Latest

ಬೆಳಗಾವಿ ಅಭಿವೃದ್ಧಿಗೆ ಜನಪ್ರತಿನಿಧಿಗಳೊಂದಿಗೆ ಸಂಘಟಿತ ಹೋರಾಟ -ಎಫ್ಒಎಬಿ

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಸೌಲಭ್ಯ ಪಡೆಯುವುದಕ್ಕೂ, ಪಡೆದ ಸೌಲಭ್ಯ ಉಳಿಸಿಕೊಳ್ಳುವುದಕ್ಕೂ ಬೆಳಗಾವಿ ಪ್ರತಿ ಬಾರಿ ಹೋರಾಟ ಮಾಡಬೇಕಾದ ಸ್ಥಿತಿ ಇರುವುದಕ್ಕೆ ತೀವ್ರ ವಿಷಾದ ವ್ಯಕ್ತಪಡಿಸಿರುವ  ಫೋರಮ್ ಆಫ್ ಅಸೋಸಿಯೇಶನ್ ಆಫ್ ಬೆಳಗಾವಿ (ಎಫ್ಒಎಬಿ), ಇಂತಹ ಸ್ಥಿತಿ ನಿರ್ಮಾಣವಾಗದಂತೆ  ಸಂಘಟಿತ ಹೋರಾಟ ಮಾಡಬೇಕು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದೆ.

Home add -Advt

ತೀವ್ರ ಹೋರಾಟದ ನಂತರ  ಉಡಾನ್ ಯೋಜನೆಯಡಿ ಬಂದಿರುವ ವಿಮಾನ ಸೌಲಭ್ಯ ಹುಬ್ಬಳ್ಳಿಗೆ ಸ್ಥಳಾಂತರವಾಗುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಮಂಗಳವಾರ ಸಭೆ ಸೇರಿದ್ದ ಫೋರಮ್ ನ ಪದಾಧಿಕಾರಿಗಳು, ವಿಮಾನ ಸೌಲಭ್ಯ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಂಸದರಾದ ಸುರೇಶ ಅಂಗಡಿ ಮತ್ತು ಪ್ರಭಾಕರ ಕೋರೆ ನಡೆಸುತ್ತಿರುವ ಪ್ರಯತ್ನವನ್ನು ಶ್ಲಾಘಿಸಿತು.

ಸಂಸದರು ಸೇರಿದಂತೆ ಬೆಳಗಾವಿ ಎಲ್ಲ ಜನಪ್ರತಿನಿಧಿಗಳು ಜಿಲ್ಲೆಯ ಅಭಿವೃದ್ಧಿಗಾಗಿ ಮಾಡುವ ಕೆಲಸಗಳಿಗೆ ಬೆಳಗಾವಿಯ ಎಲ್ಲ ಸಂಘಟನೆಗಳು ಕೈಜೋಡಿಸಲಿವೆ. ಮುಂದೆ ಬೆಳಗಾವಿ ಅಭಿವೃದ್ಧಿಯ ದೃಷ್ಟಿಯಿಂದ ಸಂಸದರ ಜೊತೆಗೆ ನಿಲ್ಲಲಿವೆ ಎನ್ನುವ ಭರವಸೆ ನೀಡಿದ ಸಭೆ,  ಮುಂದಿನ ವಾರ ಜಿಲ್ಲೆಯ ಎಲ್ಲ ಸಂಸದರನ್ನು ಸನ್ಮಾನಿಸಬೇಕೆಂದು ನಿರ್ಧರಿಸಿತು.

ಈಗ ಇರುವ ಎಲ್ಲ ವಿಮಾನ ಸೌಲಭ್ಯಗಳನ್ನು ಮುಂದುವರಿಸಬೇಕು. ಮತ್ತು ಬೆಳಗಾವಿಗೆ ಇನ್ನೂ ಹೆಚ್ಚಿನ ವಿಮಾನ ಸೌಲಭ್ಯಗಳನ್ನು ನೀಡಬೇಕೆನ್ನುವ ಹಿನ್ನೆಲೆಯಲ್ಲಿ ಸಂಬಂಧಿಸಿದ ಎಲ್ಲ ಅಧಿಕಾರಿಗಳಿಗೆ ಹಾಗೂ ಸಬಂಧಿಸಿದ ಏರ್ ಲೈನ್ಸ್ ಮುಖ್ಯಸ್ಥರಿಗೆ ಪ್ರತಿಯೊಂದು ಸಂಘಟನೆಗಳ ವತಿಯಿಂದ ಪತ್ರ ಬರೆಯಬೇಕು ಎಂದು ಸಭೆ ನಿರ್ಧರಿಸಿತು.

ಪ್ರೊಫೇಶನಲ್ ಫೋರಮ್ ಅಧ್ಯಕ್ಷ ಬಿ.ಎಸ್.ಪಾಟೀಲ, ಕ್ರೆಡೈ ರಾಜ್ಯ ನಿಯೋಜಿತ ಅಧ್ಯಕ್ಷ ಚೈತನ್ಯ ಕುಲಕರ್ಣಿ, ಕ್ರೆಡೈ ಜಿಲ್ಲಾಧ್ಯಕ್ಷ ರಾಜೇಶ ಹೆಡಾ, ಚೆಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಮಹೇಶ ಬಾಗಿ, ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ರೋಹನ್ ಜುವಳಿ, ಆನಂದ ಹಾವಣ್ಣವರ್, ಮಲ್ಲಿಕಾರ್ಜುನ ಮುದ್ನೂರ್, ಎಂ.ಕೆ.ಹೆಗಡೆ, ಯೋಗೇಶ ಕುಲಕರ್ಣಿ, ಡಾ.ಎಚ್.ಬಿ.ರಾಜಶೇಖರ, ಎಚ್.ಎನ್.ಶಿರಗಾವಿ, ಡಾ.ನೇತ್ರಾವತಿ ಸಬ್ನಿಸ್, ಅನಿಲ ಇಂಗಳೇರಿ, ಜಯಕುಮಾರ ಪಾಟೀಲ, ಎಂ.ಎಸ್.ಬಳಿಗಾರ, ಬಿ.ಜಿ.ಧರೆಣ್ಣಿ, ಅಜಯ ಅಸುಂಡಿ, ರಾಜೇಂದ್ರ ಮುಂದಡಾ, ಉಮೇಶ ಬೋಲ್ ಮಾಲ್, ಡಾ.ಬಿ.ಬಿ.ಪುಟ್ಟಿ ಮೊದಲಾದವರು ಇದ್ದರು.

 

Related Articles

Back to top button