Kannada NewsKarnataka NewsLatestPolitics

*ಮಾ. 4 ರಂದು ವೃಷಭಾವತಿ ವ್ಯಾಲಿ ಯೋಜನೆಯ ಮೊದಲ ಹಂತದ ಕಾಮಗಾರಿಗೆ ಶಂಕುಸ್ಥಾಪನೆ: ಸಚಿವ ಎನ್‌ ಎಸ್‌ ಭೋಸರಾಜು*

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರಿಂದ ಶಂಕುಸ್ಥಾಪನೆ

ಪ್ರಗತಿವಾಹಿನಿ ಸುದ್ದಿ: ಬಯಲು ಸೀಮೆ ಜಿಲ್ಲೆಗಳ ಅಂತರ್ಜಲ ಅಭಿವೃದ್ದಿಗಾಗಿ ಸ್ವಾತಂತ್ರ್ಯದ ನಂತರ ರಾಜ್ಯ ಸರ್ಕಾರ ಕೈಗೊಂಡಿರುವ ಮತ್ತೊಂದು ಬೃಹತ್‌ ಯೋಜನೆಯಾದ ಕೆರೆಗಳಿಗೆ ವೃಷಭಾವತಿ ವ್ಯಾಲಿ ಎರಡನೇ ಹಂತದ ಸಂಸ್ಕರಿಸಿದ ನೀರನ್ನು ತುಂಬಿಸುವ ಯೋಜನೆಯ ಮೊದಲ ಹಂತದ 1081 ಕೋಟಿ ಮೊತ್ತದ ಕಾಮಗಾರಿಗೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್‌ ಅವರು ನಾಳೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಮಾನ್ಯ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್‌ ಎಸ್‌ ಭೋಸರಾಜು ಅವರು ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನು ನೀಡಿರುವ ಅವರು. ದ್ವೀತೀಯ ಹಂತದಲ್ಲಿ ಶುದ್ದೀಕರಿಸಿದ ನೀರನ್ನ ಸಣ್ಣ ನೀರಾವರಿ ಇಲಾಖೆಯ ವತಿಯಿಂದ ವಿವಿಧ ಏತ ನೀರಾವರಿ ಯೋಜನೆಗಳ ಮೂಲಕ ನೀರನ್ನು ಕೆರೆಗಳಿಗೆ ಹರಿಸಿ ಅಂತರ್ಜಲ ಅಭಿವೃದ್ದಿಪಡಿಸುವ ಯೋಜನೆಗಳನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತರಲಾಗಿದೆ. ಕೆ.ಸಿ ವ್ಯಾಲಿ ಯೋಜನೆ, ಹೆಚ್‌.ಎನ್‌. ವ್ಯಾಲಿ ಯೋಜನೆ, ಆನೇಕಲ್‌ ಏತ ನೀರಾವರಿ ಮತ್ತು ಇತರೆ ಯೋಜನೆಗಳಿಂದ ಸುಮಾರು 860 ಎಂ.ಎಲ್‌.ಡಿ ರಷ್ಟು ಪ್ರತಿನಿತ್ಯ ಯಶಸ್ವಿಯಾಗಿ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ. ಇದರಿಂದ ಅಂತರ್ಜಲ ಮಟ್ಟ ಗಣನೀಯವಾಗಿ ಹೆಚ್ಚಿದ ಪರಿಣಾಮ, ಬೋರ್‌ ವೆಲ್‌, ಬಾವಿ ಮತ್ತು ಇತರೆ ನೀರಿನ ಮೂಲಗಳು ಪುನಶ್ಚೇತನಗೊಂಡಿವೆ. ಈ ಭಾಗದ ರೈತಾಪಿ ವರ್ಗದವರ ಆರ್ಥಿಕ ಮಟ್ಟ ಹೆಚ್ಚಳಕ್ಕೆ ಅನುವು ಮಾಡಿಕೊಟ್ಟಿರುವುದು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆಗೊಳಪಟ್ಟಿರುತ್ತದೆ.

ಕಳೆದ ಕೆಲ ದಶಕಗಳಿಂದ ಬಯಲುಸೀಮೆ ಪ್ರದೇಶಗಳಾದ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ತುಮಕೂರು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸತತ ಮಳೆಯ ವೈಫಲ್ಯದಿಂದಾಗಿ ನದಿಗಳು, ಕೆರೆಗಳು, ಹಳ್ಳ ಕೊಳ್ಳಗಳು ನೀರಿಲ್ಲದೆ ಬರಡಾಗಿವೆ. ಈ ಭಾಗದ ರೈತಾಪಿ ವರ್ಗದವರು ಬೇರೆ ಯಾವುದೇ ನೀರಿನ ಮೂಲಗಳು ಇಲ್ಲದೇ ಕೊಳವೆ ಬಾವಿಗಳನ್ನು ಅವಲಂಬಿಸಿರುತ್ತಾರೆ. ಆದರೆ, ಅತಿಯಾದ ಅಂತರ್ಜಲ ಬಳಕೆಯಿಂದ ಅಂತರ್ಜಲ ಮಟ್ಟವು ಅಂಕಿ ಅಂಶಗಳ ಅನ್ವಯ ಸುಮಾರು 1000-1200 ಅಡಿಗಳಷ್ಟು ಬಹುತೇಕ ಕುಸಿದಿದೆ.

