*ಮೊದಲು ಆ ಇಬ್ಬರನ್ನು ಉಚ್ಛಾಟಿಸಬೇಕಿತ್ತು: ಮಾಜಿ ಸಚಿವ ಕುಮಾರ್ ಬಂಗಾರಪ್ಪ*

ಪ್ರಗತಿವಾಹಿನಿ ಸುದ್ದಿ : ಬಿಜೆಪಿ ರೆಬಲ್ ಬಣದ ನಾಯಕ ಶಾಸಕ ಬಸನಗೌಡ ಪಾಟೀಲ್ ಅವರನ್ನು 6 ವರ್ಷಗಳ ಕಾಲ ಹೈಕಮಾಂಡ್ ಉಚ್ಚಾಟನೆ ಮಾಡಿದ್ದರಿಂದ ನಮ್ಮ ಹೋರಾಟಕ್ಕೆ ಹಿನ್ನಡೆಯಾಗಿದೆ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರು ಒಪ್ಪಿಕೊಂಡರು.
ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ್ ಅವರ ಮನೆಯಲ್ಲಿ ನಡೆದ ರೆಬಲ್ಸ್ ನಾಯಕರ ಸಭೆ ಬಳಿಕ ಪ್ರತಿಕ್ರಿಯೆ ನೀಡಿದ ಅವರು, ಇಡೀ ಕರ್ನಾಟಕ ಯತ್ನಾಳ್ ಅವರೊಂದಿಗೆ ಇದೆ. ನಮ್ಮ ಹೋರಾಟ ವ್ಯಕ್ತಿ ಪರವಲ್ಲ ಪಕ್ಷದ ಪರ ಎಂದರು. ಉಚ್ಚಾಟನೆ ಮಾಡಬೇಕಿದ್ದರೆ ಮೊದಲು ಶಾಸಕರಾದ ಎಸ್ಟಿ ಸೋಮಶೇಖರ್, ಶಿವರಾಂ ಹೆಬ್ಬಾರ್ ಅವರನ್ನು ಮಾಡಬೇಕಿತ್ತು. ಆದರೆ ಯತ್ನಾಳ್ ಅವರನ್ನು ಮಾಡಿದ್ದು ನಮಗೆ ನೋವು ತಂದಿದ್ದು ಕಹಿ ಘಟನೆಯಾಗಿದೆ ಎಂದು ಹೇಳಿದರು.
ನಾವೆಲ್ಲರೂ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುತ್ತೇವೆ. ಒಗ್ಗಟ್ಟಿನಿಂದ ಉಚ್ಚಾಟನೆಯನ್ನು ಪುನರ್ ಪರಿಶೀಲಿಸುವಂತೆ ಮನವಿ ಮಾಡಿಕೊಳ್ಳುತ್ತೇವೆ. ಯಾವುದೋ ಒಂದು ಕೆಟ್ಟ ಘಳಿಗೆಯಲ್ಲಿ ಉಚ್ಚಾಟನೆ ಆಗಿದೆ. ನಮ್ಮಿಂದ ಏನಾದರೂ ತಪ್ಪಾಗಿದ್ದರೆ ಅದನ್ನು ಸರಿ ಮಾಡಿಕೊಂಡು ಮುಂದೆ ಹೋಗುತ್ತೇವೆ ಎಂದು ತಿಳಿಸಿದರು.
ಉಚ್ಚಾಟನೆ ಆದೇಶವನ್ನು ನಾವ್ಯಾರೂ ಚಾಲೆಂಜ್ ಮಾಡುತ್ತಿಲ್ಲ, ಬದಲಾಗಿ ಪುನರ್ ಪರಿಶೀಲಿಸುವಂತೆ ಮನವಿ ಮಾಡಿಕೊಳ್ಳುತ್ತೇವೆ ಎಂದೂ ಒತ್ತಿ ಹೇಳಿದರು. ಪಕ್ಷದ ಆದೇಶದಂತೆ, ಅವರ ಮಾರ್ಗದರ್ಶನವನ್ನು ಪಾಲಿಸಿ ಅದರಂತೆ ನಾವು ನಡೆದುಕೊಳ್ಳುತ್ತೇವೆ ಎಂದು ಅಭಿಪ್ರಾಯಪಟ್ಟರು.