ಪ್ರಗತಿವಾಹಿನಿ ಸುದ್ದಿ, ನವದೆಹಲಿ :
ಅಚ್ಛರಿಯ ಬೆಳವಣಿಗೆಯೊಂದರಲ್ಲಿ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ , ಸಂಸದ ಮುಲಾಯಂ ಸಿಂಗ್ ಯಾದವ್, ನರೇಂದ್ರ ಮೋದಿಯೇ ಮತ್ತೆ ಪ್ರಧಾನಮಂತ್ರಿಯಾಗಲಿ ಎಂದಿದ್ದಾರೆ.
ನರೇಂದ್ರ ಮೋದಿ ಪ್ರಧಾನಿಯಾಗಿ ಎಲ್ಲರನ್ನೂ ಸಂತೋಷಗೊಳಿಸಲು ಶ್ರಮಿಸಿದ್ದಾರೆ. ಆದರೆ ಎಲ್ಲರನ್ನೂ ಸಮಾಧಾನಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ. ನಾನೂ ಅವರನ್ನು ಭೇಟಿಯಾದಾಗಲೆಲ್ಲ ನನ್ನ ಕೆಲಸಗಳಿಗೆ ಅವರು ಉತ್ತಮವಾಗಿ ಸ್ಪಂದಿಸಿದ್ದಾರೆ. ಹಾಗಾಗಿ ಅವರು ಮತ್ತೆ ಪ್ರಧಾನಿಯಾಗಲಿ. ಇಲ್ಲಿರುವ ಎಲ್ಲ ಸಂಸದರೂ ಮತ್ತೆ ಆಯ್ಕೆಯಾಗಿ ಬರಲಿ ಎಂದು ಮುಲಾಯಂ ಹೇಳಿದರು.
ವಿಶೇಷವೆಂದರೆ ಮುಲಾಯಂ ಮಾತನಾಡುವಾಗ ಪಕ್ಕದಲ್ಲೇ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಕುಳಿತಿದ್ದರು. ಮಗ ಅಖಿಲೇಶ ಯಾದವ ಸೇರಿದಂತೆ ವಿರೋಧಿ ನಾಯಕರೆಲ್ಲ ಸೇರಿ ಮಹಾಘಟಬಂಧನ ರಚಿಸಿ ಮೋದಿಯನ್ನು ಸೋಲಿಸಲು ಪ್ರಯತ್ನಿಸುತ್ತಿರುವಾಗ ಮುಲಾಯಂ ಸಿಂಗ್ ಯಾದವ ಮಾತು ಎಲ್ಲರನ್ನೂ ಬೆಚ್ಚಿ ಬೀಳಿಸಿತು.