
ಪ್ರಗತಿವಾಹಿನಿ ಸುದ್ದಿ; ನಿಪ್ಪಾಣಿ: ಬೆಳಗಾವಿ ನಾಕಾ ಬಳಿಯ ಛತ್ರಪತಿ ಶಿವಾಜಿ ಉದ್ಯಾನವನದಲ್ಲಿರುವ ಯುದ್ಧ ಸ್ಮಾರಕದಲ್ಲಿ ಪ್ರದರ್ಶನಗೊಳ್ಳಲಿರುವ ಬೃಹತ್ ಆಕಾರದ ವಿಮಾನ ಗೋವಾದಿಂದ ನಗರಕ್ಕೆ ಮಂಗಳವಾರ ಬಂದಿದೆ.
4 ದೊಡ್ಡ ಲಾರಿಗಳ ಮೂಲಕ ಈ ಯುದ್ಧವಿಮಾನದ ಬಿಡಿಭಾಗಗಳು ಬಂದಿವೆ. ಶೀಘ್ರದಲ್ಲೇ ಈ ವಿಮಾನದ ಬಿಡಿಭಾಗಗಳನ್ನು ಜೋಡಿಸಿ ಬೃಹತ್ ವಿಮಾನವನ್ನು ಪ್ರದರ್ಶನಕ್ಕೆ ಇಡಲಾಗುತ್ತಿದೆ. ಇದನ್ನು ನೋಡಲು ನಾಗರಿಕರಲ್ಲಿ ಕುತೂಹಲ ಮೂಡಿದೆ.
ಸ್ಥಳೀಯ ವಿದ್ಯಾರ್ಥಿಗಳಿಗೆ, ಯುವಕರಿಗೆ ಇದು ದೇಶದ ಸೇವೆಗಾಗಿ ಪ್ರೇರಣೆ ಸಿಗಲಿ ಎಂಬ ಸದುದ್ದೇಶದಿಂದ ಕೇಂದ್ರ ಸಕಾರವು ಈ ಮ್ಯುಜಿಯಂಗೆ ಅನುಮತಿ ನೀಡಿ ವಿಮಾನವನ್ನು ನಗರಕ್ಕೆ ಕಳುಹಿಸಿದೆ.
ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಸಚಿವೆ ಶಶಿಕಲಾ ಜೊಲ್ಲೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ನಗರದಲ್ಲಿ ಯುದ್ಧವಿಮಾನ ಸ್ಮಾರಕ ನಿರ್ಮಾಣಕ್ಕೆ ಒತ್ತಾಯಿಸಿದ್ದರು. ಅದರಂತೆ ಈ ಯುದ್ಧ ವಿಮಾನವು ನಗರಕ್ಕೆ ಆಗಮಿಸಿದೆ. ಇದಕ್ಕೆ ಸುಮಾರು ಎರಡೂವರೆ ಕೋಟಿ ರೂಪಾಯಿ ವೆಚ್ಚವಾಗಲಿದೆ. ಈ ವಿಮಾನ ರಾಜಾ ಛತ್ರಪತಿ ಶಿವಾಜಿ ಉದ್ಯಾನವನದ ಸೌಂದರ್ಯೀಕರಣದ ಜೊತೆಗೆ ಯುದ್ಧವಿಮಾನದ ಸ್ಥಾಪಿನೆ ಕಾರ್ಯ ನಡೆಯಲಿದೆ. ತಾಲೂಕು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ಮಕ್ಕಳಿಂದ ವೃದ್ಧರವರೆಗೆ ಎಲ್ಲರೂ ನಿಜವಾದ ಯುದ್ಧ ವಿಮಾನವನ್ನು ನೋಡಲಿದ್ದಾರೆ.