ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :
ತಂದೆ-ತಾಯಿ, ಮಕ್ಕಳ ಮೇಲೆ ಇಟ್ಟಿರುವ ಪ್ರೀತಿ ಹಾಗೂ ಮಮಕಾರವನ್ನು ಅಳೆಯಲು ಯಾವ ಮಾಪನ ದಿಂದಲೂ ಸಾಧ್ಯವಿಲ್ಲ. ಅಂತ ಹೆತ್ತವರನ್ನು ಕಡೆಗಣಿಸುವ ಪ್ರವೃತ್ತಿ ವಿಷಾದನೀಯ ಎಂದು ಹಿರಿಯ ಸಾಹಿತಿ ಡಾ. ಸರಜೂ ಕಾಟ್ಕರ್ ಹೇಳಿದರು.
ಅವರು ಚಮಕೇರಿ ಗ್ರಾಮದ “ಕನ್ನಡಿಗರ ಸಾಹಿತ್ಯ ಮತ್ತು ಸಾಂಸ್ಕೃತಿಕ ಟ್ರಸ್ಟ್ ಆಶ್ರಯದಲ್ಲಿ ನಡೆದ ಲಿಂ. ರಾಮನಗೌಡ ಬಿರಾದಾರ ಇವರ ಎರಡನೆಯ ಪುಣ್ಯ ಸ್ಮರಣೋತ್ಸವದ ಅಂಗವಾಗಿ ನೀಡಬೇಕಿದ್ದ “ಅಪ್ಪ ಪ್ರಶಸ್ತಿ”ಯನ್ನು ಇಂದು ನಗರದ ಲಕ್ಷ್ಮಿ ಟೇಕಡಿಯಲ್ಲಿರುವ ಹುಕ್ಕೇರಿ ಹಿರೇಮಠದ ಶಾಖಾ ಮಠದಲ್ಲಿ ಸ್ವೀಕರಿಸಿ ಮಾತನಾಡಿದರು.
ಹೆತ್ತವರು ಸಾಕಷ್ಟು ಪ್ರೀತಿ, ವಿಶ್ವಾಸ ವಿತ್ತರೂ ಮಕ್ಕಳು ಅವರನ್ನು ಕಡೆಗಣಿಸುತ್ತಿರುವುದು ನಮ್ಮ ಸಂಸ್ಕೃತಿ ವಿನಾಶದ ಸಂಗತಿಯಾಗಿದೆ. ತಂದೆ ತಾಯಿಯನ್ನು ಎರಡು ಕಣ್ಣುಗಳಂತೆ ನೋಡಿಕೊಳ್ಳಬೇಕು. ದೇವಸ್ಥಾನಗಳಿಗೆ ಹೋಗಿ ಪೂಜೆ ಮಾಡುವುದಕ್ಕಿಂತ ಮುಪ್ಪಿನ ಅವಸ್ಥೆಯಲ್ಲಿರುವ ಹೆತ್ತವರ ಸೇವೆ ಮಾಡಿದರೆ ಅದಕ್ಕಿಂತ ಪುಣ್ಯ ಮತ್ತೊಂದಿಲ್ಲ ಎಂದರು.
ಸಾನ್ನಿಧ್ಯ ವಹಿಸಿ ಮಾತನಾಡಿದ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, ನಿಮ್ಮ ತಂದೆ ತಾಯಿಯ ಹೆಸರಿನಲ್ಲಿ ಕಾರ್ಯಕ್ರಮ ಮಾಡಿರಿ ಅಂತ ಹೇಳುವುದಿಲ್ಲ, ಇರುವಾಗ ಅವರ ಸೇವೆ ಮಾಡಿ, ಅವರ ಆಶೀರ್ವಾದ ಪಡೆದುಕೊಂಡು ಬದುಕನ್ನು ಬಂಗಾರ ಮಾಡಿಕೊಳ್ಳಿ
ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ. ರಾಮಕೃಷ್ಣ ಮರಾಠೆ ಅವರು ಮಾತನಾಡಿ ಭೂಮಿಯ ತೂಕಕ್ಕಿಂತ ತಾಯಿಯ ತೂಕ ದೊಡ್ಡದು. ದೇವರ ಸೇವೆಗಿಂತ ತಾಯಿಯ ಸೇವೆ ದೊಡ್ಡದು. ಕಾಶಿ ರಾಮೇಶ್ವರರಿಗೆ ಹೋಗುವುದಕ್ಕಿಂತ ತಂದೆ ತಾಯಿಯೆ ದೇವರೆಂದು ತಿಳಿದು ಸೇವೆ ಮಾಡುವುದು ಒಳ್ಳೆಯದು ಎಂದರು.
ಅಧ್ಯಕ್ಷತೆ ವಹಿಸಿದ್ದ ರೈತ ಮುಖಂಡ ಕಲ್ಯಾಣರಾವ ಮುಚಳಂಬಿ ಮಾತನಾಡಿದರು.
ಈ ಸಂದರ್ಭದಲ್ಲಿ ಮುಜರಾಯಿ ಇಲಾಖೆಯ ರವಿ ಕೋಟಾರಗಸ್ತಿ, ನ್ಯಾಯವಾದಿ ರವೀಂದ್ರ ತೋಟಿಗೇರ, ಡಾ. ಎ ಬಿ ಘಾಟಗೆ, ಸುಮಾ ಕಾಟ್ಕರ್, ಶಿಕ್ಷಕರಾದ ಬಸವರಾಜ ಸುಣಗಾರ ಇತರರು ಇದ್ದರು. ರಾಜು ಕೋಲ್ಕಾರ ನಿರೂಪಿಸಿ, ವಂದಿಸಿದರು.