
ಪ್ರಗತಿವಾಹಿನಿ ಸುದ್ದಿ: ನವೆಂಬರ್ ಕ್ರಾಂತಿ, ನಾಯಕತ್ವ ಬದಲಾವಣೆ ವಿಚಾರವಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಶಾಸಕ ಯತ್ನಾಳ್, ಸ್ಪರ್ಧೆಯಲ್ಲಿರುವ ಯಾವ ನಾಯಕರೂ ಸಿಎಂ ಆಗಲ್ಲ. ರಾಜ್ಯದ ಸಾರಥ್ಯ ಬ್ಲ್ಯಾಕ್ ಹಾರ್ಸ್ ಕೈಗೆ ಸಿಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜ್ಯದ ಮುಖ್ಯಮಂತ್ರಿ ಆಗಲಿದ್ದಾರೆ. ಡಿಕೆಶಿಯೂ ಸಿಎಂ ಆಗಲ್ಲ, ಸತೀಶ್ ಜಾರಕಿಹೊಳಿ ಕೂಡ ಸಿಎಂ ಆಗಲ್ಲ. ಒಮ್ಮೆ ಸಿಎಂ ಆಗಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಕಾಯುತ್ತಿದ್ದಾರೆ. ಸಿಎಂ ಪುತ್ರ ಕೂಡ ಬೆಳಗಾವಿಗೆ ಬಂದು ಸತೀಶ್ ಜಾರಕಿಹೊಳಿ ಹೆಸರು ಹೇಳಿ ಹೋಗಿದ್ದಾರೆ. ಆದರೆ ನಾಯಕತ್ವ ಬದಲಾವಣೆ ಆಗಲಿದೆ, ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಲಿದ್ದಾರೆ ಎಂದರು.
ಸಚಿವ ಎಂ.ಬಿ.ಪಾಟೀಲ್ ಸವಾಲು ಸ್ವೀಕರಿಸಿದ್ದೇನೆ ಎಂದ ಯತ್ನಾಳ್
ಬಬಲೇಶ್ವರ ಕ್ಷೇತ್ರದಲ್ಲಿ ಸಮಾವೇಶ ಮಾಡುತ್ತೇವೆ. ಎಂ ಬಿ ಪಾಟೀಲ್ ಸವಾಲ್ ಸ್ವೀಕಾರ ಮಾಡಿದ್ದೇವೆ ಎಂದು ಇದೇ ವೇಳೆ ಯತ್ನಾಳ್ ಹೇಳಿದ್ದಾರೆ.
ದಾವಣಗೆರೆಯಲ್ಲಿ ಬೃಹತ್ ಸಮಾವೇಶ ಮಾಡಿ ಸರ್ಕಾರಕ್ಕೆ ಎಚ್ಚರಿಕೆ ಕೊಡ್ತಿವಿ. ಬಸವಣ್ಣನವರ ಹೆಸರು ಹೇಳಿ ನಾಟಕ ಮಾಡಬೇಡಿ. ಬಸವಣ್ಣನವರ ಹೆಸರು ಹೇಳಿ ಪಾದಪೂಜೆ ಮಾಡಿಸಿಕೊಳ್ಳಬಾರದು. ಕಾವಿ ಬದಲಾಗಿ ಹಸಿರು ಬಟ್ಟೆ ಧರಸಿ ಎಂದು ಶ್ರೀಗಳಿಗೆ ಟೀಕಿಸಿದರು.
ಲಿಂಗಾಯತ ಧರ್ಮ ಸ್ಥಾಪನೆಯ ಬಗ್ಗೆ ದಾಖಲೆ ಎಲ್ಲಿದೆ. ಬಸವಣ್ಣ ಹಿಂದು ಸಮಾಜದಲ್ಲಿ ಇರೋ ಮೂಢ ನಂಬಿಕೆ ವಿರುದ್ಧ ಹೋರಾಟ ಮಾಡಿದ್ರು. ಬಸವಣ್ಣನವರ ಜೊತೆಗೆ ಎಲ್ಲಾ ಸಮಾಜದರು ಇದ್ರು. ಎಂ ಬಿ ಪಾಟೀಲ್ ಅವರೇ ನಿಮ್ಮ ಭೀಮ, ಬಸವ ಆರ್ಮಿ ಬರಲಿ ನಿಮ್ಮ ಭಾಷೆಯಲ್ಲಿಯೇ ನಾವು ಉತ್ತರ ಕೊಡ್ತಿವಿ. ವಿಜಯಪುರದಿಂದ ಜನರನ್ನು ಕರೆದುಕೊಂಡು ಹೋಗಿ ಬೆಂಗಳೂರಿನಲ್ಲಿ ಸಮಾವೇಶ ಮಾಡಿದ್ರು ಎಂದರು.
ಸತೀಶ್ ಜಾರಕಿಹೊಳಿಯನ್ನು ಸಿಎಂ ಮಾಡೋ ಭಯ ಸಿಎಂಗೆ ಇದೆ. ಹೀಗಾಗಿ ಎಂ ಬಿ ಪಾಟೀಲ್ ರನ್ನು ಎತ್ತಿ ಕಟ್ಟುವ ಕೆಲಸ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.