ಈ ನಿಟ್ಟಿನಲ್ಲಿ ಅಂತರ್ಜಲ ವೃದ್ದಿಗಾಗಿ ಘನ ಸರ್ಕಾರವು ಬೆಂಗಳೂರು ನಗರದ ವೃಷಭಾವತಿ ವ್ಯಾಲಿ ಕಣಿವೆಯ ಸಂಸ್ಕರಿಸಿದ ನೀರನ್ನುಸುಮಾರು 1081 ಕೋಟಿ ಮೊತ್ತದ ಮೊದಲನೇ ಹಂತದಲ್ಲಿ 70 ಕೆರೆಗಳಿಗೆ ನೀರನ್ನು ತುಂಬಿಸಲು ಯೋಜನೆಯನ್ನು ಕೈಗೆತ್ತಿಕೊಂಡಿದೆ. ಎರಡನೇ ಮತ್ತು ಮೂರನೇ ಹಂತದಲ್ಲಿ 189 ಕೆರೆಗಳನ್ನೊಳಗೊಂಡಂತೆ ಒಟ್ಟಾರೆಯಾಗಿ 259 ಕೆರೆಗಳಿಗೆ ಬೆಂಗಳೂರಿನಲ್ಲಿರುವ ರಾಜರಾಜೇಶ್ವರಿ ನಗರ ಬಿ.ಡಬ್ಲೂ.ಎಸ್‌.ಎಸ್‌.ಬಿ ನಾಯಂಡಹಳ್ಳಿ ತ್ಯಾಜ್ಯ ಸಂಸ್ಕರಣಾ ಘಟಕದಿಂದ 243 ಎಂ.ಎಲ್‌.ಡಿ, ಮೈಲಸಂದ್ರದ ತ್ಯಾಜ್ಯ ಸಂಸ್ಕರಣಾ ಘಟಕದಿಂದ 65 ಎಂ.ಎಲ್‌.ಡಿ ಒಟ್ಟಾರೆಯಾಗಿ 308 ಎಂ.ಎಲ್‌.ಡಿ ನೀರನ್ನ ಹರಿಸುವ ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ.

ಮೊದಲ ಹಂತದ ಯೋಜನೆ – 1:
ಬೆಂಗಳೂರು ನಗರದ ವೃಷಭಾವತಿ ವ್ಯಾಲಿಯಿಂದ ದ್ವೀತಿಯ ಹಂತದಲ್ಲಿ ಸಂಸ್ಕರಿಸಿದ ನೀರನ್ನು 243 ಎಂ.ಎಲ್‌.ಡಿ ನೀರನ್ನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು ಜಿಲ್ಲೆಯ 70 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಇದಾಗಿದೆ. 15.06.2023 ರಂದು ನಡೆದ 2 ಸಚಿವ ಸಂಪುಟ ಸಭೆಯಲ್ಲೇ ಇದಕ್ಕೆ ಅನುಮೋದನೆ ನೀಡಲಾಗಿತ್ತು. 36 ತಿಂಗಳ ಅವಧಿಯಲ್ಲಿ ಈ ಕಾಮಗಾರಿ ಪೂರ್ಣಗೊಳ್ಳಲಿದ್ದು, 2 ಲಿಫ್ಟ್‌ಗಳ ಮೂಲಕ 70 ಕೆರೆಗಳಿಗೆ ನೀರು ಹರಿಸಲಾಗುತ್ತದೆ. ಸದರಿ ಯೋಜನೆಯಿಂದ ಸಂಸ್ಕರಿಸಿದ ನೀರು ಮರುಬಳಕೆಗೆ ಅನುವು ಮಾಡಿಕೊಡುವದಲ್ಲದೆ, ಅಂತರ್ಜಲ ವೃದ್ದಿ ಮೊದಲ ಉದ್ದೇಶವಾಗಿದೆ. ತ್ಯಾಜ್ಯ ಕೊಳಚೇ ನೀರು ನೇರವಾಗಿ ಕೆರೆಗಳೀಗೆ-ನದಿ-ಕೊಳಗಳಿಗೆ ಹರಿಯವುದನ್ನ ತಡೆಗಟ್ಟುವ ಮೂಲಕ ಅವುಗಳ ಮಾಲಿನ್ಯವನ್ನು ನಿಯಂತ್ರಿಸಬಹುದಾಗಿದೆ ಎಂದು ಸಚಿವ ಎನ್‌ ಎಸ್‌ ಭೋಸರಾಜು ತಿಳಿಸಿದ್ದಾರೆ.

ಮಾರ್ಚ್‌ 4, 2024 ರಂದು ಶಂಕುಸ್ಥಾಪನೆ:
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರು ಮಾರ್ಚ್‌ 4 ರಂದು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಚಿವರುಗಳಾದ ಕೆ.ಹೆಚ್‌ ಮುನಿಯಪ್ಪ, ಜಿ ಪರಮೇಶ್ವರ್‌, ಡಾ. ಎಂ.ಸಿ ಸುಧಾಕರ್‌ ಸೇರಿದಂತೆ ಹಲವರು ಉಪಸ್ಥಿತರಿರಲಿದ್ದಾರೆ. ನೆಲಮಂಗಲ ಶಾಸಕರಾದ ಎನ್‌ ಶ್ರೀನಿವಾಸ್‌ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button