ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸೈಲೆಂಟ್ ವ್ಯಾಲಿ ಕಿಣಯೆ ಗ್ರಾಮದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸೇವಾ ಯೋಜನೆ ಅಡಿಯಲ್ಲಿ ಸಾಮಾಜಿಕ ಜಾಗೃತಿ ಜಾಥಾ ನಡೆಯಿತು.
ಮಹಿಳಾ ಸಬಲೀಕರಣ, ಪರಿಸರ ಸಂರಕ್ಷಣೆ ಮತ್ತು ಸ್ವಚ್ಛ ಭಾರತ ಕುರಿತಾಗಿ ಘೊಷಣೆಗಳನ್ನು ಕೂಗುತ್ತಾ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಕಿಣಯೆ ಗ್ರಾಮದಲ್ಲಿ ವಿದ್ಯಾರ್ಥಿಗಳು ಶ್ರಮದಾನ ಮಾಡಿದರು.
ಈ ಕಾರ್ಯಕ್ರಮಕ್ಕೆ ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ರಾಜಯೋಗಿ ಶಿಕ್ಷಕಿ ಶೋಭಾ, ಆಧುನಿಕ ಯುಗದಲ್ಲಿ ಆನಂದ ಜೀವನಕ್ಕೆ ಇರುವ ದಾರಿಗಳು ಎಂಬ ವಿಷಯದ ಕುರಿತು ಶಿಬಿರಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಿದರು. ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದಿಂದ ಜನ ಎಷ್ಟೇ ಮುಂದುವರೆದರೂ ಸುಖ ಜೀವನದ ಸೌಲಭ್ಯಗಳನ್ನು ಪಡೆದುಕೊಂಡರೂ, ಆಂತರಿಕ ಆನಂದವನ್ನು ಸುಖಮಯ ಜೀವನವನ್ನು ಅನುಭವಿಸಲಾಗುತ್ತಿಲ್ಲ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ. ರೂಪಾ ಅಕ್ಕಿ ವಹಿಸಿ, ಆಧುನಿಕ ಯುಗದಲ್ಲಿ ಪ್ರತಿಯೊಬ್ಬರೂ ಸುಖಮಯ ಜೀವನದ ಹುಡುಕಾಟದಲ್ಲಿದ್ದಾರೆ. ಅತಿಯಾದ ದುರಾಸೆಯಿಂದ ನಾವು ಸಂತೃಪ್ತಿಯ ಬದುಕನ್ನು ಬದುಕಲಾಗುತ್ತಿಲ್ಲ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಶಿಬಿರಾಧ್ಯಕ್ಷರಾಗಿ ಡಾ.ಎನ್.ಜಿ.ಬಟ್ಟಲ, ಶಿಬಿರಾಧಿಕಾರಿಗಳಾಗಿ ಎಸ್.ವಿ. ವಾಲಿಶೆಟ್ಟಿ, ಪ್ರೊ. ಬಿ.ಆಯ್.ಮಿಡಕನಟ್ಟಿ ಮತ್ತು ಪ್ರೊ.ಎಸ್.ಜಿ.ಚಿನಿವಾಲ ಉಪಸ್ಥಿತರಿದ್ದರು.
ಮಹಾಂತೇಶ ನಗರ ರಹವಾಸಿಗಳ ಸಂಘದ ಶಿಕ್ಷಣ ಮಹಾವಿದ್ಯಾಲಯ ಹಾಗೂ ರಾಣಿ ಚೆನ್ನಮ್ಮಾ ವಿಶ್ವವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಶಿಬಿರ ಆಯೋಜಿಸಲಾಗಿದೆ.