ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಗೌಡರಿಗೆ ಸುಂದರವಾದ ಹುಡಿಗಿ ನೊಡಿದರೆ ಮದುವೆಗೆ ಸಿದ್ದರಾಗುತ್ತಾರೆ. ವಿಟಿಯು ವಿಭಜನೆ ವಿಷಯದಲ್ಲಿಯೂ ಹೀಗೆ ಆಗಿದೆ ಎಂದು ಉನ್ನತ ಶಿಕ್ಷಣ ಖಾತೆಯ ಮಾಜಿ ಸಚಿವ, ಕಾಂಗ್ರೆಸ್ ನಾಯಕ ಬಸವರಾಜ ರಾಯರೆಡ್ಡಿ ವ್ಯಂಗ್ಯವಾಡಿದ್ದಾರೆ.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ವಿಭಜನೆ ನಿರ್ಧಾರದಿಂದ ಆಘಾತಕ್ಕೊಳಗಾಗಿ ಬೆಳಗಾವಿಗೆ ಆಗಮಿಸಿ ಪತ್ರಿಕಾಗೋಷ್ಠಿ ನಡೆಸಿದ ರಾಯರೆಡ್ಡಿ, ಈ ಬೆಳವಣಿಗೆ ಒಂದು ಕಪ್ಪುಚುಕ್ಕೆ, ಅಪಾಯಕಾರಿ ಬೆಳವಣಿಗೆ ಎಂದರು.
ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ವಿಟಿಯುದಲ್ಲಿ ಉಳಿದುಕೊಂಡಿದ್ದರು. ಬಹುಶಃ ಆಗ ಅವರ ಕಣ್ಣು ಬಿದ್ದಿದೆ. ಸುಂದರ ಹುಡುಗಿ ಮೇಲೆ ಕಣ್ಣು ಹಾಕುವುದು ಅವರ ಚಾಳಿ. ಈ ಹುಡುಗಿಯ ಮೇಲೆ ಹಾಕಿರುವ ಕಣ್ಣು ತೆಗೆಯಬೇಕು ಎಂದು ರಾಯರೆಡ್ಡಿ ಆಗ್ರಹಿಸಿದರು.
ವಿಟಿಯು ವಿಭಜಿಸಿ ಹಾಸನದಲ್ಲಿ ಒಂದು ವಿವಿ ಸ್ಥಾಪಿಸಲು ಮುಂದಾಗಿದ್ದಾರೆ. ಇಂತಹ ಏಕಪಕ್ಷೀಯ ನಿರ್ಧಾರ ಸರಿಯಲ್ಲ. ಹಾಗೆ ಮಾಡಿದರೆ ವಿಟಿಯು ಮುಚ್ಚಿದಂತೆಯೇ. ಬಜೆಟ್ ನಿಂದ ಈ ನಿರ್ಧಾರವನ್ನು ತೆಗೆದುಹಾಕಬೇಕು. ದಕ್ಷಿಣ ಕರ್ನಾಟಕ ಭಾಗದ ಶಾಸಕರು ಈ ವಿಷಯದಲ್ಲಿ ಅಡ್ಡಿ ಮಾಡಬಾರದು ಎಂದು ಅವರು ಮನವಿ ಮಾಡಿದರು.
ಕಾಂಗ್ರೆಸ್ ಮುಖಂಡ ಅನಿಲ ಪೋತದಾರ ಪತ್ರಿಕಾಗೋಷ್ಠಿಯಲ್ಲಿ ಇದ್ದರು.