತುತ ಕೇಂದ್ರಾಡಳಿತ ಪ್ರದೇಶ ಕೇಡರ್ನಲ್ಲಿ ಸೇವೆ ಸಲ್ಲಿಸುತ್ತಿರುವ 26 ವರ್ಷದ ಅನುಜ್ ಅಗ್ನಿಹೋತ್ರಿ ಅವರು ರಾಜಸ್ಥಾನದ ಚಿತ್ತೋರ್ಗಢ ಜಿಲ್ಲೆಯ ರಾವತ್ ಭಾಟಾ ಮೂಲದವರು. ತಮ್ಮ ನಿರಂತರ ಪ್ರಯತ್ನದ ಮೂಲಕ ಮೂರನೇ ಪ್ರಯತ್ನದಲ್ಲಿ ಕೇಂದ್ರ ಲೋಕಸೇವಾ ಆಯೋಗದ ನಾಗರಿಕ ಸೇವಾ ಪರೀಕ್ಷೆಯಲ್ಲಿ ಟಾಪರ್ ಆಗಿದ್ದಾರೆ.
ಇದಕ್ಕೂ ಮೊದಲು 2023ರಲ್ಲಿ ಜೋಧಪುರದ AIIMSನಿಂದ ಅನುಜ್ ಅಗ್ನಿಹೋತ್ರಿ MBBS ಮುಗಿಸಿದ್ದರು. ತಕ್ಷಣ UPSCಗೆ ತಯಾರಿ ಆರಂಭಿಸಿ, 2023ರಲ್ಲಿ ತಮ್ಮ ಮೊದಲ ಪ್ರಯತ್ನದಲ್ಲೇ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅನುಜ್ 400ನೇ ರ್ಯಾಂಕ್ಗಳಿಸಿದರು. ಬಳಿಕ ಕೇಂದ್ರಾಡಳಿತ ಪ್ರದೇಶ ಸೇವೆಗಳಲ್ಲಿ ಉದ್ಯೋಗ ಪಡೆದರು. ಇದಾದ ನಂತರ ಅವರನ್ನು ದೆಹಲಿಯಲ್ಲಿ ಎಸ್ಡಿಎಂ ಆಗಿ ನೇಮಿಸಲಾಯಿತು. ಆದರೆ ಎಸ್ಡಿಎಂ ಹುದ್ದೆಯಿಂದ ತೃಪ್ತರಾಗದ ಅನುಜ್ ನಿರಂತರ ಪರೀಕ್ಷೆ ತಯಾರಿ ನಡೆಸಿದರು. 2024ರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸಂದರ್ಶನ ನೀಡಿದರು. ಆದರೆ ಇದರಲ್ಲಿ ವಿಫಲರಾದರು. ಆದರೂ ಚಲಬಿಡದ ಅನುಜ್ ಮತ್ತೆ ಪರೀಕ್ಷೆಗೆ ತಯಾರಿ ನಡೆಸಿದರು. 2025ರಲ್ಲಿ ಯುಪಿಎಸ್ಸಿ ಪರಿಕ್ಷೆ ಬರೆದು, ಇದೀಗ ಇಡೀ ದೇಶಕ್ಕೆ ಟಾಪರ್ ಆಗಿ ಹೊರ ಹೊಮ್ಮಿದ್ದಾರೆ.
ಕರ್ನಾಟಕದ ಕಿರಣ್ ಕಮಟೆ ಅವರು ರಾಜ್ಯಕ್ಕೆ ಮೊದಲ ಮತ್ತು ದೇಶಕ್ಕೆ 53ನೇ ರ್ಯಾಂಕ್ ಪಡೆದಿದ್ದಾರೆ. ರಾಜ್ಯದ 20 ಮಂದಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಅರ್ಹತೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಒಟ್ಟು 958 ಅಭ್ಯರ್ಥಿಗಳು ಕಠಿಣ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅವರನ್ನು ವಿವಿಧ ಕೇಂದ್ರ ನಾಗರಿಕ ಸೇವೆಗಳಿಗೆ (IAS, IFS, IPS,) ನೇಮಕ ಮಾಡಲಾಗಿದೆ ಎಂದು ಆಯೋಗ ತಿಳಿಸಿದೆ.
ಇಂದು ಅಭ್ಯರ್ಥಿಗಳ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಇದಾದ 15 ದಿನಗಳಲ್ಲಿ ಅವರು ಪಡೆದ ಅಂಕಗಳನ್ನು ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವುದು ಎಂದು ಯುಪಿಎಸ್ಸಿ ತಿಳಿಸಿದೆ.



