Latest

ಸಕ್ರಿಯ ನ್ಯಾಯಾಂಗವು ನಮ್ಮ ಪ್ರಜಾಪ್ರಭುತ್ವವನ್ನು ಬಲಶಾಲಿಯಾಗಿಸಿದೆ -ನ್ಯಾಯಾಧೀಶ ಎಚ್. ಪಿ. ಸಂದೇಶ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

“ಜೀವನದಲ್ಲಿ’ಹಣವೊಂದೇ ಎಲ್ಲವೂ ಅಲ್ಲ”, ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಎಚ್. ಪಿ. ಸಂದೇಶ್ ಹೇಳಿದರು.

ಅವರು ಬೆಳಗಾವಿಯ ಪ್ರತಿಷ್ಠಿತ ಕರ್ನಾಟಕ ಕಾನೂನು ಸಂಸ್ಥೆಯ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ, ೨೦೧೯ರ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು. 

ಇವತ್ತಿನ ಯುವ ಪೀಳಿಗೆಯು ದೇಶದ ಭವಿಷ್ಯದ ಆಶಾಕಿರಣವಾಗಿದೆ. ಅವರು ಹಣವನ್ನು ಬೆನ್ನಟ್ಟಿ ಹೋಗಬಾರದು.  ಸಕ್ರಿಯ ನ್ಯಾಯಾಂಗವು ನಮ್ಮ ಪ್ರಜಾಪ್ರಭುತ್ವವನ್ನು ಬಲಶಾಲಿಯಾಗಿಸಿದೆ. ನಾವು ಜಾತೀಯತೆ, ಭ್ರಷ್ಟಾಚಾರ ಮತ್ತು ಅಪರಾಧಗಳಿಂದ ದೂರವಿರಬೇಕೆಂದು ಅವರು ಹೇಳಿದರು.

Home add -Advt

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಆರ್. ಜೆ. ಸತೀಶ್ ಸಿಂಗ್ ಅತಿಥಿಗಳಾಗಿದ್ದರು.  ಕಾನೂನು ವಿದ್ಯಾರ್ಥಿಗಳು ಸಾಮಾಜಿಕ ಪ್ರಜ್ಞೆಯನ್ನು ಹೊಂದಿರಬೇಕೆಂದು ಅವರು ಕರೆ ನೀಡಿದರು. ಒಬ್ಬ ಒಳ್ಳೆಯ ಮನುಷ್ಯತ್ವವನ್ನು ಹೊಂದಿರುವ ವ್ಯಕ್ತಿಯೇ ಒಬ್ಬ ಒಳ್ಳೆಯ ನ್ಯಾಯವಾದಿಯಾಗಬಲ್ಲ, ಹಾಗೂ ಒಳ್ಳೆಯ ನ್ಯಾಯವಾದಿಗಳು ಒಳ್ಳೆಯ ದೇಶವನ್ನು ಕಟ್ಟಬಹುದೆಂದು ಸತೀಶ್ ಸಿಂಘ್ ಅಭಿಪ್ರಾಯಪಟ್ಟರು. ಶಿಕ್ಷಣವೆಂದರೆ ಕೇವಲ ಪದವಿಯಾಗಿರದೇ ಶಾರೀರಿಕ, ಮಾನಸಿಕ ಹಾಗೂ ಬೌದ್ಧಿಕ ತರಬೇತಿಯಾಗಿರಬೇಕೆಂದು ಅವರು ಹೇಳಿದರು.

ಗೋವಾದ ವ್ಹಿ. ಎಂ. ಸಾಳಗಾವಕರ್ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಂ. ಆರ್. ಕೆ. ಪ್ರಸಾದ  ಸಹ ಅತಿಥಿಗಳಾಗಿದ್ದರು. ಅವರು  ಕಾನೂನಿನ ಅಭ್ಯಾಸದೊಂದಿಗೆ ವಕೀಲಿ ವೃತ್ತಿಯ ಕೌಶಲ್ಯಗಳನ್ನು ಅರಿತುಕೊಳ್ಳಬೇಕೆಂದು ಉಪದೇಶಿಸಿದರು.

ಕರ್ನಾಟಕ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ. ಈಶ್ವರ ಭಟ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪರೀಕ್ಷೆಯೇ ಆಗಿರಲಿ ಜೀವನವೇ ಆಗಿರಲಿ ಯಾವುದೇ ಸಮಸ್ಯೆಗೆ ಅದು ಎಷ್ಟೇ ಜಟಿಲ ಹಾಗೂ ಕಠಿಣವಾಗಿರಲಿ, ಒಂದು ಸಮಾಧಾನವಿದ್ದೇ ಇರುತ್ತದೆ ಹಾಗೂ ಸರಿಯಾದ ಪರಿಶ್ರಮದಿಂದ ಅದನ್ನು ಕಂಡುಕೊಂಡು ಸಮಸ್ಯೆಯನ್ನು ಬಗೆಹರಿಸಬಹುದು ಎಂದು ಅವರು ಹೇಳಿದರು. 

