ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಭ್ರಷ್ಟಾಚಾರ ಆರೋಪ ಹಿನ್ನೆಲೆಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯದ ಕುಲಸಚಿವ ಜಗನ್ನಾಥ ರೆಡ್ಡಿ ಅವರನ್ನು ಅಮಾನತುಗೊಳಿಸಲಾಗಿದೆ.
ಅಕ್ರಮ ನೇಮಕಾತಿ, ಗುತ್ತಿಗೆ ಅವ್ಯವಹಾರ ಸೇರಿದಂತೆ ಸುಮಾರು 200 ಕೋಟಿ ರೂ. ಅವ್ಯವಹಾರದ ಆರೋಪದ ಮೇಲೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ.
ಕುಲಾಧಿಪತಿಯೂ ಆಗಿರು ರಾಜ್ಯಪಾಲರ ಸೂಚನೆಯಂತೆ ಕುಲಪತಿ ಪ್ರೊ.ಕರಿಸಿದ್ದಪ್ಪ ಅವರು ಕುಲಸಚಿವ ಜಗನ್ನಾಥ ರೆಡ್ಡಿ ಅವರನ್ನು ಅಮಾನತು ಮಾಡಿದ್ದಾರೆ. ಶುಕ್ರವಾರ ರಾತ್ರಿಯೇ ಇ-ಮೇಲ್ ಮೂಲಕ ಅಮಾನತು ಆದೇಶವನ್ನು ಜಗನ್ನಾಥ ರೆಡ್ಡಿ ಅವರಿಗೆ ತಲುಪಿಸಲಾಗಿದೆ.
ಜಗನ್ನಾಥ ರಡ್ಡಿ ವಿರುದ್ಧದ ಅಕ್ರಮಗಳ ಆರೋಪದ ಬಗ್ಗೆ ತನಿಖೆ ನಡೆಸುವಂತೆ ಕಳೆದ ಜನವರಿ ತಿಂಗಳಲ್ಲಿ ಆದೇಶ ನೀಡಲಾಗಿತ್ತು. ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿತ್ತು. ಸಮಿತಿಯ ವರದಿ ಮತ್ತು ರಾಜ್ಯಪಾಲರ ಶಿಫಾರಸಿನ ಅನ್ವಯ ಎರಡು ನೋಟಿಸ್ಗಳನ್ನು ನೀಡಿ, ಕುಲಸಚಿವ ಜಗನ್ನಾಥ ರೆಡ್ಡಿ ಅವರನ್ನು ಅಮಾನತು ಮಾಡಲಾಗಿದೆ.