Kannada NewsKarnataka NewsLatest

*ಮತದಾನದ ವೇಳೆ ಮಾರಾಮಾರಿ; ಮೂವರಿಗೆ ಗಾಯ; ಓರ್ವನ ಸ್ಥಿತಿ ಗಂಭೀರ*

ಪ್ರಗತಿವಾಹಿನಿ ಸುದ್ದಿ: ಮತದಾನದ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ವಿಧಾನಸಭೆ ಉಪಚುನಾನವಣೆ ವೇಳೆ ನಡೆದಿದೆ.

ಇಂದು ಸುರಪುರ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದೆ. ಈ ವೇಳೆ ಬಾದ್ಯಾಪುರ ಗ್ರಾಮದ ಮತಗಟ್ಟೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮತದಾನಕ್ಕಾಗಿ ನಾ ಮುಂದು ತಾಮುಂದು ಎಂದು ಗಲಾಟೆ ನಡೆದು ನೂಕಾಟ ತಳ್ಳಾಟ ನಡೆದಿದೆ. ಕಾರ್ಯಕರ್ತರ ನಡುವಿನ ಗಲಾಟೆ ವಿಕೋಪಕ್ಕೆ ತಿರುಗಿ ಕೈಕೈ ಮಿಲಾಯಿಸಿಕೊಂಡಿದ್ದು, ಕಲ್ಲುತೂರಾಟ ನಡೆದಿದೆ.

ಈ ವೇಳೆ ಮತದಾನಕ್ಕೆಂದು ನಿಂತಿದ್ದ ಅಮಾಯಕರ ಮೇಲೆ ಕಲ್ಲುಗಳು ಬಿದ್ದಿದ್ದು, ಮೂವರು ಗಾಯಗೊಂಡಿದ್ದಾರೆ. ಓರ್ವ ವ್ಯಕ್ತಿಯ ತಲೆಯ ಭಾಗಕ್ಕೆ ಕಲ್ಲೇಟು ಬಿದ್ದ ಪರಿಣಾಮ ತಲೆಯಿಂದ ರಕ್ತ ಸುರಿಯುತ್ತಿದ್ದು, ಆತನ ಸ್ಥಿತಿ ಗಂಭೀರವಾಗಿದೆ.

ಸ್ಥಳದಲ್ಲಿದ್ದ ಪೊಲೀಸರು ಉದ್ರಿಕ್ತರನ್ನು ಚದುರಿಸಲು ಲಘುಲಾಠಿ ಪ್ರಹಾರ ನಡೆಸಿದ್ದಾರೆ ಎಂದು ತಿಳಿದುಬಂದಿದೆ.


Related Articles

Back to top button