Kannada NewsKarnataka NewsLatestPolitics

*ತಮಿಳುನಾಡಿಗೆ ಕಾವೇರಿ ನೀರು ಹರಿಸಲು CWRC ಆದೇಶ; ರಾಜ್ಯದ ನೀರಿನ ಪರಿಸ್ಥಿತಿ ಪರಿಶೀಲಿಸಿದ ನಂತರ ಮುಂದಿನ ತೀರ್ಮಾನ: ಸಿಎಂ ಡಿ ಕೆ ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: “ರಾಜ್ಯದ ನೀರಿನ ಪರಿಸ್ಥಿತಿಯನ್ನು ಕೂಲಂಕುಷವಾಗಿ ಪರಿಶೀಲಿಸಿದ ನಂತರ ತಮಿಳುನಾಡಿಗೆ 12,000 ಕ್ಯೂಸೆಕ್ಸ್ ಕಾವೇರಿ ನೀರು ಹರಿಸುವ, ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಆದೇಶದ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು” ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಮಂಗಳವಾರ ಪ್ರತಿಕ್ರಿಯೆ ನೀಡಿದರು.

Home add -Advt

“ನ್ಯಾಯಾಲಯದ ಆದೇಶವನ್ನು ಪಾಲಿಸುವುದರ ಜೊತೆಗೆ ರೈತರ ಹಿತಾಸಕ್ತಿಯನ್ನು ರಕ್ಷಿಸುವ ಅಗತ್ಯವನ್ನು ಅವರು ಪ್ರತಿಪಾದಿಸಿದರು. ಎರಡೂ ಅಂಶಗಳನ್ನು ಪರಿಗಣಿಸಿ, ಈ ವಿಷಯದ ಕುರಿತು ನೀರಾವರಿ ಸಚಿವರೊಂದಿಗೆ ಈಗಾಗಲೇ ಚರ್ಚಿಸಿರುವುದಾಗಿ” ಎಂದು ಅವರು ತಿಳಿಸಿದರು.

“ರಾಜ್ಯದ ನದಿಗಳಿಗೆ ಹರಿದು ಬರುತ್ತಿರುವ ಒಳಹರಿವನ್ನು ನಿಕಟವಾಗಿ ಗಮನಿಸಲಾಗುತ್ತಿದೆ. ರೈತರೊಂದಿಗೆ ಸ್ಥಳೀಯ ಸಭೆಗಳನ್ನು ಮಾಡಿ ಬೆಳೆಗಳ ಬಗ್ಗೆ ಚರ್ಚಿಸಬೇಕು. ಕೇವಲ ಕಾವೇರಿ ಮಾತ್ರವಲ್ಲದೆ ತುಂಗಭದ್ರಾ ಮತ್ತು ಆಲಮಟ್ಟಿ ಸೇರಿದಂತೆ ಎಲ್ಲಾ ಜಲಾಶಯಗಳಲ್ಲಿನ ನೀರು ಸಂಗ್ರಹಣೆಯನ್ನು ಗಮನದಲ್ಲಿಟ್ಟುಕೊಂಡು ಬೆಳೆ ಬೆಳೆಯುವ ಕುರಿತು ನಿರ್ಧಾರ ಕೈಗೊಳ್ಳಬೇಕು” ಎಂದು ಹೇಳಿದರು.

ಸಂಯಮದಿಂದಿದ್ದರೆ ಎಲ್ಲ ಸಮಸ್ಯೆಗಳೂ ಸೌಹಾರ್ದಯುತವಾಗಿ ಬಗೆಹರಿಯಲಿವೆ

ರೈತರು ಪ್ರತಿಭಟನೆ ನಡೆಸುವ ಸಾಧ್ಯತೆ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, “ನಾನು ಪಾರದರ್ಶಕವಾಗಿ ಕೆಲಸ ಮಾಡುತ್ತೇನೆ. ರಾಜಕೀಯ ಮಾಡುವವರು, ಮಾಧ್ಯಮಗಳ ಮುಂದೆ ಮಾತನಾಡುವವರಿಗಾಗಿ ನಿರ್ಧಾರ ಕೈಗೊಳ್ಳುವುದಿಲ್ಲ. ಯಾರೂ ನೀರನ್ನು ತಡೆಹಿಡಿಯಲು ಸಾಧ್ಯವಿಲ್ಲ. ಜನರು ಸಂಯಮದಿಂದಿರಬೇಕು. ನಾವು ನಿಮ್ಮೊಂದಿಗಿದ್ದೇವೆ, ನಿಮಗಾಗಿಯೇ ಇದ್ದೇವೆ. ರೈತರನ್ನು ರಕ್ಷಿಸಲು ಜನರು ನಮಗೆ ಅಧಿಕಾರ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಯಾವುದೇ ರೈತರಿಗೂ ತೊಂದರೆಯಾಗಲು ನಾವು ಬಿಡುವುದಿಲ್ಲ. ನಾವು ಸಮಾಧಾನದಿಂದಿದ್ದರೆ, ಎಲ್ಲ ಸಮಸ್ಯೆಗಳೂ ಸೌಹಾರ್ದಯುತವಾಗಿ ಬಗೆಹರಿಯಲಿವೆ. ಪ್ರಕೃತಿಯೇ ನಮ್ಮನ್ನು ಕಾಪಾಡುತ್ತದೆ” ಎಂದರು.

ಪಕ್ಷದ ಮುಂದಿನ ಯೋಜನೆಗಳ ಕುರಿತು ಚರ್ಚಿಸಲು ನಾಳೆ ಸಭೆ

ಬುಧವಾರ ಕರೆಯಲಾಗಿರುವ ಸಚಿವರುಗಳ ಸಭೆ ಬಗ್ಗೆ ಕೇಳಿದಾಗ, “ಮಾರ್ಗದರ್ಶನ ನೀಡಲು ಮತ್ತು ಪಕ್ಷದ ಮುಂದಿನ ಯೋಜನೆಗಳ ಕುರಿತು ಚರ್ಚಿಸಲು ಸಚಿವರು ಹಾಗೂ ಪಕ್ಷದ 15 ನಾಯಕರುಗಳೊಂದಿಗೆ ಬುಧವಾರ ರಾಜಕೀಯ ಸಭೆಯನ್ನು ಕರೆಯಲಾಗಿದೆ. ಗುರುವಾರ ಸಂಪುಟ ಸಭೆ ನಿಗದಿಯಾಗಿದೆ” ಎಂದು ತಿಳಿಸಿದರು.

Related Articles

Back to top button