ಮಹಾವಿದ್ಯಾಲಯದ ಮಾಜಿ ವಿದ್ಯಾರ್ಥಿ ಹಾಗೂ ಭಾರತದ ಹಾಲಿ ಅಟಾರ್ನಿ ಜನರಲ್, ಪ್ರಖ್ಯಾತ ವಕೀಲ ಪದ್ಮವಿಭೂಷಣ  ಕೆ. ಕೆ. ವೇಣುಗೋಪಾಲ ೩೦ ಲಕ್ಷ ರೂ. ಗಳ ನಿಧಿಯನ್ನು ಸ್ಥಾಪಿಸಿದ್ದು ಅದರ ಬಡ್ಡಿ ಹಾಗೂ ಕರ್ನಾಟಕ ಕಾನೂನು ಸಂಸ್ಥೆಯ ಆಡಳಿತ ಮಂಡಳಿಯ ವಂತಿಗೆಯ ಸಹಾಯದಿಂದ ಬೆಳಗಾವಿಯ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯವು ಕೆ. ಕೆ. ವೇಣುಗೋಪಾಲರ ತಂದೆ  ಖ್ಯಾತ ವಕೀಲರೂ, ಸಂವಿಧಾನ ತಜ್ಞರೂ ಆಗಿದ್ದ  ಎಂ. ಕೆ. ನಂಬ್ಯಾರರ ನೆನಪಿಗಾಗಿ ಅವರ ಹೆಸರಿನಲ್ಲಿ ಪ್ರತಿವರ್ಷ ಈ ಸ್ಪರ್ಧೆಯನ್ನು ಆಯೋಜಿಸುತ್ತದೆ.

ಶ್ವೇತಾ ದೇಶಪಾಂಡೆ  ಸ್ವಾಗತಿಸಿದರು. ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷರಾದ  ಪ್ರಮೋದ ಕಠಾವಿ ಎಚ್. ಪಿ. ಸಂದೇಶ್ ಅವರನ್ನು ಗೌರವಿಸಿದರು. ಡಾ. ಈಶ್ವರ ಭಟ್ ಅವರನ್ನು ಪ್ರಾಚಾರ್ಯೆ ಡಾ.ಸಂಧ್ಯಾ ಎಚ್. ವ್ಹಿ. ಅವರು ಗೌರವಿಸಿದರು.

ಸಿಂಬಾಯಸಿಸ್ ಲಾ ಸ್ಕೂಲ್, ಪುಣೆಯ ತಂಡವು (ಕು. ರಿಶಿಕಾ ಖಾರ್ಬಾಂದಾ, ಕು. ಭವ್ಯಾ ಉಪಾಧ್ಯಾಯ ಮತ್ತು ಕು. ಪ್ರಾಂಜಲ್ ಗುಪ್ತಾ) ರೂ. ೩೦,೦೦೦ದ ನಗದು ಪುರಸ್ಕಾರ ಮತ್ತು ಟ್ರೋಫಿಯನ್ನು ಒಳಗೊಂಡ ಪ್ರಥಮ ಬಹುಮಾನವನ್ನು ಪಡೆದರು.

ಸಿಂಬಾಯಸಿಸ್ ಲಾ ಸ್ಕೂಲ್, ಹೈದರಾಬಾದಿನ ತಂಡವು (ಕು. ನಿರಂಜನಿ ಎಸ್. ನಾಯರ್, ಕು. ಆರ್ಯಾ ಎಸ್. ಪುಥ್ರಾನ್ ಮತ್ತು ಕು. ಕಾವ್ಯಾ ಕೃಷ್ಣನ್)  ರೂ. ೨೦,೦೦೦ದ ನಗದು ಪುರಸ್ಕಾರ ಮತ್ತು ಟ್ರೋಫಿಯನ್ನು ಒಳಗೊಂಡ ದ್ವಿತೀಯ ಬಹುಮಾನವನ್ನು ಪಡೆದರು.

ಇನ್ನುಳಿದ ಬಹುಮಾನಗಳು ಈ ಕೆಳಗಿನಂತಿವೆ:

ಮೌಸೂರಿನ ಜೆ. ಎಸ್. ಎಸ್. ಕಾನೂನು ಮಹಾವಿದ್ಯಾಲಯದ ಪಿ. ಎಸ್. ವೀರೇಶ್ ಅವರು ರೂ. ೧೦,೦೦೦ ಮತ್ತು ಟ್ರೋಫಿಯನ್ನು ಒಳಗೊಂಡ ಅತ್ಯುತ್ತಮ ವಾಕ್ಪಟು (ಪುರುಷ) ಪ್ರಶಸ್ತಿಯನ್ನು ಪಡೆದರು.

ಸಿಂಬಾಯಸಿಸ್ ಲಾ ಸ್ಕೂಲ್, ಪುಣೆಯ  ರಿಶಿಕಾ ಖಾರ್ಬಾಂದಾ ಅವರು ರೂ. ೧೦,೦೦೦ ಮತ್ತು ಟ್ರೋಫಿಯನ್ನು ಒಳಗೊಂಡ ಅತ್ಯುತ್ತಮ ವಾಕ್ಪಟು (ಮಹಿಳೆ) ಪ್ರಶಸ್ತಿಯನ್ನು ಪಡೆದರು.

ಕೇರ‍ಳದ ತಿರುವನಂತಪುರದ ಸರ್ಕಾರಿ ಕಾನೂನು ಮಹಾವಿದ್ಯಾಲಯಕ್ಕೆ ರೂ. ೧೦,೦೦೦ ಮತ್ತು ಟ್ರೋಫಿಯನ್ನು ಒಳಗೊಂಡ ಅತ್ಯುತ್ತಮ ಲಿಖಿತ ವಾದ ಮಂಡನೆಗಾಗಿ ಇರುವ ಪ್ರಶಸ್ತಿಯು ಸಿಕ್ಕಿತು.

ಕರ್ನಾಟಕ ಕಾನೂನು ಸಂಸ್ಥೆಯ ಸದಸ್ಯರು, ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದ ಎಲ್ಲಾ ಶಿಕ್ಷಕರು, ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಮತ್ತು ಸ್ಪರ್ಧೆಯಲ್ಲಿ ಭಾಗವಹಿಸಿರುವ ೧೯ ತಂಡಗಳ ೫೭ ಜನ ಸ್ಪರ್ಧಿಗಳು ಸಭೆಯಲ್ಲಿ ಹಾಜರಿದ್ದರು.

 

Related Articles

Back to top button