Latest

ಚುನಾವಣಾ ಜಾಹೀರಾತಿಗೆ ಪೂರ್ವಾನುಮತಿ ಕಡ್ಡಾಯ: ಡಾ. ಬೊಮ್ಮನಹಳ್ಳಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಮುಂಬರುವ ಲೋಕಸಭಾ ಚುನಾವಣೆ-೨೦೧೯ಕ್ಕೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ವಿದ್ಯುನ್ಮಾನ ಮಾಧ್ಯಮ, ಸಾಮಾಜಿಕ ಜಾಲತಾಣಗಳಲ್ಲಿ ಜಾಹಿರಾತು ಹಾಗೂ ಬಲ್ಕ್ ಎಸ್‌ಎಂಎಸ್‌ಗಳನ್ನು ಪ್ರಚುರಪಡಿಸುವ ಮುನ್ನ ಜಿಲ್ಲಾ ಮಟ್ಟದ ಮಾಧ್ಯಮ ಪ್ರಮಾಣೀಕರಣ ಹಾಗೂ ಕಣ್ಗಾವಲು ಸಮಿತಿ(ಎಂಸಿಎಂಸಿ)ಯ ಪೂರ್ವಾನುಮತಿ ಪಡೆಯುವುದು ಕಡ್ಡಾಯ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ತಿಳಿಸಿದರು.
ಜಿಲ್ಲಾ ಮಟ್ಟದ ಮಾಧ್ಯಮ ಪ್ರಮಾಣೀಕರಣ ಹಾಗೂ ಕಣ್ಗಾವಲು ಸಮಿತಿಯ ಕಾರ್ಯಚಟುವಟಿಕೆಗಳು, ಇವಿಎಂ ಹಾಗೂ ವಿವಿಪ್ಯಾಟ್ ಕುರಿತು ಮಾಧ್ಯಮ ಪ್ರತಿನಿಧಿಗಳು, ಮುದ್ರಕರು ಹಾಗೂ ರಾಜಕೀಯ ಪಕ್ಷದ ಪ್ರತಿನಿಧಿಗಳಿಗಾಗಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಮಾಹಿತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಹಿಸಲಿರುವ ಎಂಸಿಎಂಸಿ ಸಮಿತಿಯು ವಿದ್ಯುನ್ಮಾನ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಗೊಳ್ಳುವ ಚುನಾವಣಾ ವಿಷಯ ಹಾಗೂ ಅವುಗಳ ವಿಷಯವಸ್ತು (ಕಂಟೆಂಟ್) ಪರಿಶೀಲಿಸಿ ಅನುಮತಿ ನೀಡಲಿದೆ. ಸ್ಥಳೀಯ ಕೇಬಲ್ ನೆಟ್ವರ್ಕ, ಟಿವಿ ಚಾನೆಲ್‌ಗಳು, ಖಾಸಗಿ ಎಫ್‌ಎಂ ರೇಡಿಯೋ ಕೇಂದ್ರಗಳು, ಸಿನಿಮಾ ಮಂದಿರಗಳು, ಸಾಮಾಜಿಕ ಜಾಲತಾಣಗಳು ಹಾಗೂ ಮೊಬೈಲ್ ಸರ್ವೀಸ್ ಪ್ರೊವೈಡರ್‌ಗಳು ಯಾವುದೇ ರೀತಿಯ ಚುನಾವಣಾ ಜಾಹಿರಾತು ಅಥವಾ ಬಲ್ಕ್ ಎಸ್‌ಎಂಎಸ್ ಪ್ರಸಾರ ಮಾಡುವ ಮುಂಚೆ ಎಂಸಿಎಂಸಿ ನೀಡಿರುವ ಪೂರ್ವಾನುಮತಿ ಪ್ರಮಾಣಪತ್ರವನ್ನು ಜಾಹೀರಾತು ನೀಡುವ ರಾಜಕೀಯ ಪಕ್ಷ ಅಥವಾ ಅಭ್ಯರ್ಥಿಗಳ ಕಡೆಯಿಂದ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಭಾರತ ಚುನಾವಣಾ ಆಯೋಗದ ನಿರ್ದೇಶನಗಳು ಮತ್ತು ಚಾಲ್ತಿಯಲ್ಲಿರುವ ವಿವಿಧ ನಿಯಮಾವಳಿಗಳನ್ನು ಪಾಲಿಸುವ ಮೂಲಕ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಎಲ್ಲ ಮಾಧ್ಯಮದವರು ಹಾಗೂ ರಾಜಕೀಯ ಪಕ್ಷದ ಪ್ರತಿನಿಧಿಗಳು ಸಹಕರಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಮನವಿ ಮಾಡಿಕೊಂಡರು.
