ಪ್ರಗತಿವಾಹಿನಿ ಸುದ್ದಿ, ಅಗಸಗಿ;
ಬೆಳಗಾವಿ ತಾಲೂಕಿನ ಹೊಸ ವಂಟಮೂರಿ ಗ್ರಾಮದಲ್ಲಿ 2018 ಡಿ 13 ರಂದು ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದ ಬನ್ನೆಪ್ಪಾ ಪಾಟೀಲನನ್ನು ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿ ಮಾರಕಾಸ್ತ್ರಗಳಿಂದ ಇರಿದು ಕೊಲೆ ಮಾಡಲಾಗಿತ್ತು.
ಕೊಲೆಗೆ ಸಂಬಂಧಿಸಿದಂತೆ ಸುಮಾರು ೧೬ ಜನರ ಮೇಲೆ ಎಫ್ ಐ ಆರ್ ದಾಖಲಾಗಿತ್ತು. ಅದರಲ್ಲಿ ೪ ಜನರನ್ನು ಬಂಧಿಸಿದ ಪೋಲಿಸರು ಇನ್ನುಳಿದ ೧೨ ಜನರ ಬಂಧನಕ್ಕೆ ಬಲೆ ಬೀಸಿದ್ದರು. ಖಚಿತ ಮಾಹಿತಿ ಆಧಾರದ ಮೇಲೆ ಇಂದು ಕಾಕತಿ ಪೊಲೀಸ್ ಠಾಣೆಯ ಸಿ ಪಿ ಐ ಶ್ರೀಶೈಲ ಕೌಜಲಗಿ , ಪಿ ಐ ಅರ್ಜುನ ಹಂಚಿನಮನಿ , ಅಡಿವೆಪ್ಪಾ ಕುಂಡೆದ , ನಾಗನ್ನವರ ಇನ್ನಿತರರನ್ನೊಳಗೊಂಡ ತಂಡ ರಾಷ್ಟ್ರೀಯ ಹೆದ್ದಾರಿ ೪ ರಲ್ಲಿರುವ ಉಕ್ಕಡ ಗ್ರಾಮದ ಮರಾಠಾ ಮಂಡಳ ಮಹಾವಿದ್ಯಾಲಯದ ಹಿಂದೆ ಹಾಳು ಮನೆಯಲ್ಲಿ ಅವಿತು ಕುಳಿತಿದ್ದ ೬ ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಬಂಧಿತರು ಹೊಸ ವಂಟಮೂರಿಯವರಾಗಿದ್ದಾರೆ. ಮಾರುತಿ ಸತ್ಯಪ್ಪಾ ವನ್ನೂರಿ, ಪೆದ್ದಪ್ಪಾ ಬನ್ನಪ್ಪಾ ಪಾಟೀಲ, ಕೆಂಪಣ್ಣಾ ಪೆದ್ದಪ್ಪಾ ಪಾಟೀಲ, ರಾಯಪ್ಪಾ ಮಾರುತಿ ವನ್ನೂರಿ, ಲಗಮಪ್ಪಾ ಬನ್ನೆಪ್ಪಾ ಪಾಟೀಲ, ರಾಯಪ್ಪಾ ಯಲ್ಲಪ್ಪಾ ವನ್ನೂರಿ ಬಂಧಿತರು.
ಆರೋಪಿಗಳ ವೈದ್ಯಕೀಯ ತಪಾಸಣೆ ನಡೆಸಿ ಹಿಂಡಲಗಾ ಕಾರಾಗೃಹಕ್ಕೆ ಕಳುಹಿಸಲಾಗಿದೆ.