Latest

ರಸ್ತೆ ಅಪಘಾತಕ್ಕೆ ಯುವ ಪತ್ರಕರ್ತ ಬಲಿ

ಪ್ರಗತಿವಾಹಿನಿ ಸುದ್ದಿ, ಹಾವೇರಿ:  ಪ್ರಜಾವಾಣಿ ಪತ್ರಿಕೆಯ ಜಿಲ್ಲಾ ವರದಿಗಾರರಾಗಿದ್ದ ಎಂ.ಸಿ.ಮಂಜುನಾಥ (30) ಅವರು ದಾವಣಗೆರೆ ಜಿಲ್ಲೆಯ ಕೊಡಗನೂರ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬುಧವಾರ ‌ರಾತ್ರಿ ಸಾವಿಗೀಡಾದರು.
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿರುವ ಅಕ್ಕನ ಮನೆಗೆ ತಮ್ಮ ಬುಲೆಟ್ ಬೈಕ್ ನಲ್ಲಿ ತೆರಳುತ್ತಿದ್ದರು.
ರಾತ್ರಿ ಕೆಲಸ ಮುಗಿಸಿ ಹಾವೇರಿಯಿಂದ ಹೊರಟ ಮಂಜುನಾಥ ಅವರು ಕೊಡಗನೂರ ಬಳಿ ಪಿ.ಬಿ. ರಸ್ತೆಯಲ್ಲಿ ಹೊರಟಿದ್ದಾಗ ಟ್ರ್ಯಾಕ್ಟರ್ ಡಿಕ್ಕಿ ಹೊಡೆಯಿತು. ಘಟನೆ ನಡೆದ ತಕ್ಷಣ ಟ್ರ್ಯಾಕ್ಟರ್ ಚಾಲಕ ಪರಾರಿಯಾಗಿದ್ದಾನೆ.
ಪ್ರಜಾವಾಣಿಯ ಬೆಂಗಳೂರು ಕಚೇರಿಯಲ್ಲಿ ಅಪರಾಧ ‌ವರದಿಗಾರಿಕೆ ಮಾಡುತ್ತಿದ್ದ ‌ಮಂಜುನಾಥ ಅವರು ಕಳೆದ ಮೇ ತಿಂಗಳಲ್ಲಿ ಹಾವೇರಿ ಜಿಲ್ಲಾ ವರದಿಗಾರರಾಗಿ ವರ್ಗಾವಣೆಯಾಗಿದ್ದರು‌.
ಶಿವಮೊಗ್ಗ ಜಿಲ್ಲೆಯವರಾದ ಮಂಜುನಾಥ ಕುವೆಂಪು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಅವರಿಗೆ ತಂದೆ, ತಾಯಿ, ಅಕ್ಕ, ಅಣ್ಣ ಇದ್ದಾರೆ.

   ಮುಖ್ಯಮಂತ್ರಿ ಸಂತಾಪ

ಪ್ರಜಾವಾಣಿ ಪತ್ರಿಕೆಯ ಹಾವೇರಿ ಜಿಲ್ಲಾ ವರದಿಗಾರ ಎಂ.ಸಿ. ಮಂಜುನಾಥ್ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಮಂಜುನಾಥ್ ಅವರ ಅಕಾಲಿಕ ನಿಧನದಿಂದ ಒಬ್ಬ ಯುವ, ಉತ್ಸಾಹಿ ಪತ್ರಕರ್ತನನ್ನು ಕಳೆದುಕೊಂಡಂತಾಗಿದೆ. ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಕುಟುಂಬದವರಿಗೆ ಈ ಆಘಾತ ಸಹಿಸುವ ಶಕ್ತಿ ನೀಡಲಿ ಎಂದು ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button