Kannada NewsLatest

ಉತ್ತರದಲ್ಲಿ ಕೊಂಚ ತಣ್ಣಗಾದ ಮಳೆ; ಮುಂದುವರೆದ ಪ್ರವಾಹ ಭೀತಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಅಬ್ಬರ ಕೊಂಚ ತಣ್ಣಗಾಗಿದೆ. ಆದರೆ ಕಳೆದ 6 ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದಾಗಿ ಡ್ಯಾಂಗಳು ಬಹುತೇಕ ಭರ್ತಿಯಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡಬಹುದಾಗಿದ್ದು ಕೃಷ್ಣ, ಭೀಮಾ, ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸುವಂತೆ ಕೇಂದ್ರ ಜಲ ಆಯೋಗ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣಕ್ಕೆ ಸಲಹೆ ನೀಡಿದೆ.

ಬೆಳಗಾವಿ ಜಿಲ್ಲೆಯ ಗೋಕಾಕ್‍ನ ಉಪ್ಪಾರಗಲ್ಲಿ, ಹಳೆದನದಪೇಟೆ, ಕುಂಬಾರಗಲ್ಲಿ, ಮಟನ್ ಮಾರ್ಕೆಟ್ ಮತ್ತು ಮಹಾಲಿಂಗೇಶ್ವರ ನಗರ ಜಲಾವೃತಗೊಂಡಿರುವ ಕಾರಣ ಅಲ್ಲಿನ ಕುಟುಂಬಗಳಿಗೆ ಆಸರೆ ಕೇಂದ್ರ ಸ್ಥಾಪಿಸಲಾಗಿದೆ. ಘಟಪ್ರಭಾ ಅಬ್ಬರಕ್ಕೆ ಗೋಕಾಕ್‍ನ ಮೆಳವಂಕಿ ಮುಳುಗಡೆಯಾಗಿದೆ. ಸರ್ಕಾರಿ ಶಾಲೆಯಲ್ಲಿ 285 ಮಂದಿಗೆ ಆಶ್ರಯ ನೀಡಲಾಗಿದೆ.

ತುಂಗಭದ್ರಾ ನದಿಗೆ 1 ಲಕ್ಷದ 10 ಸಾವಿರ ಕ್ಯೂಸೆಕ್ ನೀರು ಬಿಡಲಾಗಿದ್ದು, ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಜಪದ ಕಟ್ಟೆ ಮುಳುಗಡೆ ಆಗಿದೆ. ಹಂಪಿಯಲ್ಲಿ ಪುರಂದರದಾಸರ ಮಂಟಪ, ಸಾಲುಮಂಟಪ, ಧಾರ್ಮಿಕ ವಿಧಿಗಳನ್ನು ಮಾಡೋ ಮಂಟಪಗಳು ಜಲಾವೃತಗೊಂಡಿವೆ. ಹಂಪಿಯಿಂದ ವಿರೂಪಾಪುರಗಡ್ಡೆಗೆ ತೆರಳುವ ಬೋಟ್‍ಗಳನ್ನ ಸ್ಥಗಿತಗೊಳಿಸಲಾಗಿದೆ. ಕಂಪ್ಲಿ ಮತ್ತು ಗಂಗಾವತಿ ನಡುವಿನ ಸೇತುವೆಯೂ ಜಲಾವೃತಗೊಂಡಿದೆ.

ಜಮೀನುಗಳಿಗೆ ನೀರು ನುಗ್ಗುವ ಭೀತಿ ಹಿನ್ನೆಲೆಯಲ್ಲಿ ರೈತರು ಪಂಪ್‍ಸೆಟ್‍ಗಳನ್ನ ತೆರವುಗೊಳಿಸಿದ್ದಾರೆ. ಕಲಬುರಗಿ ನಗರದ ಹೊರವಲಯದ ಭೋಸಗಾ ಕೆರೆ ತುಂಬಿದ್ದು ಜಲಪಾತ ಸೃಷ್ಟಿ ಆಗಿದೆ. ಬಾಗಲಕೋಟೆ ಜಿಲ್ಲೆಯ ಮುಧೋಳದ ಕುಂಬಾರಗಲ್ಲಿ ಜಲಾವೃತವಾಗಿದ್ದು ಸ್ಥಳೀಯರನ್ನು ಆಸರೆ ಕೇಂದ್ರಗಳಿಗೆ ಶಿಫ್ಟ್ ಮಾಡಲಾಗಿದೆ.

ಉತ್ತರ ಕರ್ನಾಟಕ ಭಾಗದಲ್ಲಿ ಮಳೆಯ ಅಬ್ಬರ ತಣ್ಣಗಾಗಿದೆ ಆದರೆ ಕರಾವಳಿ ಜಿಲ್ಲೆಯಳಲ್ಲಿ ಮಳೆಯ ಅಬ್ಬರ ಇನ್ನೂ ಮುಂದುವರೆದಿದೆ. ಹವಾಮಾನ ಇಲಾಖೆಯ ಪ್ರಕಾರ ಕೇವಲ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button