ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ನಗರದ ರೈಲ್ವೆ ಸಮಯದಾಯ ಭವನದಲ್ಲಿ ಮೇ 4 ಮತ್ತು 5 ರಂದು ಕರ್ನಾಟಕ ರಾಜ್ಯ ಔಷಧ ಮಾರಾಟ ಪ್ರತಿನಿಧಿಗಳ ಸಂಘದ ರಾಜ್ಯ ಸಮ್ಮೇಳನ ನಡೆಯಲಿದೆ.
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ 25ನೇ ರಾಜ್ಯ ಸಮ್ಮೇಳನ ಹಮ್ಮಿಕೊಂಡಿದ್ದೇವೆ ಎಂದು ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ. ಚಂದ್ರಕುಮಾರ್ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನಿಷ್ಠ 18 ಸಾವಿರ ರೂ. ವೇತನ ಘೋಷಿಸುವುದು, ಕುಂದು ಕೊರತೆ ನಿವಾರಣೆಗೆ ಸಮಿತಿ ರಚನೆ ಮಾಡುವುದು, ಐಡಿ ಕಾಯ್ದೆ ತಿದ್ದುಪಡಿ ಮಾಡುವುದು, ಆರು ತಿಂಗಳ ಪ್ರಸೂತಿ ರಜೆ ಅನುಸರಿಸುವಂತೆ ಆದೇಶಿಸುವುದು, ಬಹುರಾಷ್ಟ್ರೀಯ ಸಂಸ್ಥೆಗಳು ದೇಶದ ಔಷಧ ಕಂಪನಿಗಳ ಖರೀದಿಯನ್ನು ತಡೆಯುವುದು ಸೇರಿದಂತೆ ನಾನಾ ಬೇಡಿಕೆಗಳನ್ನು ಮುಂದಿಟ್ಟು ಅನೇಕ ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ಸರಕಾರಗಳು ಮನವಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಮ್ಮೇಳನ ಉದ್ಘಾಟನಾ ಸಮಾರಂಭ ನಾಳೆ ಬೆಳಗ್ಗೆ 10.30 ಗಂಟೆಗೆ ನಡೆಯಲಿದ್ದು, ಕಾರ್ಯಕ್ರಮದಲ್ಲಿ ವೈದ್ಯರಾದ ಡಾ.ಎನ್.ಡಿ. ಜೆಂಗಾಡೆ, ಡಾ. ರವಿ ಪಾಟೀಲ, ಸಮಿತಿಯ ಅಧ್ಯಕ್ಷ ಡಾ. ರಮೇಶ ದೊಡ್ಡಣ್ಣವರ, ಪ್ರಧಾನ ಕಾರ್ಯದರ್ಶಿಗಳಾದ ಸಂತನು ಚಟರ್ಜಿ, ಮೀನಾಕ್ಷಿ ಸುಂದರಂ ಭಾಗವಹಿಸಲಿದ್ದಾರೆ. ಸಮ್ಮೇಳನದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ 400 ಪ್ರತಿನಿಧಿಗಳು ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಸಮಿತಿ ಮುಖಂಡರಾದ ಎಚ್.ಜಿ. ಸುರೇಶ, ಆನಂದ ರಾಜು, ಪ್ರಸಾದ್ ದೇಸಾಯಿ ಮೊದಲಾದವರು ಇದ್ದರು.