Latest

ಬೆಳಗಾವಿಯನ್ನು ಆರೋಗ್ಯ ರಾಜಧಾನಿಯನ್ನಾಗಿಸಲು ಯೋಜನೆ -ಡಾ.ಜಾಲಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಆಧುನಿಕತೆಯಲ್ಲಿ ವೈದ್ಯ ವಿಜ್ಞಾನ ಎಷ್ಟೇ ಮುಂದುವರೆದಿದ್ದರೂ ಕೂಡ ಮಾನವನಿಗೆ ಚಿಕಿತ್ಸೆ ನೀಡಿ ಖಾಯಿಲೆಯನ್ನು ಗುಣಪಡಿಸಬಹುದೇ ವಿನಃ ಆತನ ಅಂಗಾಂಗಗಳನ್ನು ತಯಾರಿಸಲು ಸಾಧ್ಯವಿಲ್ಲ. ಆದ್ದರಿಂದ ದಾನಿಗಳು ಅಂಗಾಂಗಳನ್ನು ದಾನ ಮಾಡಿದರೆ ಮಾತ್ರ ಜೀವನ್ಮರಣದ ನಡುವೆ ಹೋರಾಡುತ್ತಿರುವ ವ್ಯಕ್ತಿಗೆ ಅಂಗಾಂಗ ಜೋಡಿಸಿ ಆತನನ್ನು ಉಳಿಸಬಹುದು ಎಂದು ಮುಂಬೈನ ವಿ4 ಆರ್ಗನ್ಸ್ ಫೌಂಡೇಶನ್ ನ ಶ್ರೀಕಾಂತ ಅಪ್ಟೆ ( ಅಪ್ಟೆ ಕಾಕಾ)  ಹೇಳಿದರು.

ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಅಂಗಾಂಗ ದಾನ ಕುರಿತ ಉಪನ್ಯಾಸ ನೀಡಿದ ಅವರು, ತಂತ್ರಜ್ಞಾನ ಅಳವಡಿಸಕೊಂಡು, ವೈದ್ಯಕೀಯ ಯಂತ್ರೋಪಕರಣಗಳು, ತಜ್ಞವೈದ್ಯರು ಇದ್ದರೂ ಕೂಡ ಅಂಗಾಂಗಗಳ ದಾನಿಗಳು ಇರದಿದ್ದರೆ ಉಪಯೋಗವಿಲ್ಲ. ದಾನಿಗಳು ಮತ್ತು ಅಂಗಾಂಗಗಳು ಸಿಗದಿದ್ದರೆ ಈ ಸಾಮಾಜಿಕ ಹೋರಾಟಕ್ಕೆ ಹಿನ್ನಡೆಯಾಗಲಿದೆ. ದೇಶದಲ್ಲಿ ಸುಮಾರು 2.7 ಲಕ್ಷ ರೋಗಿಗಳು ಅಂಗಾಂಗಗಳಿಗಾಗಿ ಕಾಯುತ್ತಿದ್ದಾರೆ. ಮೆದಳು ಮೃತವ್ಯಕ್ತಿ ಮಾತ್ರ ಅಂಗಾಂಗ ದಾನ ಮಾಡಬಲ್ಲ. ಆದ್ದರಿಂದ ಹೆಚ್ಚೆಚ್ಚು ದಾನಿಗಳು ತಮ್ಮ ಅಂಗಾಂಗಳನ್ನು ದಾನ ಮಾಡಲು ಮುಂದೆ ಬರುವಂತೆ ಪ್ರೇರೆಪಿಸಬೇಕಾಗಿದೆ. ಬೆಳಗಾವಿ ಭಾಗದಲ್ಲಿ ಇದೊಂದು ಚಳುವಳಿಯಾಗಿ ರೂಪಗೊಳ್ಳಬೇಕೆಂದು ಕರೆ ನೀಡಿದರು.

ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಎಂ ವಿ ಜಾಲಿ ಅವರು ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಈಗಾಗಲೇ ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ ಅಂಗಾಂಗ ಕಸಿ ಕೇಂದ್ರ ಕಾರ‍್ಯನಿರ್ವಹಿಸುತ್ತಿದೆ. ಈ ಭಾಗದಲ್ಲಿ ಅಂಗಾಂಗ ದಾನಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೆಕಾಗಿದ್ದು, ಸರಕಾರೇತರ ಸಂಘಸಂಸ್ಥೆಗಳು ಮುಂದೆ ಬರಬೇಕಾಗಿದೆ. ಅದರಲ್ಲಿಯೂ ಮಾಧ್ಯಮದವರ ಪಾತ್ರ ಅತ್ಯಂತ ಮುಖ್ಯವಾಗಿದೆ ಎಂದರು.

