ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಭಾರತೀಯರು ಆರಾಧನಾ ಪ್ರಿಯರು. ವರ್ಷವಿಡೀ ೧೨ ಶಿವರಾತ್ರಿಗಳಿರುತ್ತವೆ. ಆದರೆ ಫೆಬ್ರವರಿ, ಮಾರ್ಚನಲ್ಲಿ ಬರುವ ಈ ಶಿವರಾತ್ರಿಯು ವಿಶೇಷವಾಗಿದೆ. ಈ ದಿನ ಶಿವನು ಶಕ್ತಿಯೊಂದಿಗೆ ಬೆರೆಯುವ ಪವಿತ್ರ ದಿನ. ಶಿವ ಸಕಲ ಚಟುವಟಿಕೆಗಳ ಮೂಲ. ಶಿವ ಎಂದರೆ ಮಂಗಳಕರ ಪ್ರಕಾಶಕ. ಶಿವಪುರಾಣದ ಪ್ರಕಾರ ಶಿವನ ಪೂಜೆಗೆ ಅನೇಕ ವಿಧಗಳಿವೆ. ಇಂದು ಶಿವನನ್ನು ಬಿಲ್ವಪತ್ರೆಯಿಂದ ಅರ್ಚನೆ ಮಾಡಿದರೆ ಕೋಟಿ ಜನ್ಮಕ್ಕಾಗುವಷ್ಟು ಪುಣ್ಯ ಸಿಗುತ್ತದೆ ಎಂದು ಡಾ. ಗುರುದೇವಿ ಹುಲೆಪ್ಪನವರಮಠ ಹೇಳಿದರು.
ನಗರದ ಕಾರಂಜಿಮಠದಲ್ಲಿ ನಡೆದ ೨೨೩ನೇ ಶಿವಾನುಭವ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ಡಾ. ಸ್ಫೂರ್ತಿ ಶಿವಾನಂದ ಮಾಸ್ತಿಹೊಳಿ ಮಾತನಾಡಿ, ರುದ್ರಾಕ್ಷಿ ಶಿವನ ಆಭರಣ. ಶಿವನು ರುದ್ರಾಕ್ಷಿ ಧರಿಸಿದ ಮೇಲೆಯೇ ರುದ್ರಾಕ್ಷ ಎಂಬ ಹೆಸರು ಬಂತೆಂಬುದು ಶಿವಪುರಾಣದ ಅಭಿಪ್ರಾಯ. ತ್ರಿಪುರಾಸುರನನ್ನು ಸಂಹರಿಸಲು ಶಿವನು ಅರ್ಧ ಕಣ್ಣು ತೆರೆದು ಒಂದು ಸಾವಿರ ವರ್ಷ ತಪಸ್ಸು ಮಾಡಿದನು. ಆಗ ಕಣ್ಣಿನಿಂದ ನೀರು ಬಂದದ್ದೆ ರುದ್ರಾಕ್ಷಿ ಸೃಷ್ಟಿಗೆ ಕಾರಣವಾಯಿತು. ಇಂಥ ರುದ್ರಾಕ್ಷಿಯನ್ನು ಧರಿಸುವುದರಿಂದ ಆರೋಗ್ಯ ವೃದ್ದಿಸುತ್ತದೆ ಎಂದರು.
ಎಂದು ಡಾ. ರವಿ ಬಿ. ಪಾಟೀಲ ಮಾತನಾಡಿ, ಇಂದು ಕಾರಂಜಿಮಠದ ಪೂಜ್ಯರು ನನಗೆ ವೈದ್ಯ ಭೂಷಣ ಪ್ರಶಸ್ತಿ ನೀಡಿ ಸನ್ಮಾನಿಸಿದ್ದು ಸಂತೋಷವಾಗಿದೆ. ನಮ್ಮ ಹಿರಿಯರಂತೆ ನಾವು ಬದುಕಬೇಕು. ದೇಹಕ್ಕೆ ಶ್ರಮ ನೀಡಬೇಕು. ಪ್ರತಿಯೊಬ್ಬರೂ ವ್ಯಾಯಾಮ ಮಾಡಬೇಕು. ಕಾಯಿಪಲ್ಯ, ಹಣ್ಣು, ಮೊಳಕೆಕಾಳು, ಮೊಸರು ಮಜ್ಜಿಗೆಯನ್ನು ಹೆಚ್ಚು ಉಪಯೋಗಿಸಬೇಕು. ಕನಿಷ್ಠ ೮ ಗಂಟೆ ನಿದ್ರೆ ಮಾಡಬೇಕು. ಪ್ರತಿನಿತ್ಯ ೨೦ ನಿಮಿಷ ನಡಿಗೆ, ೨೦ ನಿಮಿಷ ಯೋಗ, ೨೦ ನಿಮಿಷ ಪ್ರಾಣಾಯಾಮ ಮಾಡಬೇಕು ಎಂದ ತಿಳಿಸಿದರು.
ಕಾರಂಜಿಮಠದ ಗುರುಸಿದ್ಧ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು.
ಮಾಜಿ ಮಹಾಪೌರ ಡಾ. ಸಿದ್ಧನಗೌಡ ಪಾಟೀಲ, ಶ್ರೀ ಶಿವಯೋಗಿ ದೇವರು ಮಾತನಾಡಿದರು. ಡಾ. ರಾಜಶೇಖರ, ಡಾ. ಬಸವರಾಜ ಜಗಜಂಪಿ, ವಿಜಯ ಶಾಸ್ತ್ರಿಗಳು, ಅಶೋಕ ಇಟಗಿ ಮುಂತಾದವರು ಉಪಸ್ಥಿತರಿದ್ದರು ಪ್ರೊ. ಶಾನವಾಡ ನಿರೂಪಿಸಿದರು. ವಿ.ಕೆ. ಪಾಟೀಲ ವಂದಿಸಿದರು. ಮಾತೃ ಮಂಡಳಿ ಸದಸ್ಯರು ಪ್ರಾರ್ಥನೆ ಹಾಗೂ ವಚನ ಮಂಗಲ ಮಾಡಿದರು.