Belgaum NewsKannada NewsKarnataka NewsLatest

*ಹೃದಯಾಘಾತವಾದಾಗ ತುರ್ತು ಸಂದರ್ಭದಲ್ಲಿ ಏನು ಮಾಡಬೇಕು? ಕೆ.ಎಲ್.ಇ ಆಸ್ಪತ್ರೆಯ ಡಾ.ರಿಚರ್ಡ್ ಸಾಲ್ಡಾನ ಮಾಹಿತಿ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಯಾರಾದರೂ ಹೃದಯಾಘಾತವಾಗಿ ಹೃದಯ ಬಡಿತ ಅಥವಾ ಉಸಿರಾಟ ನಿಂತ ತುರ್ತು ಪರಿಸ್ಥಿಯಲ್ಲಿ ಸಿಪಿಆರ್(ಕಾರ್ಡಿಯೋ ಪಲ್ಮನರಿ ರೆಸಸಿಟೇಶನ್) ಎನ್ನುವುದು ಜೀವರಕ್ಷಕ ತಂತ್ರವಾಗಿದ್ದು, ಅದನ್ನು ಉಪಯೋಗಿಸಿ ಜೀವವನ್ನು ರಕ್ಷಿಸಬಹುದು. ಪ್ರತಿಯೊಬ್ಬರು ನಿರ್ದಿಷ್ಟವಾಗಿ ಅದರಲ್ಲಿಯೂ ಮುಖ್ಯವಾಗಿ ವಿಜ್ಞಾನ ಶಿಕ್ಷಕರು ತುರ್ತು ಸಂದರ್ಭದಲ್ಲಿ ಜೀವವನ್ನು ಉಳಿಸುವ ಸಿಪಿಆರ್ ತಂತ್ರವನ್ನು ತಿಳಿದಿರಬೇಕು ಎಂದು ಕೆಎಲ್‌ಇ ಸಂಸ್ಥೆ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಮುಖ್ಯ ಹೃದಯ ಶಸ್ತ್ರಚಿಕಿತ್ಸಕರಾದ ಡಾ. ರಿಚರ್ಡ ಸಾಲ್ಡಾನಾ ಹೇಳಿದರು.


ವಿಶ್ವ ಹೃದಯ ದಿನದ ಅಂಗವಾಗಿ ಬೆಳಗಾವಿಯ ಆರ್‌ಎಲ್ ವಿಜ್ಞಾನ ಮಹಾವಿದ್ಯಾಲಯದಲ್ಲಿ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರ, ಇಂಡಿಯನ್ ಅಸೋಸಿಯೇಶನ್ ಆಫ್ ಕಾರ್ಡಿಯೊ ವ್ಯಾಸ್ಕುಲರ ಸರ್ಜನ್ಸ್, ಹೃದ್ರೋಗ ವಿಭಾಗ ಅರವಳಿಕೆ ವಿಭಾಗ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಇಂದಿನ ಒತ್ತಡದ ಜೀವನದಲ್ಲಿ ಯಾರಾದರೂ ಹೃದಯಾಘಾತಕ್ಕೊಳಗಾಗಿ ಪ್ರಜ್ಞಾಹೀನರಾಗಿದ್ದರೆ ಅಥವಾ ತಕ್ಷಣ ಉಸಿರಾಡದಿದ್ದರೆ ಅವರ ಪ್ರಾಣಪಕ್ಷಿ ಹಾರಿಹೋಗುವ ಸಾಧ್ಯತೆ ಇರುತ್ತದೆ. ಪ್ರಜ್ಞೆಯನ್ನು ಮರಳಿ ಪಡೆಯಲು ಸಮಯವನ್ನು ವ್ಯರ್ಥ ಮಾಡದೇ ತತಕ್ಷಣ ಅವರಿಗೆ ಸಿಪಿಆರ್ ತಂತ್ರವನ್ನು ಉಪಯೋಗಿಸಬೇಕು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಿ ಚಿಕಿತ್ಸೆಗೆ ಸಹಕರಿಸಬೇಕು ಎಂದು ಸಲಹೆ ನೀಡಿದರು.


