
ಪ್ರಗತಿವಾಹಿನಿ ಸುದ್ದಿ : ಪಾಕಿಸ್ತಾನದ ವಿರುದ್ಧ ಕೇಂದ್ರ ಸರ್ಕಾರ ಏನೇ ನಿರ್ಧಾರ ತೆಗೆದುಕೊಂಡ್ರು ನಮ್ಮ ಬೆಂಬಲ ಇದೆ. ಈಗಾಗಲೇ ನಮ್ಮ ನಾಯಕ ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷರು ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿಕೆ ನೀಡಿದ್ದಾರೆ.
ಕಲಬುರಗಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು ಈಗಲೂ ನನ್ನ ಹೇಳಿಕೆಗೆ ಬದ್ಧನಿದ್ದೇನೆ. ನಾನು ಆತ್ಮಾಹುತಿ ಬಾಂಬ್ ಕಟ್ಟಿಕೊಂಡು ಯುದ್ಧಕ್ಕೆ ಹೋಗುತ್ತೇನೆ. ಸಿ.ಟಿ ರವಿಗೆ ಕೆಲಸ ಇಲ್ಲ ಅದಕ್ಕಾಗಿ ಹೀಗೆ ಮಾತನಾಡುತ್ತಾರೆ ಎಂದು ಜಮೀರ್ ಯುದ್ಧಕ್ಕೆ ಹೋಗುವುದು ಬೇಡ, ಇಲ್ಲಿರುವ ಕುನ್ನಿಗಳನ್ನ ಕೊಲ್ಲಲಿ ಎಂದು ಹೇಳಿಕೆ ನೀಡಿದ ಸಿ.ಟಿ ರವಿ ಹೇಳಿಕೆಗೆ ಪ್ರತ್ಯುತ್ತರ ನೀಡಿದರು.
ಜಮೀರ್ ಇದಕ್ಕೂ ಮೊದಲು ಬಾಂಬ್ ಕಟ್ಟಿಕೊಂಡು ಗಡಿಗೆ ಹೋಗುತ್ತೇನೆ ಎಂದಿದ್ದರು. ಜಮೀರ್ ಮಾತಿಗೆ ಕೇಂದ್ರ ಆಹಾರ ಸಚಿವ ಪ್ರಲ್ಲಾದ್ ಜೋಶಿ ಟಾಂಗ್ ಕೊಟ್ಟಿದ್ದರು. ಜಮೀರ್ ಶಾಂತವಾಗಿದ್ದರೆ ಸಾಕು. ನೀವೇನೂ ಮಾಡೋದು ಬೇಡ. ಮಿಲಿಟರಿಯನ್ನ ನಂಬಿ ಸುಮ್ಮನಿರಿ. ನಿಮ್ಮ ಭಾಷಣ ಬೇಡ, ನೀವು ಹೋಗೋದು ಬೇಡ. ಸೈನ್ಯದ ಶಕ್ತಿ, ಸೈನಿಕರು, ಇಂಟಲಿಜೆನ್ಸ್ ಬಗ್ಗೆ ವಿಶ್ವಾಸವಿಡಿ ಹೇಳಿಕೆಗಳನ್ನ ಕೊಡದೆ ಬಾಯಿ ಮುಚ್ಚಿಕೊಂಡಿದ್ದರೆ ಸಾಕು. ಜಮೀರ್ ಶಾಂತವಾಗಿರೋದೆ ದೇಶಕ್ಕೆ ಮಾಡೋ ದೊಡ್ಡ ಸೇವೆ ಎಂದು ವ್ಯಂಗ್ಯವಾಡಿದ್ದರು.
ಜಮೀರ್ ಸೈನ್ಯದ, ಸೈನಿಕರ ಆತ್ಮಸ್ಥೆರ್ಯ ಕುಗ್ಗಿಸದೆ ಸುಮ್ಮನಿದ್ದರೆ ಸಾಕು. ಇಲ್ಲ ಸಲ್ಲದ ಹೇಳಿಕೆ ಕೊಡುವುದನ್ನು ಬಿಟ್ಟರೆ ಸಾಕು. ಬಾಂಬ್ ಕಟ್ಟಿ ಪಾಕಿಸ್ತಾನಕ್ಕೆ ಹೋಗಿ ಹೋರಾಡೋ ಬದಲು ನಿಮ್ಮ ಕೆಲಸ ನೀವು ಮಾಡಿ ಎಂದು ಜಮೀರ್ಗೆ ಜೋಶಿ ಟಕ್ಕರ್ ಕೊಟ್ಟಿದ್ದರು.