
ಪ್ರಗತಿವಾಹಿನಿ ಸುದ್ದಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ವರುಣಾರ್ಭಟಕ್ಕೆ ಕಾರಿನ ಮೇಲೆ ಮರ ಬಿದ್ದು ದುರಂತ ಸಂಭವಿಸಿದ್ದು, ಮಹಿಳೆ ಸಾವನ್ನಪ್ಪಿದ್ದಾರೆ.
ಜಿಲ್ಲೆಯ ಕಾರವಾರ ನಗರದ ಪಿಕಳೆ ಆಸ್ಪತ್ರೆ ಬಳಿ ನಡೆದಿದೆ. ಲಕ್ಷ್ಮೀ ಪಾಗಿ ಮೃತ ಮಹಿಳೆ. ಲಕ್ಷ್ಮೀ ಪಾಗಿ ಹಾಗೂ ೮ ತಿಂಗಳ ಗರ್ಭಿಣಿ ಸೊಸೆ ಸುನಿತಾ ಕಾರಿನಲ್ಲಿ ಆಸ್ಪತ್ರೆಗೆ ಬಂದಿದ್ದರು. ಕಾರಿನಿಂದ ಇಳಿಯುವ ವೇಳೆ ಬೃಹತ್ ಮರವೊಂದು ಕಾರಿನ ಮೇಲೆ ಬಿದ್ದಿದೆ. ಗರ್ಭಿಣಿ ಸುನಿತಾ ತಕ್ಷಣ ಕಾರಿನ ಒಂದು ಭಾಗದ ಡೋರ್ ತೆರೆದು ಕೆಳಗಿಳಿದಿದು ಪಾರಾಗಿದ್ದಾರೆ. ಆದರೆ ಮತ್ತೊಂದು ಭಾಗದಲ್ಲಿದ್ದ ಅತ್ತೆ ಲಕ್ಷ್ಮೀ ಕಾರಿನಲ್ಲಿ ಸಿಲುಕಿ ಅಪ್ಪಚ್ಚಿಯಾಗಿದ್ದಾರೆ.
ಸ್ಥಳೀಯರು, ನಗರಸಭೆ ಸಿಬ್ಬಂದಿಗಳು ಹರಸಾಹಸ ಪಟ್ಟು ಮಹಿಳೆ ಲಕ್ಷ್ಮಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಿಸದೇ ಸಾಅವನ್ನಪ್ಪಿದ್ದಾರೆ. ಮೃತ ಮಹಿಳೆ ಕಾರವಾರದ ಮಲ್ಲಾಪುರ ಗ್ರಾಮದವರು ಎಂದು ತಿಳಿದುಬಂದಿದೆ.