ಮಾಧ್ಯಮಗಳ ಮೇಲೆ ನಿಗಾ: ಇದೇ ವೇಳೆ ಎಂಸಿಎಂಸಿ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ನೀಡಿದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಭಾರ ಉಪ ನಿರ್ದೇಶಕ ಹಾಗೂ ಸಮಿತಿಯ ಸದಸ್ಯ ಕಾರ್ಯದರ್ಶಿ ಗುರುನಾಥ ಕಡಬೂರ, ಮಾದರಿ ನೀತಿ ಸಂಹಿತೆ ಜಾರಿಗೆ ಬಂದ ತಕ್ಷಣದಿಂದಲೇ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಕಟವಾಗುವ ಚುನಾವಣಾ ಜಾಹೀರಾತು ಮತ್ತು ಸಂದೇಹಾಸ್ಪದ ಪೇಡ್‌ನ್ಯೂಸ್‌ಗಳ ಮೇಲೆ ನಿಗಾ ವಹಿಸಲಾಗುತ್ತದೆ ಎಂದು ತಿಳಿಸಿದರು.
ಸಮಿತಿಯು ಮುದ್ರಣ, ವಿದ್ಯುನ್ಮಾನ ಮಾಧ್ಯಮಗಳಾದ ಕೇಬಲ್ ಚಾನೆಲ್, ಟಿವಿ ಚಾನೆಲ್‌ಗಳು, ರೇಡಿಯೋ ಹಾಗೂ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇಡಲಿದ್ದು, ಅನುಮತಿ ಪಡೆಯದೇ ಚುನಾವಣಾ ಜಾಹೀರಾತು ನೀಡಿರುವುದು ಕಂಡುಬಂದಲ್ಲಿ ಸಂಬಂಧಪಟ್ಟವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲಿದೆ.
ಯಾವುದೇ ಪಕ್ಷ ಅಥವಾ ಅಭ್ಯರ್ಥಿಗಳ ಪರವಾಗಿ ಜಾಹೀರಾತುಗಳನ್ನು ಪ್ರಕಟಿಸಿದ ಸಂದರ್ಭದಲ್ಲಿ ಆಯಾ ಮಾಧ್ಯಮಗಳಿಗೆ ನಿಗದಿಪಡಿಸಲಾದ ಜಾಹಿರಾತು ದರ ಅಥವಾ ಆಯಾ ಮಾಧ್ಯಮಗಳ ವಾಸ್ತವಿಕ ವಾಣಿಜ್ಯ ಜಾಹೀರಾತು ದರ ಪರಿಗಣಿಸಿ ಅದರ ಮೊತ್ತವನ್ನು ಪಕ್ಷ ಅಥವಾ ಅಭ್ಯರ್ಥಿಯ ಚುನಾವಣಾ ವೆಚ್ಚಕ್ಕೆ ಸೇರಿಸಲು ಚುನಾವಣಾ ವೆಚ್ಚ ವೀಕ್ಷಕರಿಗೆ ಸಮಿತಿಯು ಮಾಹಿತಿ ನೀಡಲಿದೆ.
