ಪ್ರಗತಿವಾಹಿನಿ ಸುದ್ದಿ, ಬೀಳಗಿ
ಬಿಜೆಪಿ ಕಾರ್ಯಕರ್ತರು ತಮ್ಮ ಸ್ವಂತ ಕೆಲಸಗಳನ್ನು ಬದಿಗಿಟ್ಟು ಕೇಂದ್ರ ಸರ್ಕಾರದ ಜನಪರ ಯೋಜನೆಗಳನ್ನು ಹಾಗೂ ಮೋದಿಯವರ ಸಾಧನೆಗಳನ್ನು ಮತ್ತು ರಾಜ್ಯದ ಸಮ್ಮಿಶ್ರ ಸರ್ಕಾರದ ವೈಫಲ್ಯಗಳನ್ನು ಮತದಾರರಿಗೆ ತಿಳಿಸುವ ಕಾರ್ಯಮಾಡಬೇಕೆಂದು ವಿಧಾನಪರಿಷತಿ ವಿರೋಧ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಕರೆ ನೀಡಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಬಿಜೆಪಿ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಪ್ರಬುದ್ದ ಮತದಾರರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ಭ್ರಷ್ಟಾಚಾರ ರಹಿತವಾಗಿ ಆಡಳಿತ ನಡೆಸಿ ದೇಶವನ್ನು ಸಮಗ್ರ ಅಭಿವೃಧ್ಧಿ ಪಥದತ್ತ ಮನ್ನಡೆಸಿದ್ದನ್ನು ಜನರಿಗೆ ಮನದಟ್ಟು ಮಾಡಿಕೊಡಬೇಕು ಎಂದರು.
ಮಹದಾಯಿ ಮತ್ತು ಕೃಷ್ಣ ಕೊಳಕ್ಕೆ ಹಣ ಮೀಸಲಿಡದ ರಾಜ್ಯದ ಸಮ್ಮಿಶ್ರ ಸರ್ಕಾರ ಉತ್ತರ ಕರ್ನಾಟಕವನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಸಾಲಮನ್ನಾ ಘೋಷಣೆ ಕೇವಲ ಘೋಷಣೆಯಾಗಿಯೇ ಉಳಿದಿದೆ. ಉತ್ತರ ಕರ್ನಾಟಕದ ಜನರು ಸಮ್ಮಿಶ್ರ ಸರ್ಕಾರದ ವಿರುದ್ದ ಮತಹಾಕುವ ಮೂಲಕ ಸರಿಯಾದ ಪಾಠ ಕಲಿಸುವಂತೆ ತಿಳಿವಳಿಕೆ ನೀಡಬೇಕು ಎಂದು ಅವರು ಹೇಳಿದರು.
ನರೇಂದ್ರ ಮೋದಿಯವರು ಜಾಗತಿಕ ಮಟ್ಟದಲ್ಲಿ ದೇಶದ ಗೌರವ ಹೆಚ್ಚಿಸಿದ್ದಾರೆ. ಹಾಗಾಗಿ ಅವರನ್ನು ಮತ್ತೊಮ್ಮೆ ಪ್ರದಾನಿ ಮಾಡಲು ಬೆಂಬಲಿಸಬೇಕೆಂದು ಮನೆ ಮನೆಗೆ ತೆರಳಿ ವಿನಂತಿಸಿ ಎಂದು ಸಭೆಯಲ್ಲಿ ತಿಳಿಸಿದರು.
ವಿಧಾನಪರಿಷತ್ ಸದಸ್ಯ ಹಣಮಂತ ನಿರಾಣಿ, ಬಿಜೆಪಿ ತಾಲೂಕು ಅಧ್ಯಕ್ಷ ಸಂಗಪ್ಪ ಕಟಗೇರಿ, ಮಾಜಿ ಅಧ್ಯಕ್ಷರಾದ ಕೃಷ್ಟಗೌಡ ಪಾಟೀಲ, ಮಲ್ಲಪ್ಪ ರಂದೋಜಿ, ಮುಧೋಳ ತಾಲೂಕು ಅಧ್ಯಕ್ಷರಾದ ಕೆ. ಆರ್. ಮಾಚಪ್ಪನವರ, ಪ್ರಧಾನ ಕಾರ್ಯದರ್ಶಿಗಳಾದ ಟಂಕಸಾಲಿ, ಮುಳುಗಡೆ ಹಿತರಕ್ಷಣಾ ಸಮಿತಿ ಅಧ್ಯಕ್ಷರಾದ ಮುತ್ತು ದೇಸಾಯಿ ಹಾಗೂ ಆರ್. ಟಿ. ಪಾಟೀಲ ಉಪಸ್ಥಿತರಿದ್ದರು.