Belagavi NewsBelgaum NewsKannada NewsKarnataka NewsLatest

*ಜಿಲ್ಲೆಯ 21 ರೈತ ಉತ್ಪಾದಕ ಸಂಸ್ಥೆಗಳಿಗೆ ಕೇಂದ್ರದಿಂದ 1.80 ಕೋಟಿ ಅನುದಾನ: ಈರಣ್ಣ ಕಡಾಡಿ*

ಪ್ರಗತಿವಾಹಿನಿ ಸುದ್ದಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಬೆಳಗಾವಿ ಜಿಲ್ಲೆಯ ರೈತರನ್ನು ಆರ್ಥಿಕವಾಗಿ ಸದೃಢಗೊಳಿಸಲು ಬದ್ಧವಾಗಿದ್ದು, ‘10,000 ಎಫ್‍ಪಿಒಗಳ ರಚನೆ ಮತ್ತು ಉತ್ತೇಜನ’ ಯೋಜನೆಯಡಿ ಜಿಲ್ಲೆಯಲ್ಲಿ 21 ರೈತ ಉತ್ಪಾದಕ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ ಮತ್ತು ಜಿಲ್ಲೆಯ 17 ಎಫ್‍ಪಿಒಗಳಿಗೆ ಒಟ್ಟು 1.80 ಕೋಟಿ ರೂ. ಈಕ್ವಿಟಿ ಗ್ರಾಂಟ್  ನೀಡಲಾಗಿದೆ. ಅಲ್ಲದೆ, 4 ಅರ್ಹ ಎಫ್‍ಪಿಒಗಳಿಗೆ 34.48 ಲಕ್ಷ ರೂ. ಸಾಲದ ಸೌಲಭ್ಯವನ್ನು ಮಂಜೂರು ಮಾಡಲಾಗಿದೆ ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವ  ರಾಮನಾಥ್ ಠಾಕೂರ್ ಅವರು ಲಿಖಿತ ಉತ್ತರದಲ್ಲಿ ಮಾಹಿತಿ ನೀಡಿದ್ದಾರೆಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ತಿಳಿಸಿದ್ದಾರೆ. 

ನವದೆಹಲಿಯಲ್ಲಿ ನಡೆಯುತ್ತಿರುವ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಎಫ್‍ಪಿಒ ಗಳ ರಚನೆ ಮತ್ತು ಕಾರ್ಯವೈಖರಿ ಕುರಿತು ಕೇಳಿದ ಪ್ರಶ್ನಗೆ ಉತ್ತರಿಸಿದ ಸಚಿವರು ಈ ಸಂಸ್ಥೆಗಳು ಪ್ರಸ್ತುತ ಧಾನ್ಯಗಳು, ಬೇಳೆಕಾಳುಗಳು, ಎಣ್ಣೆಕಾಳುಗಳು, ಕಬ್ಬು ಮತ್ತು ತೋಟಗಾರಿಕಾ ಬೆಳೆಗಳ ಸಂಗ್ರಹಣೆ ಹಾಗೂ ಪ್ರಾಥಮಿಕ ಸಂಸ್ಕರಣಾ ಚಟುವಟಿಕೆಗಳಲ್ಲಿ ಹಾಗೂ ಮಾರಾಟದಲ್ಲಿ ತೊಡಗಿಸಿಕೊಂಡಿವೆ.  

Home add -Advt

ರೈತರು ತಮ್ಮ ಬೆಳೆಗಳಿಗೆ ತಾವೇ ಬೆಲೆ ನಿಗದಿಪಡಿಸಲು ಅನುಕೂಲವಾಗುವಂತೆ ಆನ್‍ಲೈನ್ ಮೂಲಕ ದೇಶಾದ್ಯಂತ ವ್ಯಾಪಾರ ಮಾಡಲು 10 ಎಫ್‍ಪಿಒಗಳನ್ನು  ಇ-ನಾಮ್ (ರಾಷ್ಟ್ರೀಯ ಕೃಷಿ ಮಾರುಕಟ್ಟೆ) ವೇದಿಕೆಗೆ ಜೋಡಿಸಲಾಗಿದೆ. ಈ ಎಫ್‍ಪಿಒ ಗಳಿಗೆ ಆನ್‍ಲೈನ್ ವ್ಯಾಪಾರದ ಬಗ್ಗೆ ವಿಶೇಷ ತರಬೇತಿ ನೀಡಲಾಗಿದೆ.

