ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಯುವಜನತೆ ನಮ್ಮ ನಾಡಿನ ಶಕ್ತಿ. ಮುಂದಿನ ಭವ್ಯ ಭಾರತದ ಭವಿಷ್ಯ ಯುವ ಜನರ ಮೇಲೆ ನಿಂತಿದೆ. ಸದೃಢ ರಾಷ್ಟ್ರ ನಿರ್ಮಾಣಕ್ಕಾಗಿ ಯುವಕರು ಹಾಗೂ ಯುವ ಸಂಘಟನೆಗಳು ಕ್ರಿಯಾಶೀಲವಾಗಿ ಸಮುದಾಯಪರ ಹಾಗೂ ಸಾರ್ವಜನಿಕರಿಗೆ ಒಳಿತಾಗುವ ಕಾರ್ಯ ಮಾಡಬೇಕು ಎಂದು ಸಂಸದ ಸುರೇಶ ಅಂಗಡಿ ಕರೆ ನೀಡಿದರು.
ನೆಹರು ಯುವ ಕೇಂದ್ರದ ವತಿಯಿಂದ ನಗರದ ಮಹೇಶ್ವರಿ ಅಂಧ ಮಕ್ಕಳ ಶಾಲೆಯ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಬೆಳಗಾವಿ ಜಿಲ್ಲಾ ಮಟ್ಟದ ಯುವ ಸಮಾವೇಶ, ಮತದಾನ ಜಾಗೃತಿ, ಯುವ ಮಂಡಳಿ ಪ್ರಶಸ್ತಿ ಪ್ರದಾನ ಹಾಗೂ ಕ್ರೀಡಾ ಸಾಮಗ್ರಿಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿ ಬೆಳಗಾವಿ ಪ್ರಾದೇಶಿಕ ಸಾರಿಗೆ ಆಯುಕ್ತ ಶಿವಾನಂದ ಮಗದುಮ್ ಮಾತನಾಡಿ, ದೇಶ ನನಗೆ ಏನು ಕೊಟ್ಟಿದೆ ಅನ್ನುವುದಕ್ಕಿಂತ ದೇಶಕ್ಕಾಗಿ ನಾನು ಏನು ಮಾಡಿದೆ ಎಂಬ ಉಕ್ತಿಯಂತೆ ಇಂದಿನ ಯುವ ಜನರು ಕ್ರೀಡೆ, ಸಾಂಸ್ಕೃತಿಕ, ರಾಷ್ಟ್ರೀಯ ಭಾವೈಕ್ಯತೆಯ ಭಾವನೆಯಿಂದ ದೇಶ ಮುನ್ನಡೆಸುವ ದಿಕ್ಸೂಚಿಯಾಗಬೇಕು ಎಂದರು.
ಕೆಎಲ್ಇ ವಿವಿ ಎನ್ನೆಸ್ಸೆಸ್ ಅಧಿಕಾರಿ ಎಂ.ಎಸ್. ಶಿವಸ್ವಾಮಿ ಮತದಾನ ಜಾಗೃತಿ ಕುರಿತು, ಸಮೀವುಲ್ಲಾ ಅವರು ಪ್ರಧಾನ ಮಂತ್ರಿ ಕೌಶಲ ಭಾರತ ಯೋಜನೆ ಬಗ್ಗೆ ಹಾಗೂ ರಾಣಿ ಚನ್ನಮ್ಮ ವಿವಿ ಎನ್ನೆಸ್ಸೆಸ್ ಅಧಿಕಾರಿ ಡಾ. ಎಸ್.ಓ. ಹಲಸಗಿ ರಾಷ್ಟ್ರ ನಿರ್ಮಾಣದಲ್ಲಿ ಯುವ ಜನರ ಪಾತ್ರ ಕುರಿತು ಉಪನ್ಯಾಸ ನೀಡಿದರು.
ನೆಹರು ಯುವ ಕೇಂದ್ರ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಬೆಳಗಾವಿ ಜಿಲ್ಲೆಯನ್ನು ಪ್ರತಿನಿಧಿಸಿ ರಾಷ್ಟ್ರದಲ್ಲಿ ತೃತೀಯ ಸ್ಥಾನ ಪಡೆದ ಪ್ರಣವ ಅಧ್ಯಾಪಕ ಅವರನ್ನು ಸನ್ಮಾನಿಸಲಾಯಿತು. ೨೦೧೮-೧೯ ನೇ ಸಾಲಿನ ಬೆಳಗಾವಿ ಜಿಲ್ಲಾ ಮಟ್ಟದ ಯುವ ಮಂಡಳ ಪ್ರಶಸ್ತಿಯನ್ನು ಚಿಕ್ಕೋಡಿ ತಾಲೂಕು ಬಂಬಲವಾಡದ ಶ್ರೀ ಬ್ರಹ್ಮದೇವ ಜಾನಪದ ನಾಟಕ ಕಲಾ ಆರಾಧನಾ ಸಂಘಕ್ಕೆ ನೀಡಲಾಯಿತು. ಜಿಲ್ಲೆಯ ೩೫ ಯುವ ಸಂಘಗಳಿಗೆ ಕ್ರೀಡಾ ಸಾಮಗ್ರಿಗಳನ್ನು ಸಂಸದ ಸುರೇಶ ಅಂಗಡಿ ವಿತರಿಸಿದರು. ಭಾಷಣ ಸ್ಪರ್ಧೆಯಲ್ಲಿ ಉತ್ತಮ ನಿರ್ಣಯ ನೀಡಿದ ನಾಗರತ್ನ ಪರಂಡೆ, ಸುರೇಖಾ ಪಾಟೀಲ ಹಾಗೂ ಅಶ್ವಿನಿ ನರಸನ್ನವರ ಅವರನ್ನು ಸತ್ಕರಿಸಲಾಯಿತು.
ರಾಷ್ಟ್ರೀಯ ಯುವ ಪ್ರಶಸ್ತಿ ವಿಜೇತ ಮಲ್ಲೇಶ ಚೌಗಲೆ, ಭರತ ಕಲಾಚಂದ್ರ ಉಪಸ್ಥಿತರಿದ್ದರು. ನಿವೃತ್ತ ಯುವ ಸಮನ್ವಯ ಅಧಿಕಾರಿ ಎಸ್.ಯು. ಜಮಾದಾರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಯುವ ಸಮನ್ವಯ ಅಧಿಕಾರಿಗ ಡಿ. ದಯಾನಂದ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದ ಆರಂಭದಲ್ಲಿ ಪುಲ್ವಾಮಾದಲ್ಲಿ ವೀರ ಮರಣ ಹೊಂದಿದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ರಂಗದರ್ಶನ ಕಲಾ ತಂಡ ಚಿಕ್ಕೋಡಿಯವರು ನಾಡಗೀತೆ ಹಾಗೂ ಜಾಗೃತಿ ಗೀತೆಗಳನ್ನು ಹಾಡಿದರು. ಯುವ ಕೇಂದ್ರದ ಲೇಖಪಾಲಕ ಆರ್.ಆರ್. ಮುತಾಲಿಕ ದೇಸಾಯಿ ಸ್ವಾಗತಿಸಿ ಪರಿಚಯಿಸಿದರು. ಜಿಲ್ಲೆಯ ೨೫೦ ಯುವಕ, ಯುವತಿಯರು ಭಾಗವಹಿಸಿದ್ದರು.