Kannada NewsKarnataka NewsLatestPolitics

*ಹೆಚ್.ಡಿ.ಕುಮಾರಸ್ವಾಮಿ ಆರೋಪಗಳಿಗೆ ತಿರುಗೇಟು ನೀಡಿದ ಯತೀಂದ್ರ ಸಿದ್ದರಾಮಯ್ಯ*

ಪ್ರಗತಿವಾಹಿನಿ ಸುದ್ದಿ; ಮೈಸೂರು: ವಿಡಿಯೋ ಸಂಭಾಷಣೆ ವೈರಲ್ ವಿಚಾರ ಹಾಗೂ ವಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿರುವ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ, ಅಂದು ನಾನು ಮಾತನಾಡಿದ್ದು ಸಿಎಸ್ ಆರ್ ಫಂಡ್ ಬಗ್ಗೆ. ಲಿಸ್ಟ್ ಎಂದರೆ ಹಲವಾರು ಲಿಸ್ಟ್ ಗಳನ್ನು ನಾನು ಮುಖ್ಯಮಂತ್ರಿಗಳಿಗೆ ಕೊಡುತ್ತಿರುತ್ತೇನೆ. ಅದನ್ನು ವರ್ಗಾವಣೆ ದಂಧೆ ಎಂದು ವಿಪಕ್ಷಗಳು ಆರೋಪಿಸುತ್ತಿರುವುದು ಸರಿಯಲ್ಲ. ಈ ಬಗ್ಗೆ ನಾನು ವಿಪಕ್ಷದವರಿಗಾಗಲಿ, ಮಾಧ್ಯಮದವರಿಗಾಗಲಿ ಸ್ಪಷ್ಟನೆ ನೀಡುವ ಅಗತ್ಯವೂ ಇಲ್ಲ. ಆದರೂ ಹೇಳುತ್ತಿದೇನೆ. ವಿಪಕ್ಷದವರು, ಕೂಮಾರಸ್ವಾಮಿಯವರು ಪದೇ ಪದೇ ವರ್ಗಾವಣೆ ದಂಧೆ ಎಂದು ಆರೋಪ ಮಾಡುತ್ತಿರುವುದು ಸೂಕ್ತವಲ್ಲ ಎಂದು ಕಿಡಿಕಾರಿದರು.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ, ಒಬ್ಬ ಮುಖ್ಯಮಂತ್ರಿಗಳ ಬಗ್ಗೆ ಪದೇ ಪದೇ ವರ್ಗಾವಣೆ ದಂಧೆ, ಭ್ರಷ್ಟಾಚಾರ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆರೋಪ ಮಾಡುವುದು ಎಷ್ಟು ಸರಿ? ಸಿಎಂ ಬಗ್ಗೆ ಆರೋಪ ಮಾಡುವ ಮುನ್ನ ಸಾಕ್ಷ್ಯಗಳನ್ನು ಇಟ್ಟುಕೊಂಡಿರಬೇಕು. ಒಂದು ಸರ್ಕಾರ ಬಂದಾಗ ವರ್ಗಾವಣೆಗಳು ಸಾಮಾನ್ಯ. ಕುಮಾರಸ್ವಾಮಿಯವರ ಅಧಿಕಾರ ಅವಧಿಯಲ್ಲಿ ವರ್ಗಾವಣೆ ಆಗಿರಲಿಲ್ಲವೇ? ಆಗ ನಾವು ಇದೇ ರೀತಿ ಆರೋಪ ಮಾಡಿದ್ದೇವಾ? ಎಂದು ಪ್ರಶ್ನಿಸಿದರು.

Home add -Advt

ಪದೇ ಪದೇ ವರ್ಗಾವಣೆ ದಂಧೆ ಎಂಬ ಪದ ಬಳಸಿದರೆ ಏನರ್ಥ? ನಾನಾಗಲಿ, ನನ್ನ ತಂದೆಯಾಗಲಿ ಇಲ್ಲಿ ಯಾವ ದಂಧೆ ಮಾಡುತ್ತಿಲ್ಲ. ಯಾವ ಹಣದ ವ್ಯವಹಾರವನ್ನೂ ಮಾಡುತ್ತಿಲ್ಲ. ಕುಮಾರಸ್ವಾಮಿ ಹತಾಶರಾಗಿ ಸಲ್ಲದ ಆರೊಪಗಳನ್ನು ಮಾಡುವುದು ಸರಿಯಲ್ಲ. ಅವರೂ ಕೂಡ ಓರ್ವ ಮಾಜಿ ಸಿಎಂ. ಅವರ ಇಡೀ ಕುಟುಂಬವೇ ರಾಜಕಾರಣದಲ್ಲಿ ಇದೆ. ಹೆಚ್ ಡಿ ಕೆ ತಾವು ಸಿಎಂ ಆಗಿದ್ದಾಗ ಹಾಗೆ ಮಾಡಿದ್ದರಾ? ವರ್ಗಾವಣೆ ದಂಧೆ ಅವರು ಮಾಡಿದ್ದರಾ? ವರ್ಗಾವಣೆ ಮಾಡಲು ಹಣ ಅವರು ಪಡೆದಿದ್ದರಾ? ಅವರು ಆ ರೀತಿ ಮಾಡಿರಬಹುದು ಅನ್ಸತ್ತೆ ಅದಕ್ಕೆ ಈಗ ನಮ್ಮ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಹೆಚ್.ಡಿ.ಕುಮಾರಸ್ವಾಮಿ ನೀಚ ರಾಜಕಾರಣ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ವಿವೇಕಾನಂದ ಅಂತ ನಮ್ಮ ಕ್ಷೇತ್ರದಲ್ಲಿ ಬಿಇಒ ಇದ್ದಾರೆ. ಪಿಐ ವಿವೇಕಾನಂದನ ಬಗ್ಗೆ ನನಗೆ ಗೊತ್ತಿಲ್ಲ. ನಾನು ಮಾತನಾಡಿದ್ದು ಸಿಎಸ್ ಆರ್ ಫಂಡ್ ಬಗ್ಗೆ. ಅನಗತ್ಯವಾಗಿ ಕುಮಾರಸ್ವಾಮಿ ಆರೋಪ ಮಾಡುವುದು ಸೂಕ್ತವಲ್ಲ. ನನಗೂ ಜವಾಬ್ದಾರಿಗಳಿವೆ. ನನ್ನ ತಂದೆ ನನಗೆ ಕ್ಷೇತ್ರದ ಜವಾಬ್ದಾರಿ ವಹಿಸಿದ್ದಾರೆ. ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ. ಇದಕ್ಕೆ ಯಾರಿಗೂ ನಾನು ಸ್ಪಷ್ಟನೆ ಕೊಡುತ್ತಾ ಇರಬೇಕಾದ ಅಗತ್ಯವಿಲ್ಲ. ಕುಮಾರಸ್ವಾಮಿ ಹಾಗೂ ಅವರ ಕುಟುಂಬದವರು ರಾಜಕೀಯದಲ್ಲಿದ್ದಾರೆ. ಅವರ ಬಗ್ಗೆಯೂ ನಾವು ಆರೊಪಗಳನ್ನು ಮಾಡುತ್ತಿದ್ದೇವಾ? ಎಂದು ಕಿಡಿಕಾರಿದರು.


Related Articles

Back to top button