Latest

ವಿದ್ಯೆ ಕೊಟ್ಟ ಗುರುವಿಗೆ 5 ತೊಲ ಬಂಗಾರ, 2ಕೆಜಿ ಬೆಳ್ಳಿ ಮೂರ್ತಿ ನೀಡಿ ಬೀಳ್ಕೊಟ್ಟ ವಿದ್ಯಾರ್ಥಿಗಳು

ಪ್ರಗತಿವಾಹಿನಿ ಸುದ್ದಿ, ವಿಜಯಪುರ: ಜಿಲ್ಲೆಯ ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮದಲ್ಲಿ ಸೇವಾ ನಿವೃತ್ತಿ ಹೊಂದಿದ ಶಿಕ್ಷಕರೊಬ್ಬರಿಗೆ ವಿದ್ಯಾರ್ಥಿಗಳು 5 ತೊಲ ಬಂಗಾರ, 2ಕೆಜಿ ಬೆಳ್ಳಿ ಮೂರ್ತಿ ಸೇರಿದಂತೆ ಹಲವು ವಸ್ತುಗಳನ್ನು ಕಾಣಿಕೆಯಾಗಿ ನೀಡುವ ಮೂಲಕ ಭರ್ಜರಿಯಾಗಿ ಬೀಳ್ಕೊಟ್ಟಿದ್ದಾರೆ.

ಬಿಜ್ಜರಗಿ ಗ್ರಾಮದ ಬಿಎಕೆ ಪ್ರೌಢಶಾಲೆಯಲ್ಲಿ 40 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ದೈಹಿಕ ಶಿಕ್ಷಕ ಎನ್.ಜಿ. ಕೋಟ್ಯಾಳ ಅವರಿಗೆ ಗ್ರಾಮಸ್ಥರು ‘ನ ಭೂತೋ, ನ ಭವಿಷ್ಯತಿ’ ಎಂಬಂತೆ ಬೀಳ್ಕೊಟ್ಟಿದ್ದಾರೆ.

ಗ್ರಾಮದ ಜನರು, ಹಳೆಯ ವಿದ್ಯಾರ್ಥಿಗಳು, ಸಂಘ ಸಂಸ್ಥೆ ಸದಸ್ಯರು, ಜನ ಪ್ರತಿನಿಧಿಗಳು ಸೇರಿ  ತಮ್ಮ ಗುರುವಿಗೆ ತಲೆಗೆ ಪೇಟಾ ಸುದ್ದಿ ಕಾರೊಂದರಲ್ಲಿ ಡೋಲು ಬಾರಿಸುತ್ತ ಅದ್ದೂರಿ ಮೆರವಣಿಗೆ ಮಾಡಿಸಿದ್ದಾರೆ.

Home add -Advt

ನಂತರ ಸಭಾ ಕಾರ್ಯಕ್ರಮದಲ್ಲಿ ಕೋಟ್ಯಾಳ ದಂಪತಿಗೆ 5 ತೊಲ ಚಿನ್ನ, 2 ಕೆಜಿ ಬೆಳ್ಳಿ ಮೂರ್ತಿಗಳು, ಡಬಲ್ ಡೋರ್ ಫ್ರಿಜ್, 32 ಇಂಚಿನ ಎಲ್ಇಡಿ ಟಿವಿ, ಸರಸ್ವತಿ ದೇವಿಯ ಕಂಚಿನ ಮೂರ್ತಿ, ಜೊತೆಗೆ ಸಿದ್ದೇಶ್ವರ ಶ್ರೀಗಳ ಫೋಟೊಗಳನ್ನು ನೀಡಿದ್ದಾರೆ.

ಇದೇ ಸಂದರ್ಭದಲ್ಲಿ ಮಲ್ಲಿನಾಥ ಎಂಬ ವಿದ್ಯಾರ್ಥಿ ಶಿಕ್ಷಕ ಕೋಟ್ಯಾಳ ಅವರ ಹೆಸರಿನಲ್ಲಿ 1 ಲಕ್ಷ ರೂ. ಠೇವಣಿ ಇರಿಸಿ ಅದರ ಬಡ್ಡಿ ಹಣದಲ್ಲಿ ವಿದ್ಯಾರ್ಥಿಗಳಿಗೆ ನೆರವಾಗಲು ಕೋರಿದ್ದಾರೆ.

ಯಾಕಿಷ್ಟು ಗೌರವ ?: 

ಹಲವು ಶಿಕ್ಷಕರು ನಿವೃತ್ತಿ ಹೊಂದಿ ಹೋಗುವಾಗ ಅವರಿಗೆ ಸನ್ಮಾನಿಸುವುದು, ಕಾಣಿಕೆಗಳನ್ನು ನೀಡುವುದು, ಅವರ ಸೇವೆಯನ್ನು ಸ್ಮರಿಸುವುದು ಸಾಮಾನ್ಯ ಪರಿಪಾಠ. ಆದರೆ ಶಿಕ್ಷಕ  ಕೋಟ್ಯಾಳ  ಕೇವಲ ದೈಹಿಕ ಶಿಕ್ಷಣದ ಪಾಠ ಹೇಳಿಹೋಗುವವರಾಗಿರದೆ ಪ್ರತಿ ವಿದ್ಯಾರ್ಥಿಗಳನ್ನು ಸ್ವಂತ ಮಕ್ಕಳಂತೆ ನೋಡಿಕೊಂಡು ಗುರುವಾಗಿಯೂ, ಗೆಳೆಯರಾಗಿಯೂ ವರ್ತಿಸುತ್ತಿದ್ದರು.

ಪ್ರತಿ ವಿದ್ಯಾರ್ಥಿಯ ಸಂಕಷ್ಟಕ್ಕೂ ಸ್ಪಂದಿಸುತ್ತಿದ್ದ ಅವರು ಸೇವೆಯುದ್ದಕ್ಕೂ ವಿದ್ಯಾರ್ಥಿಗಳ, ಪಾಲಕರ ಮನಗೆದ್ದಿದ್ದರು. ಇಷ್ಟೊಂದು ಪ್ರಮಾಣದ ಕಾಣಿಕೆಗಳ ಬೀಳ್ಕೊಡುಗೆ ನಿರೀಕ್ಷಿಸಿರದ ಅವರು ಗ್ರಾಮಸ್ಥರು ನೀಡಿದ ಪ್ರೀತಿ, ವಿಶ್ವಾಸಕ್ಕೆ ಸಂತಸ ವ್ಯಕ್ತಪಡಿಸಿದ್ದಲ್ಲದೆ, ಗ್ರಾಮಸ್ಥರಿಂದ ಕಾಣಿಕೆಯಾಗಿ ಬಂದ 96 ಸಾವಿರ ರೂ. ಹಾಗೂ ತಮ್ಮ ಸ್ವಂತ 50 ಸಾವಿರ ರೂ. ಎಲ್ಲವನ್ನೂ ಸೇರಿಸಿ ವಿದ್ಯಾರ್ಥಿಗಳ ಸಹಾಯಕ್ಕೆ ನೀಡಿದ್ದಾರೆ.

ಐಪಿಎಲ್ ಟ್ರೋಫಿ ಗೆಲ್ಲುವ ತಂಡದ ಬಹುಮಾನದ ಮೊತ್ತ ವಲ್ಡ್ ಕಪ್ ಗಿಂತ ಹೆಚ್ಚು !

Related Articles

Back to top button