ಅದೇ ರೀತಿ ಯಾವುದೇ ಮಾಧ್ಯಮದಲ್ಲಿ ಪ್ರಸಾರವಾದ ಚುನಾವಣಾ ಜಾಹಿರಾತುಗಳಿಗೆ ಪೂರ್ವಾನುಮತಿ ಪಡೆಯಲಾಗಿದೆಯೇ ಎಂಬುದನ್ನು ಪರಿಶೀಲಿಸಲಾಗವುದು. ಅಭ್ಯರ್ಥಿಯ ಅಥವಾ ಪಕ್ಷದ ಒಪ್ಪಿಗೆಯಿಂದ ನೀಡಲಾಗಿರುವ ಜಾಹಿರಾತುಗಳ ವೆಚ್ಚವನ್ನು ಸಂಬಂಧಪಟ್ಟ ಪಕ್ಷ ಅಥವಾ ಅಭ್ಯರ್ಥಿಯ ವೆಚ್ಚಕ್ಕೆ ಸೇರಿಸಲಾಗುತ್ತದೆ ಎಂದು ವಿವರಿಸಿದರು.
ಮೀಡಿಯಾ ಮಾನಿಟರಿಂಗ್ ಸೆಲ್: ಚುನಾವಣಾ ಜಾಹೀರಾತುಗಳ ಪರಿಶೀಲನೆಗಾಗಿ ವಾರ್ತಾಭವನ ಉಪ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ನ್ಯಾಯಾಲಯ ಆವರಣ (ದೂ. ಸಂಖ್ಯೆ ೦೮೩೧-೨೪೨೦೩೪೪) ಕಚೇರಿಯಲ್ಲಿ ಮೀಡಿಯಾ ಮಾನಿಟರಿಂಗ್ ಕೇಂದ್ರ ಸ್ಥಾಪಿಸಲಾಗಿರುತ್ತದೆ.
ಜಾಹಿರಾತುಗಳನ್ನು ಪ್ರಕಟ ಅಥವಾ ಪ್ರಸಾರ ಮಾಡಲು ಪೂರ್ವಾನುಮತಿ ಪಡೆಯಲು ಈ ಕೇಂದ್ರದಲ್ಲಿ ಅರ್ಜಿ ನಮೂನೆಗಳು ಲಭ್ಯವಿರುತ್ತವೆ. ಅಭ್ಯರ್ಥಿಗಳು ಅಥವಾ ರಾಜಕೀಯ ಪಕ್ಷಗಳು ಭರ್ತಿ ಮಾಡಿದ ಅರ್ಜಿ ಜತೆಗೆ ಜಾಹೀರಾತಿನ ಎರಡು ಸಿಡಿ ಹಾಗೂ ಹಸ್ತಪ್ರತಿ (ಸ್ಕ್ರಿಪ್ಟ್) ಸಲ್ಲಿಸಬೇಕು. ಎಂಸಿಎಂಸಿ ಸಮಿತಿಯು ಅರ್ಜಿಗಳನ್ನು ಪರಿಶೀಲಿಸಿ, ಪೂರ್ವಾನುಮತಿ ನೀಡಲಿದೆ ಎಂದು ಗುರುನಾಥ ಕಡಬೂರ ವಿವರಿಸಿದರು.
ಚಿಕ್ಕೋಡಿ ಆರ್.ಡಿ.ಕಾಲೇಜಿನ ಉಪನ್ಯಾಸಕ ಎನ್.ವಿ. ಶಿರಗಾಂವಕರ, ಇವಿಎಂ ಹಾಗೂ ವಿವಿಪ್ಯಾಟ್ ಕುರಿತು ಪ್ರಾತ್ಯಕ್ಷಿಕೆ ನೀಡಿದರು.
ಹೆಚ್ಚುವರಿ ಪ್ರಾದೇಶಿಕ ಆಯುಕ್ತ ರಮೇಶ ಕಳಸದ ಪ್ರಾಸ್ತಾವಿಕ ಮಾತನಾಡಿದರು. ಅಪರ ಜಿಲ್ಲಾಧಿಕಾರಿ ಡಾ. ಬೂದೆಪ್ಪ ಎಚ್.ಬಿ., ಪಾಲಿಕೆ ಆಯುಕ್ತ ಇಬ್ರಾಹಿಂ ಮೈಗೂರ, ನಗರಾಭಿವೃದ್ಧಿ ಆಯುಕ್ತ ಪ್ರೀತಂ ನಸಲಾಪುರೆ, ಎಂಸಿಸಿ ನೋಡಲ್ ಅಧಿಕಾರಿ ಜಗದೀಶ ರೂಗಿ ಉಪಸ್ಥಿತರಿದ್ದರು.

Related Articles

Back to top button