ಅರವಳಿಕೆ ತಜ್ಞವೈದ್ಯರಾದ ಡಾ. ರಾಘವೇಂದ್ರ ಅವರು ಪ್ರಾತ್ಯಕ್ಷತೆ ಮೂಲಕ ಮಾತನಾಡಿ, ಸಿಪಿಆರ್‌ನ ಹಂತ ಹಂತದ ವಿಧಾನಗಳನ್ನು ನೀಡಿದರು ಮತ್ತು ಅದು ಹೇಗೆ ಹೃದಯದ ಬಡಿತ ಮರಳಿಸಬಹುದು (ಮರು-ಪ್ರಾರಂಭಿಸಬಹುದು). ಉಸಿರಾಟವನ್ನು ಪರೀಕ್ಷಿಸಿ, ವ್ಯಕ್ತಿಯನ್ನು ಎಚ್ಚರಿಸಲು ಪ್ರಯತ್ನಿಸಿ, ಆರೋಗ್ಯ ವಿಚಾರಿಸಿ. ಪ್ರಜ್ಞಾಹೀನ ವ್ಯಕ್ತಿ ಕಂಡುಬಂದಲ್ಲಿ ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ, ಮೊದಲು ಆಂಬ್ಯುಲೆನ್ಸ್ಗೆ ಕರೆ ಮಾಡಿ ಮತ್ತು ಎದೆಯ ಗೊತ್ತುಪಡಿಸಿದ ಸ್ಥಳದಲ್ಲಿ ನಿಮಿಷಕ್ಕೆ 100-120 ಸಂಕೋಚನಗಳ ವೇಗದಲ್ಲಿ ಎದೆಯ ಸಂಕೋಚನವನ್ನು ಪ್ರಾರಂಭಿಸಿ ಎಂದು ವಿವರಿಸಿದರು.


ಡಾ. ರಾಘವೇಂದ್ರ, ಡಾ. ದೊರೆಗೋಳ್ ಮತ್ತು ಡಾ. ವಿನಾಯಕ್ ಅವರು ಸಿಪಿಆರ್‌ನ ಸೂಕ್ಷ್ಮ ಕೌಶಲ್ಯಗಳನ್ನು ಪ್ರದರ್ಶಿಸಿದರು. ಕುಳಿತುಕೊಳ್ಳುವ ಸ್ಥಾನವನ್ನು ಒಳಗೊಂಡಿರುವ ತರಬೇತಿ, ಎದೆಯ ಸಂಕೋಚನಕ್ಕಾಗಿ ಅಂಗೈಯಿಂದ ಒತ್ತುವದು, ಬೆರಳುಗಳನ್ನು ಜೋಡಿಸುವದು ಸೇರಿದಂತೆ ಇನ್ನಿತರ ತಂತ್ರಗಳನ್ನು ತಿಳಿಸಿಕೊಟ್ಟರು. ಈ ಸಂದರ್ಭದಲ್ಲಿ ಆರ್ ಎಲ್ ವಿಜ್ಞಾನ ಮಹಾವಿದ್ಯಾಲಯದ ಪ್ರಾಚರ‍್ಯರಾದ ಡಾ.ಜ್ಯೋತಿ ಕಾವಳೇಕರ ತರಬೇತಿ ನೀಡಿದ ವೈದ್ಯವೃಂದಕ್ಕೆ ಧನ್ಯವಾದಗಳನ್ನು ಅರ್ಪಿಸಿದರು. ಡಾ. ಮೋಹನ್ ಗಾನ್, ಡಾ. ದರ್ಶನ್ ಮತ್ತು 100 ಕ್ಕೂ ಹೆಚ್ಚು ವಿಜ್ಞಾನ ಶಿಕ್ಷಕರು ಸಿಪಿಆರ್ ತರಬೇತಿಗೆ ಹಾಜರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button