Home add -Advt

ಅಂಗಾಂಗಗಳ ದಾನ ಕುರಿತು ಈ ಭಾಗದಲ್ಲಿ ಅರಿವು ಕಡಿಮೆ. ಗ್ರಾಮೀಣ ಭಾಗಗಳ ಜನರಿಗೆ ಅದರ ಕುರಿತು ಜಾಗೃತೆ ಮೂಡಿಸುವುದು ಅತ್ಯಂತ ಮುಖ್ಯವಾಗಿದೆ. ಸಕಲ ಸೌಲಭ್ಯಗಳನ್ನು ಹೊಂದಿರುವ ಆಸ್ಪತ್ರೆ, ವೈದ್ಯಕೀಯ ಮಹಾವಿದ್ಯಾಲಯಗಳು ಇಲ್ಲಿದ್ದು ಬೆಳಗಾವಿಯನ್ನು ಆರೋಗ್ಯ ಕ್ಷೇತ್ರದ ರಾಜಧಾನಿಯನ್ನಾಗಿ ಪರಿವರ್ತಿಸಲು ಕಾರ‍್ಯೋನ್ಮುಖವಾಗಿದ್ದೇವೆ. ಮುಂಬರುವ ದಿನಗಳಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಬೆಳಗಾವಿ ದೊಡ್ಡದಾದ ಕಾರ‍್ಯ ಮಾಡಲಿದೆ. ಇದಕ್ಕಾಗಿ ಯೋಜನೆಯನ್ನು ಸಿದ್ದಪಡಿಸಲಾಗಿದೆ ಎಂದು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಮಾನವ ಅಂಗಾಂಗಗಳ ವೈಫಲ್ಯ ತೀವ್ರಗತಿಯಲ್ಲಿ ಕಂಡುಬರುತ್ತಿದೆ. ಅವರ ಜೀವನ ದುಸ್ತರವಾಗುತ್ತಿದ್ದು, ಅರ್ಥಿಕವಾಗಿಯೂ ದುರ್ಬಲರಾಗುತ್ತಿದ್ದಾರೆ. ಕಿಡ್ನಿ ದಾನ ಮಾಡಿದಂತೆ ಹೃದಯ, ಲಂಗ್ಸ್, ಲೀವರ್, ಪ್ಯಾಂಕ್ರಿಯಾ ಸೇರಿದಂತೆ ವಿವಿಧ ಅಂಗಗಳನ್ನು ದಾನ ಮಾಡಬೇಕು. ಅಪಘಾತದಲ್ಲಿ ಗಾಯಗೊಂಡು ಮೆದುಳು ನಿಷ್ಕ್ರೀಯಗೊಂಡು ಜೀವಂತ ಶವವಾಗಿರುವ ವ್ಯಕ್ತಿಯ ಅಂಗಗಳನ್ನು ಬೇರೊಬ್ಬರಿಗೆ ಕಸಿ ಮಾಡಿ ಅವರ ಜೀವ ಉಳಿಸಬಹುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಹೃದಯ ಶಸ್ತ್ರಚಿಕಿತ್ಸಕರಾದ ಡಾ. ರಿಚರ್ಡ್ ಸಾಲ್ಡಾನಾ, ಜೀವಸಾರ್ಥಕತೆಯ ಮನೋಜ್ ನಾಯಕ, ಡಾ. ಆನಂದ ವಾಘರಾಳಿ, ಡಾ. ಮುಕುಂದ ಉಡಚನಕರ, ಜೈಂಟ್ಸ್ ಸಹೇಲಿ ಮಹಿಳಾ ಸದಸ್ಯರು, ಆಯ್‌ಎಂಎ ಬೆಳಗಾವಿ ಅಧ್ಯಕ್ಷರು ಮುಂತಾದವರು ಉಪಸ್ಥಿತರಿದ್ದರು.

Related Articles

Back to top button