ಕೃಷಿ ಚಟುವಟಿಕೆಗಳಲ್ಲಿ ಯಾಂತ್ರೀಕರಣವನ್ನು ಹೆಚ್ಚಿಸುವುದು ಮತ್ತು ಸಣ್ಣ ಹಾಗೂ ಅತಿಸಣ್ಣ ರೈತರಿಗೆ ದುಬಾರಿ ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆಗೆ ಪಡೆಯಲು ಅನುಕೂಲವಾಗುವಂತೆ ಎಫ್‍ಪಿಒಗಳ ಮೂಲಕ ಕಸ್ಟಮ್ ಹೈರಿಂಗ್ ಸೆಂಟರ್ ಸ್ಥಾಪಿಸಲು ಸರ್ಕಾರ ಉತ್ತೇಜನ ನೀಡುತ್ತಿದೆ ಮತ್ತು ಕೃಷಿ ಮೂಲಸೌಕರ್ಯ ನಿಧಿ ಅಡಿಯಲ್ಲಿ ಸಂಸ್ಕರಣಾ ಘಟಕಗಳು ಮತ್ತು ಚಟುವಟಿಕೆ ಕೇಂದ್ರಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರವು ಸಬ್ಸಿಡಿ ಮತ್ತು ಬಡ್ಡಿ ರಿಯಾಯಿತಿ ಸಾಲದ ನೆರವು ನೀಡುತ್ತಿದೆ. 

ಬೆಳಗಾವಿ ಜಿಲ್ಲೆಯ ರೈತ ಸಮುದಾಯವು ಕೇವಲ ಸಾಂಪ್ರದಾಯಿಕ ಕೃಷಿಗೆ ಸೀಮಿತವಾಗದೆ, ತಾಂತ್ರಿಕವಾಗಿ ಮತ್ತು ಆರ್ಥಿಕವಾಗಿ ಸ್ವಾವಲಂಬಿಯಾಗಬೇಕು ಎನ್ನುವುದು ಕೇಂದ್ರ ಸರ್ಕಾರದ ಮೂಲ ಉದ್ದೇಶವಾಗಿದೆ. ರೈತ ಉತ್ಪಾದಕ ಸಂಸ್ಥೆಗಳ ಮೂಲಕ ರೈತರು ಒಗ್ಗೂಡಿ ಬೆಳೆ ಬೆಳೆಯುವುದರಿಂದ ಮತ್ತು ಮಾರುಕಟ್ಟೆಯಲ್ಲಿ ಯಾವುದೇ ಮಧ್ಯವರ್ತಿಗಳಿಲ್ಲದೆ ನೇರವಾಗಿ ವ್ಯಾಪಾರ ಮಾಡುವುದರಿಂದ ರೈತರ ಆದಾಯವನ್ನು ದುಪ್ಪಟ್ಟುಗೊಳಿಸಲು ಸಾಧ್ಯವಿದೆ. 

ಜಿಲ್ಲೆಯ ಪ್ರತಿಯೊಬ್ಬ ರೈತರು ಈ ಯೋಜನೆಗಳ ಲಾಭ ಪಡೆದು ಆರ್ಥಿಕ ಪ್ರಗತಿ ಸಾಧಿಸಬೇಕೆಂದು ಸಚಿವರು ಮಾಹಿತಿ ನೀಡಿದ್ದಾರೆಂದು ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ.

Related Articles

Back to top button